
ನವದೆಹಲಿ: ಕರ್ನಾಟಕ ಸರ್ಕಾರವು 2003ರಲ್ಲಿ ಜಾರಿಗೆ ತಂದಿದ್ದ ಕಾನೂನನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
ಬಸ್ ಕಾರ್ಯಾಚರಣೆಗಳ ಮೇಲೆ ಕೆಎಸ್ಆರ್ಟಿಸಿಯ ಏಕಸ್ವಾಮ್ಯವನ್ನು ಕಿತ್ತು ಹಾಕಿ, ಹೆಚ್ಚುತ್ತಿರುವ ಸಾರ್ವಜನಿಕ ಸಾರಿಗೆ ಅಗತ್ಯಗಳನ್ನು ಪೂರೈಸಲು ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂಬುದು ಈ ಕಾಯ್ದೆಯ ಸಾರ.
ಖಾಸಗಿಯಾಗಿ ನಿರ್ವಹಿಸಲ್ಪಡುವ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಅವುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ 1976ರ ಹಿಂದಿನ ಶಾಸನವನ್ನು ರದ್ದುಗೊಳಿಸುವ 2003ರ ಕಾನೂನನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠವು ಎತ್ತಿಹಿಡಿದಿದೆ.
ಕೆಎಸ್ಆರ್ಟಿಸಿ ಮತ್ತು ಇತರರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಹಿಂದಿನ ಕಾನೂನಿನ ರದ್ದತಿಯು ಶಾಸಕಾಂಗದ ಅನಿಯಂತ್ರಿತ ಕ್ರಿಯೆ ಅಲ್ಲ. ಬದಲಿಗೆ, ಅಸ್ತಿತ್ವದಲ್ಲಿರುವ ನಿಯಂತ್ರಣ ಚೌಕಟ್ಟಿನಲ್ಲಿನ ಗುರುತಿಸಲ್ಪಟ್ಟ ನ್ಯೂನತೆಗಳನ್ನು ಮತ್ತು ಸಾರಿಗೆ ವಲಯವನ್ನು ಉದಾರೀಕರಣಗೊಳಿಸುವ ಅಗತ್ಯ ಬೆಂಬಲಿಸುವ ಉದ್ದೇಶ ಮತ್ತು ಸ್ಪಷ್ಟ ಕಾರಣಗಳ ಆಧಾರದ ಮೇಲೆ ತೆಗೆದುಕೊಂಡಿರುವ ಕ್ರಮವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.
ಕೆಸಿಸಿಎ ಕಾಯ್ದೆಯ ಮೂಲಕ ಕೆಎಸ್ಆರ್ಟಿಸಿಗೆ ದೊರೆತಿರುವ ಏಕಸ್ವಾಮ್ಯತೆಯನ್ನು ಕಿತ್ತು ಹಾಕುವುದು ಮತ್ತು ಹೆಚ್ಚುತ್ತಿರುವ ಸಾರ್ವಜನಿಕ ಸಾರಿಗೆ ಅಗತ್ಯಗಳನ್ನು ಪೂರೈಸಲು ಖಾಸಗಿ ಬಸ್ಗಳಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿತ್ತು ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠದ ತೀರ್ಪನ್ನು ಒಪ್ಪಿಕೊಂಡಿರುವ ನ್ಯಾಯಪೀಠ, ಈ ಕಾಯ್ದೆ ರದ್ದತಿಯ ಕ್ರಮವು ಆಧುನಿಕ ಸಾರಿಗೆಯ ಪ್ರಾಯೋಗಿಕ ವಾಸ್ತವಿಕತೆಗೆ ತಕ್ಕನಾದ ಕ್ರಮವಾಗಿದೆ ಎಂದಿದೆ.
ಹೆಚ್ಚುತ್ತಿರುವ ಸಾರ್ವಜನಿಕ ಸೇವೆಗಳು, ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ, ಸಮರ್ಥ ಸೇವೆ ಮತ್ತು ಹೆಚ್ಚು ಬದಲಾಗುವ ನಿಯಂತ್ರಣ ನಿಯಮಗಳಂತಹ ಸಮಕಾಲೀನ ಸವಾಲುಗಳನ್ನು ಎದುರಿಸಲು ಈ ಕ್ರಮ ಅಗತ್ಯ ಎಂದು ನ್ಯಾಯಪೀಠ ಹೇಳಿದೆ.
ಕರ್ನಾಟಕ ಕಾಂಟ್ರಾಕ್ಟ್ ಕ್ಯಾರೇಜ್ (ಸ್ವಾಧೀನ) ಕಾಯ್ದೆ- 1976 ಅನ್ನು ರದ್ದುಗೊಳಿಸುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಕಾಯ್ದೆ- 2003ರ ಸೆಕ್ಷನ್ 3 ಸಾಂವಿಧಾನಿಕವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.ರಾಜ್ಯ ಶಾಸಕಾಂಗವು ಕಾಯ್ದೆ ಯನ್ನು ರದ್ದುಗೊಳಿಸಲು ತನ್ನ ಅಧಿಕಾರವನ್ನು ಸರಿಯಾಗಿ ಚಲಾಯಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ 2011ರ ಮಾರ್ಚ್ 28ರಂದು ನೀಡಿದ್ದ ತೀರ್ಪಿನ ವಿರುದ್ಧ ಕೆಎಸ್ಆರ್ಟಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಕೆಸಿಸಿಎ ಕಾಯ್ದೆಯನ್ನು ರದ್ದುಗೊಳಿಸುವುದು ಅಸಂವಿಧಾನಿಕ ಎಂದು ಕೆಎಸ್ಆರ್ಟಿಸಿ ಮಾಡಿದ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.