ಬೆಂಗಳೂರು, ಆ. 23- ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ಗಂಗಾಧರ್ ವಿರುದ್ಧ ಸಾಬೀತಾದ ಆರೋಪದ ಹಿನ್ನೆಲೆಯಲ್ಲಿ ವಿಧಿಸಲಾದ ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ಎತ್ತಿಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ಪೀಠವು, ತನಿಖಾ ಪ್ರಕ್ರಿಯೆಯಲ್ಲಿ ಯಾವುದೇ ನ್ಯೂನತೆ ಇಲ್ಲವೆಂದು ತೀರ್ಮಾನಿಸಿ, ಗಂಗಾಧರ್ ಸಲ್ಲಿಸಿದ್ದ ರಿಟ್ ಮೇಲ್ಮನವಿಯನ್ನು ವಜಾಗೊಳಿಸಿದೆ.
ಘಟನೆಯ ಹಿನ್ನಲೆ:-
1995ರಲ್ಲಿ ಸಿವಿಲ್ ನ್ಯಾಯಾಂಗ ಸೇವೆಗೆ ಪ್ರವೇಶಿಸಿದ ಗಂಗಾಧರ್, 2005ರಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಬಡ್ತಿ ಪಡೆದರು. ಅವರು 13ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ತಮ್ಮ ಸಹೋದರಿ ಅನಸೂಯ ವಿರುದ್ಧದ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿದ್ದ ತನಿಖೆಗೆ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
“ಪೊಲೀಸರು ಅನಸೂಯರನ್ನು ಠಾಣೆಗೆ ಕರೆಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ” ಎಂದು ಅವರು ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ತನಿಖಾ ಪ್ರಕ್ರಿಯೆ:-
2011ರ ಏಪ್ರಿಲ್ 27ರಂದು ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಹೊರಡಿಸಲಾಯಿತು. ರಿಜಿಸ್ಟ್ರಾರ್ (ವಿಜಿಲೆನ್ಸ್) ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಯಿತು. ದೂರುದಾರರು, ಸಂಬಂಧಪಟ್ಟ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಇತರ ಸಾಕ್ಷಿದಾರರ ವಿಚಾರಣೆ ಬಳಿಕ, ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ನಿಂದನೆ ಮತ್ತು ಬೆದರಿಕೆ ಹಾಕಿದ್ದಾರೆ ಎಂಬುದು ದೃಢಪಟ್ಟಿದೆ ಎಂದು ವರದಿ ಸಲ್ಲಿಸಲಾಯಿತು.
ಇದನ್ನಾಧರಿಸಿ, ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 8(vi) ರ ಪ್ರಕಾರ ಅವರಿಗೆ ಕಡ್ಡಾಯ ನಿವೃತ್ತಿಯ ಶಿಕ್ಷೆ ವಿಧಿಸಲಾಯಿತು.
ಹೈಕೋರ್ಟ್ನ ತೀರ್ಮಾನ:-
ಗಂಗಾಧರ್ ಅವರ ಮೇಲ್ಮನವಿಯನ್ನು ಮೊದಲು ಏಕಸದಸ್ಯ ಪೀಠವು (ಫೆ. 2025) ವಜಾಗೊಳಿಸಿತ್ತು. ಬಳಿಕ ಅವರು ವಿಭಾಗೀಯ ಪೀಠವನ್ನು ಸಂಪರ್ಕಿಸಿದ್ದರು. ತಮ್ಮ ವಿವರಣೆಯನ್ನು ಸಮರ್ಪಕವಾಗಿ ಪರಿಗಣಿಸಿಲ್ಲವೆಂದು ಅವರು ವಾದಿಸಿದರು. ಆದರೆ, ಪೀಠವು 2007ರ ಆಗಸ್ಟ್ 20ರಂದು ನಡೆದ ದೂರವಾಣಿ ಸಂಭಾಷಣೆ ಸಹಿತ ಸಾಕ್ಷ್ಯಾಧಾರಗಳು ನ್ಯಾಯಾಧೀಶರ ವಿರುದ್ಧದ ಆರೋಪಗಳನ್ನು ದೃಢಪಡಿಸುತ್ತವೆ ಎಂದು ಹೇಳಿತು.
ಪೀಠದ ಅಭಿಪ್ರಾಯದಲ್ಲಿ,
- ನೈಸರ್ಗಿಕ ನ್ಯಾಯದ ತತ್ವ ಉಲ್ಲಂಘನೆಯಾಗಿಲ್ಲ,
- ಶಿಸ್ತಿನ ಪ್ರಕ್ರಿಯೆಯಲ್ಲಿ ದುರುದ್ದೇಶವಿಲ್ಲ,
- ವಿಧಿಸಿದ ಶಿಕ್ಷೆ ಅತಿಯಾದುದೇನೂ ಅಲ್ಲ.
ಅದಕ್ಕಾಗಿ “ಶಿಸ್ತು ಪ್ರಾಧಿಕಾರದ ಆದೇಶದಲ್ಲಿ ಹಸ್ತಕ್ಷೇಪಕ್ಕೆ ಆಧಾರಗಳಿಲ್ಲ” ಎಂದು ಹೇಳಿ, ಗಂಗಾಧರ್ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಯಿತು.
