ತುಮಕೂರು:ಕನ್ನಡ ನಾಡು ನುಡಿಗೆ ದುಡಿದವರನ್ನು ನವೆಂಬರ್ ಮಾಹೆಯಲ್ಲಿ ಇಡೀ ತಿಂಗಳು ಅವರುಗಳನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ,ನಗರದ ಸಂಘ-ಸಂಸ್ಥೆಗಳು ಕನ್ನಡಕ್ಕಾಗಿ ದುಡಿದವರನ್ನು ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ನಮಗೆ ಸಂತಸ ತಂದಿದೆ,
ತಾಯಂದಿರು ತಮ್ಮ ಮಕ್ಕಳಿಗೆ ತಾಯಿ ಭಾಷೆ ಕನ್ನಡವನ್ನು ಹೇಳಿಕೊಡಿ,ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಉತ್ತಮ ಕೆಲಸಗಳನ್ನು ಮಾಡುತ್ತಾ ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ ಅವರ ಸಂಸ್ಥೆಯ ಜೊತೆ ಶಾಸಕನಾಗಿ ನಾನು ಸದಾ ಇರುತ್ತೇನೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಅವರು ನಗರದ 31ನೇ ವಾರ್ಡಿನ ಜಯನಗರ ಮಾರ್ಕೆಟ್ ಪಕ್ಕದಲ್ಲಿ ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ,ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ,ನಿರ್ಭಯ ಮಹಿಳಾ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ ವೈಭವದ ಕನ್ನಡ ರಾಜ್ಯೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಡಾ||ಎಸ್.ರಫೀಕ್ ಅಹಮದ್ ರವರು ಮಾತನಾಡುತ್ತಾ ಸಂಘ-ಸಂಸ್ಥೆಗಳಿಂದ ಕನ್ನಡ ಭಾಷೆಗಾಗಿ ಕನ್ನಡ ಉಳಿವಿಗಾಗಿ ಜಾಗೃತಿ ಮೂಡಿಸುತ್ತಿವೆ,ನಿರ್ಭಯ ಮಹಿಳಾ ವೇದಿಕೆಯು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದೆ,ಮಹಿಳೆಯರಿಗೆ ಎಂತಹುದೇ ಸಮಸ್ಯೆ ಬಂದರೂ ಸಹ ಅದು ಬಗೆಹರಿಸಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಕೆಲಸ ಮಾಡುತ್ತಿದೆ,ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪು ಕವಿನುಡಿಯಂತೆ ನಾವೆಲ್ಲರೂ ಕನ್ನಡ ಭಾಷೆಗಾಗಿ ದುಡಿಯೋಣ ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಕೆ.ಎಸ್.ಸಿದ್ದಲಿಂಗಪ್ಪನವರು ಮಾತನಾಡುತ್ತಾ ಭಾಷೆಗೆ ಭಾವನೆಗಳನ್ನು ತಿಳಿಸುವ ಕೆರಳಿಸುವ ಶಕ್ತಿ ಅಡಗಿದೆ,ನೀವು ಯಾವುದೇ ಭಾಷೆ ಕಲಿಯಿರಿ ಆದರೆ ಮೊದಲ ಪ್ರಾಶಸ್ತö್ಯ ಕನ್ನಡಕ್ಕಿರಲಿ,ಡಿವಿಜಿರವರು ಕಗ್ಗದ ಮೂಲಕ ಜನರನ್ನು ಸದಾ ಎಚ್ಚರಿಸುತ್ತಿದ್ದಾರೆ,ಕನ್ನಡ ಭಾಷೆ ಅನ್ನದ ಭಾಷೆಯಾದರೆ ಮಾತ್ರ ಕನ್ನಡ ಉಳಿಯುತ್ತದೆ,ಇಂದು ಕನ್ನಡ ಉಳಿದಿದ್ದರೆ ಅದಕ್ಕೆ ಮೂಲ ಕಾರಣ ಕನ್ನಡ ಶಿಕ್ಷಕರು,ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಮಾತ್ರ,ಕನ್ನಡ ಭಾಷೆಗೆ ಎಲ್ಲರ ಕೊಡುಗೆ ಇದೆ,ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ,ಆಂಧ್ರದ ಗಡಿಭಾಗದಲ್ಲಿ ಸಹ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಿರುವುದು ಕನ್ನಡದ ಹೆಮ್ಮೆ ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀಮತಿ ಗೀತಾನಾಗೇಶ್, ಆರ್.ಎಸ್.ವೀರಪ್ಪದೇವರು, ನಟರಾಜಶೆಟ್ಟರು, ಡಾ||ಬಾಲಗುರುಮೂರ್ತಿ,ಶ್ರೀಮತಿಕಮಲಾನರಸಿಂಹ, ಸಿ.ಎನ್.ರಮೇಶ್, ಚಂದ್ರಶೇಖರ್ ಹೆಬ್ಬಳಲು, ಶ್ರೀನಿವಾಸಮೂರ್ತಿ, ನಂದಿನಿ, ಗೋವಿಂದರಾಜು,ಲತಾನಾರಾಯಣ,ನಂಜುಂಡರಾವ್,ಅಖಿಲ,ಜ್ಯೋತಿಆಚಾರ್ಯ, ಡಿ.ಎಸ್.ರಮೇಶ್, ಸುನಂದಮ್ಮ, ಸಿ.ಎನ್.ಸುಗುಣಾದೇವಿ ಇತರರು ಉಪಸ್ಥಿತರಿದ್ದರು.
ರುದ್ರಮೂರ್ತಿಎಲೆರಾಂಪುರ ತಂಡದವರು ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.
ವರದಿ : ಕೆ ಬಿ ಚಂದ್ರಚೂಡ್
