
ಹಾಸನ: ಸಾಲದ ಕಂತು ಕಟ್ಟಲೇಬೇಕು ಎಂದು ಮನೆ ಬಾಗಿಲಿನಲ್ಲೇ ಕುಳಿತ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಕೆಂಚಮ್ಮ (50) ಮೃತರು, ಅವರು ಬಿಎಸ್ಎಸ್ ಮತ್ತು ಇಐಎಫ್ ಮೈಕ್ರೋಫೈನಾನ್ಸ್ ಕಂಪನಿಯಿಂದ 72 ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದರೂ, ಈ ತಿಂಗಳು ಹಣ ಇಲ್ಲದ ಕಾರಣ ಕಂತು ಕಟ್ಟುರಲಿಲ್ಲ ಎನ್ನಲಾಗಿದೆ.
ಇಂದೇ ಹಣ ಕಟ್ಟಬೇಕೆಂದು ಮೈಕ್ರೋಫೈನಾನ್ಸ್ ಸಿಬ್ಬಂದಿ ಕೆಂಚಮ್ಮರ ಮನೆ ಮುಂದೆ ಕುಳಿತಿದ್ದು, ಇದರಿಂದ ಮನನೊಂದು ಅವರು ಮನೆಯಲ್ಲಿಯೇ ನೇಣುಬಿಗಿದುಕೊಂಡಿದ್ದಾರೆ.
ಸ್ಥಳಕ್ಕೆ ಆಲೂರು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.