ಶಿಮ್ಲಾ : ಸಹಪಾಠಿ ವಿದ್ಯಾರ್ಥಿನಿ ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ ಮನನೊಂದು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Mental Harassment). ಹಿಮಾಚಲ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಂಡಿ ಜಿಲ್ಲೆಯ ಸುಂದರ್ ನಗರದ ಜವಹರಲಾಲ್ ನೆಹರೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ಅರ್ಪಿತ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ (Crime News).
ಇದರಲ್ಲಿ ಆತ ತನ್ನ ಸಾವಿಗೆ ಸಹಪಾಠಿ ವಿದ್ಯಾರ್ಥಿನಿಯೇ ಕಾರಣ ಎಂದು ಬರೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಮೀರ್ಪುರ್ ಜಿಲ್ಲೆಯ ಭೋರಂಜ್ ಮೂಲದ ಅರ್ಪಿತ್ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಹಾಸ್ಟೆಲ್ನಲ್ಲಿ ತಂಗಿದ್ದ. ಮೇ 30ರಂದು ಅರ್ಪಿತ್ ಹಾಸ್ಟೆಲ್ನ ತನ್ನ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದ. ಮೇ 31ರಂದು ಪ್ರಕರಣ ಬೆಳಕಿಗೆ ಬಂದಿತ್ತು
ತಾಯಿಯ ಆರೋಪ
ಅರ್ಪಿತ್ನ ತಾಯಿ ಮಗನ ಸಾವಿಗೆ ಆತನ ಸಹಪಾಠಿ ಲಾವಣ್ಯ ಕಾರಣ ಎಂದು ಆರೋಪಿಸಿದ್ದಾರೆ. ಆಕೆ ದೈಹಿಕ ಸಂಪರ್ಕ ಬೆಳೆಸುವಂತೆ ನಿರಂತರವಾಗಿ ತನ್ನ ಮಗನಿಗೆ ಕಿರುಕುಳ ನೀಡುತ್ತಿದ್ದಳು ಎಂದು ತಿಳಿಸಿದ್ದಾರೆ. ಲಾವಣ್ಯ ತನಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆತ ಬರೆದ ಡೆತ್ನೋಟ್ ಆಧಾರದಲ್ಲಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಹೆತ್ತವರಿಗೆ ಅರ್ಪಿತ್ ಒಮ್ಮನೇ ಮಗ. ಆತನಿಗೆ ಕಿರಿಯ ಸಹೋದರಿಯೊಬ್ಬಳಿದ್ದಾಳೆ. ಮಗ ಚೆನ್ನಾಗಿ ಓದಿ ಉನ್ನತ ಹುದ್ದೆ ಅಲಂಕರಿಸಬೇಕು ಎನ್ನುವ ಹೆತ್ತವರ ಕನಸು ಇದೀಗ ಯುವತಿಯೊಬ್ಬಳ ಕಿರುಕುಳದಿಂದ ಕಮರಿ ಹೋಗಿದೆ.
ʼʼಹಲವು ಸಮಯಗಳಿಂದ ಮಗನ ಬೆನ್ನು ಬಿದ್ದಿರುವ ಅದೇ ಕಾಲೇಜಿನ ಲಾವಣ್ಯಾ ದೈಹಿಕ ಸಂಪರ್ಕ ಬೆಳೆಸುವಂತೆ ಪೀಡಿಸುತ್ತಿದ್ದಳು ಎಂದು ಅರ್ಪಿತ್ನ ತಾಯಿ ದೂರು ನೀಡಿದ್ದಾರೆ. ಅದರ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಆಕೆಯನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ಅಧಿಕಾರಿಗಳ ವಿರುದ್ಧವೂ ತಾಯಿಯ ಅಸಮಾಧಾನ
ಅರ್ಪಿತ್ನ ತಾಯಿ ಹಾಸ್ಟೆಲ್ ಅದಿಕಾರಿಗಳ ವಿರುದ್ಧವೂ ಕಿಡಿಕಾರಿದ್ದಾರೆ. ಹಿಂದೊಮ್ಮೆ ಆತ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹಾಸ್ಟೆಲ್ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ದೂರಿದ್ದಾರೆ.
ʼʼಕಳೆದ ತಿಂಗಳ ಆರಂಭದಲ್ಲಿ ಅರ್ಪಿತ್ಗೆ ಚಿಕನ್ಪೋಕ್ಸ್ ಕಾಣಿಸಿಕೊಂಡಿತ್ತು. ಆಗ ಹಾಸ್ಟೆಲ್ ಸಿಬ್ಬಂದಿ ಆತನನ್ನು ಅಲ್ಲಿಂದ ತೆರಳಲು ಒತ್ತಾಯಿಸಿದ್ದರು. ಜತೆಗೆ ಕಾಲೇಜು ಆಡಳಿತ ಸಿಬ್ಬಂದಿಯೂ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಹೀಗಾಗಿ ಆತ ಪಿಡಬ್ಲ್ಯುಡಿ ವಿಶ್ರಾಂತಿ ಗೃಹದಲ್ಲಿ ತಂಗಿದ್ದʼʼ ಎಂದು ತಾಯಿ ತಿಳಿಸಿದ್ದಾರೆ.
ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಸದ್ಯ ಪೊಲೀಸರು ಅರ್ಪಿತ್ ಆತ್ಮಹತ್ಯೆ ಮಾಡಿಕೊಂಡಿರುವ ಹಾಸ್ಟೆಲ್ನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ʼಇಂಡಿಯಾ ಟುಡೇʼ ವರದಿಯ ಪ್ರಕಾರ, ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಮತ್ತು ಸಂತ್ರಸ್ತನ ಕುಟುಂಬದವರು ನೀಡಿರುವ ಹೇಳಿಕೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
