ತುಮಕೂರು: ಐಕ್ಯ ಫೌಂಡೇಶನ್ ಹಾಗೂ ಇನ್ನರ್ ವ್ಹೀಲ್ ಸಂಸ್ಥೆವತಿಯಿಂದ ಈ ತಿಂಗಳ 22 ಮತ್ತು 23ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಕಲ್ಪತರು ಉತ್ಸವ ಏರ್ಪಡಿಸಲಾಗಿದೆ. ಈ ವೇಳೆ ಜಿಲ್ಲೆಯ 58 ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಐಕ್ಯ ಫೌಂಡೇಶನ್ ಅಧ್ಯಕ್ಷೆ ರೇಖಾ ಶಿವಕುಮಾರ್ ಹಾಗೂ ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಮಂಜುಳಾಲೋಕೇಶ್ ತಿಳಿಸಿದರು.
ಗುರುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಉತ್ಸವದಲ್ಲಿ ತೆರೆಯಲಾಗುವುದು. ಈ ಮೂಲಕ ರೈತರ ಉತ್ಪನ್ನಗಳನ್ನು ಗ್ರಾಹಕರು ರೈತರಿಂದ ನೇರ ಖರೀದಿ ಮಾಡಬಹುದು ಎಂದರು.
22ರAದು ಸಂಜೆ 4.30ಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಳಿಗೆಗಳ ಉದ್ಘಾಟನೆ ನೆರವೇರಿಸಿ ನಂತರ ನಡೆಯುವ ಸಮಾರಂಭದಲ್ಲಿ ಪ್ರಗತಿಪರ ರೈತನ್ನು ಸನ್ಮಾನಿಸಿ ಗೌರವಿಸುವರು. ರೈತಪರ ಹೋರಾಟಗಾರ ಗಂಗಾಧರ ಕಾಸರಘಟ್ಟ, ಚಲನಚಿತ್ರ ನಟ ಹನುಮಂತೇಗೌಡ, ಕಿರುತೆರೆ ನಟರಾದ ಶಿಲ್ಪ ಶೈಲೇಶ್. ಅರ್ಜುನ್ ಯೋಗೇಶ್ರಾಜ್ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
23ರಂದು ಸಂಜೆ 5 ಗಂಟೆಯ ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಗುವುದು. ನಂತರ ರಂಗನಟಿ ಸವಿತಕ್ಕ ಮತ್ತು ತಂಡದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ರೇಖಾ ಶಿವಕುಮಾರ್, ಮಂಜುಳಾ ಲೋಕೇಶ್ ತಿಳಿಸಿದರು.
ಇನ್ನರ್ ವ್ಹೀಲ್ ಕಾರ್ಯದರ್ಶಿ ಸುಮತ್ರಾ ನಾಗರಾಜ್, ನಿಕಟಪೂರ್ವ ಅಧ್ಯಕ್ಷೆ ಶೀಲಾ ಮಧು, ಜಂಟಿ ಕಾರ್ಯದರ್ಶಿ ಲತಾ ಮಹೇಶ್ ಹಾಜರಿದ್ದರು.
ವರದಿ : ಕೆ ಬಿ ಚಂದ್ರಚೂಡ್
