
ಚಿಕ್ಕಬಳ್ಳಾಪುರ: ಆಂಧ್ರ ಹಾಗೂ ತೆಲಂಗಾಣದಲ್ಲಿ ಮರಣಮೃದಂಗ ಬಾರಿಸಿರುವ ಡೆಡ್ಲಿ ಹಕ್ಕಿ ಜ್ವರ ರಾಜ್ಯಕ್ಕೂ ಕಾಲಿಟ್ಟಿದೆ.
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಬರ್ಡ್ ಫ್ಲೂಗೆ (Bird Flu) ಕಾರಣವಾಗುವ ಎಚ್5ಎನ್1 ವೈರಸ್ ಇರೋದು ಧೃಡವಾಗಿದೆ. ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೈಅಲರ್ಟ್ ಆಗಿ ತುರ್ತು ಸಭೆ ನಡೆಸಿದ್ದು, ಸೋಂಕಿತ ಗ್ರಾಮದ ಸುತ್ತಲೂ ಕಟ್ಟೆಚ್ಚರ ವಹಿಸಿ ಕೋಳಿಗಳ ಸಾಗಾಣಿಕೆ ಬಂದ್ ಮಾಡಿ ನಾಕಾಬಂಧಿ ವಿಧಿಸಲು ಆದೇಶ ಮಾಡಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಇರೋದು ಪ್ರಯೋಗಾಲಯದ ವರದಿಯಿಂದ ಅಧಿಕೃತವಾಗಿ ಧೃಡವಾಗಿದೆ. ಈ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮ ಕೈಕೊಳ್ಳುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ಈ ನಡುವೆ ಫಾರಂ ಮಾಲೀಕರು ರಾತ್ರೋ ರಾತ್ರಿ ಕೋಳಿಗಳನ್ನ ಸಾಗಾಟ ಮಾಡಿರುವುದು ಕಂಡುಬಂದಿದೆ. ಕಳೆದ 2 ದಿನಗಳ ಹಿಂದೆ ಬೆಂಗಳೂರಿಗೆ 10,000 ಫಾರಂ ಕೋಳಿಗಳನ್ನ ಸಾಗಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಕ್ಕಿ ಜ್ವರ ಪತ್ತೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಡಿಸಿ ಪಿಎನ್ ರವೀಂದ್ರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳೊಂದಿಗೆ ಧಿಢೀರ್ ತುರ್ತು ಸಭೆ ನಡೆಸಿದರು. ಅಂದಹಾಗೆ ಗ್ರಾಮದ ದ್ಯಾವಪ್ಪ ಎಂಬುವವರ ಮನೆಯಲ್ಲಿ ಧಿಢೀರ್ ಅಂತ 28 ಕೋಳಿಗಳು ಸಾವನ್ನಪ್ಪಿದ್ದವು. ನಂತರ ಇದೇ ಗ್ರಾಮದಲ್ಲಿ ಬೇರೇ ಬೇರೆಯವರ ಕೋಳಿಗಳ ಸಹ ಸಾವನ್ನಪ್ಪುತ್ತಿದ್ದವು.
ಸತ್ತ ಕೋಳಿ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಎಚ್5 ಎನ್1 ವೈರಸ್ ಧೃಡವಾಗಿದೆ. ಹೀಗಾಗಿ ರೋಗ ನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಡಿಸಿ ಹಕ್ಕಿ ಜ್ವರ ನಿರ್ಮೂಲನೆಗಾಗಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ.
ಇನ್ನೂ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಧೃಢ ಹಿನ್ನಲೆ, ವರದಹಳ್ಳಿ ಗ್ರಾಮದ ಕೋಳಿಗಳು ಬೇರಡೆಗೆ ಸಾಗಾಣಿಕೆ ಮಾಡದಂತೆ ಸೂಚಿಸಲಾಗಿದೆ. ಬೇರೆ ಕಡೆಯಿಂದ ಕೋಳಿಗಳನ್ನೂ ಸಹ ಗ್ರಾಮಕ್ಕೆ ತರದಂತೆ ಸೂಚಿಸಲಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್ನಿಂದ ನಾಕಾಬಂಧಿ ಹಾಕಲಾಗಿದೆ.
ಗಡಿಗಳಲ್ಲಿ ಹದ್ದಿನ ಕಣ್ಣಿಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ವರದಹಳ್ಳಿ ಗ್ರಾಮದ ಸುತ್ತಲೂ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಒಟ್ನಲ್ಲಿ ಹಕ್ಕಿ ಜ್ವರ ಧೃಡದಿಂದ ಜಿಲ್ಲಾಡಳಿತದ ಟೆನ್ಷನ್ ಹೆಚ್ಚಾಗಿದೆ.. ಹಕ್ಕಿ ಜ್ವರ ನಿರ್ಮೂಲನೆಗೆ ಕೋಳಿಗಳನ್ನ ವಶಕ್ಕೆ ಪಡೆದು ಸಾಮೂಹಿಕ ಹತ್ಯೆಗೂ ಪ್ಲಾನ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಹ ಗ್ರಾಮದ ಜನರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.