ಚನ್ನರಾಯಪಟ್ಟಣ: ಎಳೆಯ ವಯಸ್ಸಿನವರು ಕುತೂಹಲದಿಂದ ಮಾದಕ ವಸ್ತುಗಳನ್ನು ಸೇವಿಸಿ, ವ್ಯಸನಿಗಳಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯೆಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಮಿತಿಯ ಸದಸ್ಯ ಕಾರ್ಯದರ್ಶಿ ವಿ.ಕುಸುಮಾ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ 2026ನೇ ಸಾಲಿನ ಟೈಮ್ಸ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಾದಕ ವಸ್ತುಗಳ ವ್ಯಸನ ಮಾನಸಿಕ ಕಾಯಿಲೆಯಾಗಿದ್ದು, ಇದರ ವಿರುದ್ಧ ಎಚ್ಚರದಿಂದಿರುವoತೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾಗಿದೆ. ಮಾದಕ ವಸ್ತು ಸೇವನೆ, ಸಮಾಜದಲ್ಲಿ ಶಾಂತಿ ಕದಡಿ ಅಶಾಂತಿಗೆ ದಾರಿಮಾಡಿಕೊಡುತ್ತದೆ. ಹಾಗಾಗಿ ಯುವಜನತೆ ಇದರಿಂದ ದೂರವಿರಬೇಕು ಹಾಗೂ ಈ ಮಾದಕ ದುಶ್ಚಟಕ್ಕೆ ಬಲಿಯಾದವರನ್ನು ಸರಿದಾರಿಗೆ ತರುವ ಕೆಲಸದಲ್ಲಿ ತೊಡಗಬೇಕು. ಹದಿಹರೆಯದಲ್ಲಿ ಡ್ರಗ್ಸ್ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆ ಆಗುತ್ತವೆ, ಇವು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪಾಲಕರು ಕಷ್ಟ ಕಾರ್ಪಣ್ಯಗಳ ನಡುವೆಯೂ ಮಕ್ಕಳ ಉತ್ತಮ ಭವಿಷ್ಯಕ್ಕೆ ಹಂಬಲಿಸುತ್ತಾರೆ. ವ್ಯಸನಮುಕ್ತರಾಗಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಭವಿಷ್ಯದ ಜತೆಗೆ ಪಾಲಕರ ಕನಸನ್ನು ನನಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಶಿಕ್ಷಣ ವ್ಯಕ್ತಿಯ ಭವಿಷ್ಯವನ್ನು ರೂಪಿಸುವುದರಿಂದ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು. ಕಷ್ಟದ ಬದುಕಿನ ನಡುವೆಯೂ ಶಿಕ್ಷಣ ಪಡೆದು ಅಪ್ರತಿಮ ಸಾಧನೆ ಮಾಡಿ, ದೇಶದ ಭವಿಷ್ಯವನ್ನು ರೂಪಿಸಿದ ಗಣ್ಯರನ್ನು ಮಾದರಿಯಾಗಿಟ್ಟುಕೊಂಡು ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಿ, ಶಿಕ್ಷಣ ಕಲಿಸಿದ ಗುರುವಿಗೆ ಹಾಗೂ ಪಾಲಕರಿಗೆ ಹೆಸರು ತರಬೇಕೆಂದ ಅವರು, ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂಕೇತವಾಗಿದೆ. ಇಂದಿನ ಯುವಜನರಲ್ಲಿ ಗುರು–ಹಿರಿಯರ ಬಗೆಗಿನ ಗೌರವ ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಸಮೂಹ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.

