ತುಮಕೂರು : ಜಮಾ ಆತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮಹಮದ್(ಸ)ರವರ ಜನ್ಮ ದಿನದ ಅಂಗವಾಗಿ ಕ್ರಾಂತಿಜ್ಯೋತಿ ಎಂಬ ಹೆಸರಿನಲ್ಲಿ ರಾಜ್ಯದಾದ್ಯಂತ ಸೀರತ್ ಅಭಿಯಾನವನ್ನು 26-08-2026ರಿಂದ 06-09-2026ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಾಲಿಡಾರಿಟಿ ಇಂಡಿಯಾದ ರಾಜ್ಯ ಕಾರ್ಯದರ್ಶಿ ಮೊಹಮದ್ ಇಸ್ಮಾಯಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾನವ ಮನಸ್ಸಿನ ಕೃಷಿಕ-ಮನದೊಡೆಯ ಪ್ರವಾದಿ ಮಹಮದ್(ಸ) ಮತ್ತು ಸಮಗ್ರಕ್ರಾಂತಿ ಜ್ಯೋತಿ ಬೆಳಗಿದ ಪೈಗಂಬರ್ ಮಹಮದ್(ಸ) ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು,ಪ್ರವಾದಿ ಮಹಮದ್(ಸ)ರ ಅವರ ಜೀವನ ಮತ್ತು ಸಂದೇಶವನ್ನು ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಾಂತಿ ಜ್ಯೋತಿ ಸೀರತ್ ಅಭಿಯಾನದಲ್ಲಿ ಪ್ರವಾದಿ ಮಹಮದ್(ಸ)ರವರ ಸಮಗ್ರಕ್ರಾಂತಿಯ ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವಘನತೆ, ಹಾಗೂ ಮಾನವಕುಲದ ಏಕತೆಗೆ ಕೈಗೊಳ್ಳಲಾದ ಕ್ರಮಗಳು ಕುರಿತು ಪ್ರವಚನ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ.ಅರಬ್ನಲ್ಲಿ ಎಲ್ಲೆಲ್ಲೂ ಆಶಾಂತಿ, ಅನೀತಿ, ಅತ್ಯಾಚಾರ, ಅನಾಚಾರ, ದೌರ್ಜನ್ಯ, ದಬ್ಬಾಳಿಕೆಗಳೇ ತುಂಬಿದ್ದ ಸಂದರ್ಭದಲ್ಲಿ, ಇವುಗಳನ್ನು ಹೇಗೆ ಹೋಗಲಾಡಿಸಿದರು. ಕಂಡುಕೊಂಡ ಮಾರ್ಗೋಪಾಯಗಳೇನು ಎಂಬುದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಎಸ್.ಎಸ್.ಎಲ್.ಸಿ. ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಈ ಸಂಬಂಧ ಪ್ರಬಂಧ ಸ್ಪರ್ಧೆ ಹಮ್ಮಿಕೊಂಡಿದ್ದು, ಉತ್ತಮ ಬರಹಗಳಿಗೆ ಬಹುಮಾನ ಸಹ ವಿತರಿಸಲಾಗುವುದು ಎಂದರು.
ಜಮಾಆತೆಇಸ್ಲಾಮಿ ಹಿಂದ್ನ ಬಹುತೇಕ ಪ್ರವಚನಗಳು ಕನ್ನಡ ಭಾಷೆಯಲ್ಲಿಯೇ ಇರಲಿವೆ.ಸ್ಥಳೀಯ ಭಾಷೆಯ ಮೂಲಕವೇ ಪ್ರವಾದಿ ಮಹಮದ್ರ ಸಂದೇಶಗಳನ್ನು ಜನರಿಗೆ ತಿಳಿಸುವ ಮೂಲಕ ಅವರ ಬಗ್ಗೆ ಇರುವತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು.ಪರಸ್ಪರರ ನಡುವೆ ಭಾಂಧವ್ಯ ವೃದ್ದಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಈ ಅಭಿಯಾನದಲ್ಲಿ ಸಾಹಿತಿ ಯೋಗೀಶ್ ಮಾಸ್ಟರ್ ಬರೆದಿರುವ ಮಾನವ ಮನಸ್ಸಿನ ಕೃಷಿಕ-ಮನದೊಡೆಯ ಪ್ರವಾದಿ ಮಹಮದ್(ಸ),ಹಾಗೂ ವಾರ್ತಾಭಾರತಿ ಸಂಪಾದಕರಾದ ಅಬ್ದುಸ್ ಸಲಾಮ್ ಪುತ್ತಿಗೆ ರವರು ಬರೆದಿರುವ ಸಮಗ್ರ ಕ್ರಾಂತಿಯ ಜ್ಯೋತಿ ಬೆಳೆದ ಪೈಗಂಬರ್ ಮಹಮದ್(ಸ) ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮೊಹಮದ್ ಇಸ್ಮಾಯಿಲ್ ತಿಳಿಸಿದರು.
ಆಮಾಆತೆಇಸ್ಲಾಮಿ ಹಿಂದ್ನ ತುಮಕೂರು ಜಿಲ್ಲಾಧ್ಯಕ್ಷ ಅಸ್ಸರ್ಅಲಿಂವುಲ್ಲಾ ಮಾತನಾಡಿ, ಕ್ರಾಂತಿ ಜ್ಯೋತಿ ಸೀರತ್ ಅಭಿಯಾನದ ಭಾಗವಾಗಿ ಸೆಪ್ಟಂಬರ್ 12ರ ಬುಧವಾರ ಸಂಜೆ 4 ಗಂಟೆಗೆ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಸೀರತ್ ಪ್ರವಚನ ಹಮ್ಮಿಕೊಳ್ಳಲಾಗಿದೆ.ಶಾಂತಿ ಪ್ರಕಾಶನದ ಮಹಮದ್ ಕುಯಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಈ ವೇಳೆ ಜಮಾಆತೆಇಸ್ಲಾಮಿ ಹಿಂದ್ನ ಮುಖಂಡರಾದ ಇಮಾಮ್ ಬೇಗ್, ಶೇಖತ್ ಉಲ್ಮಾ, ಅಸಾದುಲಾಖಾನ್, ಅಮೀದ್ಅಫ್ಜಲ್, ತಮೀಜ್ಉದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
