
ದೆಹಲಿ :ಕಳೆದ 10 ವರ್ಷದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ. ಈ ಹಿಂದೆ 40 ವರ್ಷಗಳ ಕಾಲ ಗರೀಬಿ ಹಠಾವೋ (ಬಡತನವನ್ನು ಹೊಡೆದೋಡಿಸಿ) ಎಂದು ಘೋಷಣೆ ಕೂಗಿದವರು ಬಡತನ ನಿರ್ಮೂಲನೆ ಮಾಡಲಿಲ್ಲ. ಆದರೆ, ನಾವು ಸುಳ್ಳಿನ ಘೋಷಣೆ ಮಾಡಿಲ್ಲ. 4 ದಶಕದಲ್ಲಿ ಮಾಡಲಾಗದ ಕೆಲಸವನ್ನು ಒಂದೇ ದಶಕದಲ್ಲಿ ನಾವು ಮಾಡಿದ್ದೇವೆ.
ಬಡತನವನ್ನು ನಿವಾರಿಸುವ ಕೆಲಸ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಅಧಿವೇಶನದ ಭಾಷಣದಲ್ಲಿ ಹೇಳಿದ್ದಾರೆ. ಇಲ್ಲಿಯವರೆಗೆ ಬಡವರಿಗೆ 4 ಕೋಟಿ ಮನೆಗಳನ್ನು ನೀಡಲಾಗಿದೆ. ಕಷ್ಟದ ಜೀವನವನ್ನು ನಡೆಸಿದವರಿಗೆ ಮಾತ್ರ ಮನೆ ಪಡೆಯುವುದರ ಮೌಲ್ಯ ಏನೆಂದು ಅರ್ಥವಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಶೌಚಾಲಯ ವ್ಯವಸ್ಥೆಯ ಕೊರತೆಯಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವವರು ಅದರಿಂದ ವಂಚಿತರಾದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಉತ್ತರವಾಗಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ನಾವು 2025ನೇ ವರ್ಷದಲ್ಲಿದ್ದೇವೆ. 21ನೇ ಶತಮಾನದ 25% ಭಾಗ ಅಂತ್ಯವಾಗಿದೆ. ಸ್ವಾತಂತ್ರ್ಯದ ಬಳಿಕ ಏನು ಬದಲಾಗಿದೆ ಎಂಬುದನ್ನು ಸಮಯ ನಿರ್ಧಾರ ಮಾಡಲಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭವಿಷ್ಯದ 25 ವರ್ಷದ ವಿಕಸಿತ್ ಭಾರತದ ಕಲ್ಪನೆಯನ್ನು ತೆರೆದಿಟ್ಟಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ವಿಕಸಿತ್ ಭಾರತದ ಸಂಕಲ್ಪವನ್ನು ಗಟ್ಟಿಗೊಳಿಸಿದೆ. ನಮ್ಮ ದೇಶದ ಜನರು 10 ವರ್ಷದಿಂದ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಮ್ಮ ಸರ್ಕಾರದ ‘ಹರ್ ಘರ್ ಜಲ ಮಿಷನ್’ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಈ ವೇಳೆ ವಿರೋಧ ಪಕ್ಷಗಳನ್ನು ಟೀಕಿಸಿದ್ದಾರೆ. ‘ಕೆಲವರು ಜಕುಝಿ, ಐಷಾರಾಮಿ ಸ್ನಾನದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಆದರೆ ನಾವು ಹರ್ ಘರ್ ಜಲ ಅಭಿಯಾನದ ಮೂಲಕ ಪ್ರತಿ ಮನೆಗೆ ಶುದ್ಧ ನೀರು ತಲುಪಿಸುವತ್ತ ಗಮನ ಹರಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಹೇಳದೆಯೇ ಅವರ ವಿರುದ್ಧ ಪರೋಕ್ಷವಾಗಿ ಮೋದಿ ಚಾಟಿ ಬೀಸಿದ್ದಾರೆ.
ಕೆಲವು ನಾಯಕರ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿ ಕೊಂಡಿದ್ದಾರೆ. ನಾವು ಮನೆಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. 12ಕೋಟಿ ಮನೆಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ಬಡವರಿಗೆ ನಾವು ಎಷ್ಟೋಂದು ಕೆಲಸ ಮಾಡಿದ್ದೇವೆ. ನಮ್ಮ ಪ್ರಯತ್ನ ಬಡವರ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಾಗಿರುತ್ತದೆ. ನಾವು 10 ಕೋಟಿ ನಕಲಿ ಜನರನ್ನು ತೆಗೆದುಹಾಕಿದ್ದೇವೆ. ತಪ್ಪು ಕೈಗಳಿಗೆ ಭಾರತದ ಯೋಜನೆ ಹೋಗುವುದನ್ನು ತಪ್ಪಿಸಿದ್ದೇವೆ. 3 ಲಕ್ಷ ಕೋಟಿ ಹಣ ತಪ್ಪು ಜನರಿಗೆ ಹೋಗುವುದನ್ನು ತಪ್ಪಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
2014ರಿಂದ ಅಧಿಕಾರ ನಡೆಸಲು ನಮಗೆ ಅವಕಾಶ ಸಿಕ್ಕಿದೆ. ಯುವಕರ ಪರ ಕೆಲಸ ಮಾಡಿದ್ದೇವೆ. ಬಾಹ್ಯಾಕಾಶ, ರಕ್ಷಣಾ ಕ್ಷೇತ್ರ, ಉತ್ಪಾದನಾ ಕ್ಷೇತ್ರದಲ್ಲಿ ಉತ್ತೇಜನ ನೀಡಿದ್ದೇವೆ. 12 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದೇವೆ. ಎಐ, ತ್ರಿಡಿ ಪ್ರಿಂಟಿಂಗ್, ಗೇಮಿಂಗ್ ಕ್ಷೇತ್ರದಲ್ಲೂ ಪ್ರಯತ್ನಗಳು ಮುಂದುವರೆದಿವೆ. ಸಿಂಗಲ್ ಎಐಗಿಂತ ಡಬಲ್ ಎಐ ಮುಖ್ಯ. ಆರ್ಟಿಫಿಷಿಯಲ್ಇಂಟೆಲಿಜನ್ಸ್ ಜೊತೆಗೆ ಆಸ್ಪಿರೇಷನ್ ಇಂಡಿಯಾ ಮುಖ್ಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.