ಆಧುನಿಕ ತಂತ್ರಜ್ಞಾನ ಕ್ರಾಂತಿಯಿಂದ ಜಗತ್ತನ್ನು ಮೊಬೈಲ್ ವ್ಯಾಪಿಸಿಬಿಟ್ಟಿದೆ, ವಿದ್ಯಾರ್ಥಿ ಜೀವನ ಅತ್ಯಮೂಲ್ಯ. ಈ ಅವಧಿಯಲ್ಲಿ ಸಾಧ್ಯವಾದರೆ ಮೊಬೈಲ್ ತ್ಯಜಿಸಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಬಳಸಿ. ನಿಮ್ಮ ಜೀವನದ ಅತ್ಯಮೂಲ್ಯ ಅವಧಿಯನ್ನು ಹಾಳು ಮಾಡಿಕೊಳ್ಳಬೇಡಿ. ಯುವ ಸಮುದಾಯ ಅತಿಯಾದ ಮೊಬೈಲ್ ಬಳಕೆಗೆ ಬಲಿಯಾಗಿ ಭವಿಷ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ, ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕ ಖಿನ್ನತೆ ಹೆಚ್ಚುತ್ತಿರುವುದರಿಂದ ಮಕ್ಕಳು ಕೂಡ ಮೊಬೈಲ್ ಬಳಕೆ ಕ್ರಮೇಣವಾಗಿ ಕೈ ಬಿಡಬೇಕು ಕಿವಿಮಾತು ಹೇಳಿದರು.
ಟೈಮ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಪ್ರಸ್ತಾವಿಕವಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮೊಬೈಲ್ ಎಲ್ಲವೂ ಆಗಿದೆ, ಸೋಷಿಯಲ್ ಮೀಡಿಯಾದಲ್ಲಿ ಪೋಟೊ ಹಾಕದಿದ್ರೆ ನಿದ್ರೆ ಬಾರದ ಸ್ಥಿತಿ ಇದೆ. ಸಣ್ಣಸಣ್ಣ ಆಸೆ, ಆಮಿಷಗಳಿಗೆ ಬಲಿಯಾಗುವುದನ್ನು ಬಿಡಬೇಕು. ಓದುವ ಸಮಯದಲ್ಲಿ ಕಷ್ಟುಪಟ್ಟು ಓದಿ, ಓದು ಮುಗಿದ ಮೇಲೆ ನಿಮ್ಮೊಂದಿಗೆ ನಿಮ್ಮ ಸಾಧನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿ ಆದು ಮತ್ತೊಬ್ಬರಿಗೆ ಪ್ರೇರಣೆಯಾಗಬಹುದೆಂದರು. ನಮ್ಮ ಕೆಲಸ, ಸಾಧನೆಗಳು ಮಾತಾಡುವಂತಾಗಬೇಕು. ದ್ವಿತೀಯ ಪಿಯುಸಿ ಮುಗಿಸುವ ಹಂತದಲ್ಲಿರುವ ನೀವುಗಳು ದೇಶ, ಕುಟಂಬ, ಸಮಾಜದ ಒಳಿತಿಗೆ ಕೆಲಸ ಮಾಡಿ ಸಮಾಜದ ಆಸ್ತಿಗಳಾಗಿ ಎಂದರು.

ಕಾರ್ಯಕ್ರಮದಲ್ಲಿ ಟೈಮ್ಸ್ ಪುರಸ್ಕಾರದ ಸಾಧಕರಾದ ಶಿಕ್ಷಣ ಕ್ಷೇತ್ರದ ನಿವೃತ್ತ ಮುಖ್ಯ ಶಿಕ್ಷಕ ಈ.ಈಶ್ವರನ್, ಅನಾಥ ಶವಗಳಿಗೆ ಮುಕ್ತಿ ದೊರಕಿಸುವ ಸಮಾಜಸೇವಕ ಸಿ.ಎಲ್.ದಿನೇಶ್, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸೂತಿ ತಜ್ಞೆ ಡಾ.ಕೆ.ಆರ್.ಶೋಭಾರಾಣಿ, ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಅಥ್ಲೆಟಿಕ್ ಪ್ರಕಾಶ್ ಬರಾಳು ರವರನ್ನು ಈ ವೇಳೆ ಗೌರವಿಸಲಾಯಿತ್ತು, ಎಚ್.ಡಿ.ಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹನುಮಂತರಾವ್, ಕಾಲೇಜಿನ ಪ್ರಾಂಶುಪಾಲ ಎ.ಸಿ.ಸುನಿಲ್ಕುಮಾರ್, ಶಿಕ್ಷಣ ಸಂಯೋಜಕ ಶ್ರೀಕಂಠ, ಆಡಳಿತಾಧಿಕಾರಿ ಸಂಜಯ್ ಸೇರಿದಂತೆ ಉಪನ್ಯಾಸ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ ಕೆ
