ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ , ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ವತಿಯಿಂದ ನಗರದ ವಿದ್ಯಾರಣ್ಯಪುರದಲ್ಲಿ ಆಯೋಜಿಸಲಾಗಿದ್ದ ಮೊಬೈಲ್ ಆಸ್ಪತ್ರೆ ಆರೋಗ್ಯ ಸೇವೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.

ಜುಲೈ 29 , ಬುಧವಾರದಂದು ವೃದ್ಧಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ60 ವರ್ಷಕ್ಕೂ ಅಧಿಕ ವಯಸ್ಸಿನ 100 ಕ್ಕೂ ಹೆಚ್ಚು ಹಿರಿಯ ನಾಗರಿಕರು ಉಚಿತ ಆರೋಗ್ಯ ಸೇವೆಯ ಪ್ರಯೋಜನವನ್ನು ಪಡೆದುಕೊಂಡರು. ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆಯ ವೈದ್ಯರ ಬಳಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹಂಚಿಕೊಂಡು ವೈದ್ಯಕೀಯ ಸಲಹೆಗಳನ್ನು ಪಡೆದುಕೊಂಡರು. ಈ ಮೂಲಕ ಹಿರಿಯ ನಾಗರಿಕರಿಗೆ ಅವರಿದ್ದಲ್ಲಿಯೇ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮೊಬೈಲ್ ಆಸ್ಪತ್ರೆ ಯಶಸ್ವಿಯಾಗಿದೆ.

ಕಾರ್ಯಕ್ರಮದಲ್ಲಿ , ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಪ್ರವೀಣ್, ಡಾ. ಅನುಪಮ, ಒಪ್ತೊಮೆಟ್ರಿಸ್ಟ್ ಡಾ ರೇಣುಕಾರಾಧ್ಯ ಸೇರಿ ಹಲವು ವೈದ್ಯರು ವೃದ್ದಾಶ್ರಮದಲ್ಲಿ ಆರೋಗ್ಯ ಸೇವೆಯನ್ನು ಸಲ್ಲಿಸಿದರು. ಈ ಉಪಕ್ರಮದಲ್ಲಿ ಎಕ್ಸ್ ರೇ, ಲ್ಯಾಬೊರೇಟರಿ, ಫಾರ್ಮಸಿ, ಇಸಿಜಿ ಸೇರಿ ಅನೇಕ ತಪಾಸಣಾ ಸೌಲಭ್ಯವನ್ನು ಒದಗಿಸಲಾಯಿತು.

ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಭಾಗವಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆಯು ಪ್ರತಿ ತಿಂಗಳೂ ವಿವಿಧ ಕಡೆಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸಾವಿರಾರು ಜನರು ತಮ್ಮ ಗ್ರಾಮದಲ್ಲೇ ಆರೋಗ್ಯ ಸೇವೆಯನ್ನು ಪಡೆದುಕೊಂಡು ಕಾರ್ಯಕ್ರಮದ ಉದ್ದೇಶವನ್ನು ಸಾಕಾರಗೊಳಿಸಿದ್ದಾರೆ.
