ಇಸ್ಲಾಮಾಬಾದ್, ಮಾರ್ಚ್ 02: ಭಾರತ ನಡೆಸಿದ್ದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಹಾನಿಗೊಳಗಾಗಿದ್ದ ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆ ಮೇಲೆ ಇದೀಗ ಅಫ್ಘಾನಿಸ್ತಾನದ ವಾಯುದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವು ತಿಂಗಳುಗಳ ಪುನರ್ನಿರ್ಮಾಣ ಕಾರ್ಯದ ನಂತರ ಸುಧಾರಿಸಿಕೊಂಡಿದ್ದ ಈ ಪ್ರಮುಖ ಮಿಲಿಟರಿ ತಾಣ ಮತ್ತೊಮ್ಮೆ ದಾಳಿಗೆ ಗುರಿಯಾಗಿದೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಸರ್ಕಾರ ಪಾಕಿಸ್ತಾನದ ಹಲವಾರು ಪ್ರಮುಖ ವಾಯುನೆಲೆಗಳು ಹಾಗೂ ಸೈನಿಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ ಸೇರಿದಂತೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ 12ನೇ ಡಿವಿಷನ್ ಪ್ರಧಾನ ಕಚೇರಿ ಹಾಗೂ ಖೈಬರ್ ಪಖ್ತುನ್ಖ್ವಾದ ಮೊಹಮ್ಮದ್ ಏಜೆನ್ಸಿಯ ಖ್ವಾಜೈ ಮಿಲಿಟರಿ ಶಿಬಿರದ ಮೇಲೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್, ಬಾಗ್ರಾಮ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ನಡೆಸಿದ ಮಿಲಿಟರಿ ದಾಳಿಗಳಿಗೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ಇತ್ತೀಚಿನ ಗಡಿ ಘರ್ಷಣೆಯಲ್ಲಿ 415 ಅಫ್ಘಾನ್ ತಾಲಿಬಾನ್ ಸಿಬ್ಬಂದಿ ಮೃತಪಟ್ಟಿದ್ದು, 580ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ.
ಸುಮಾರು 2,600 ಕಿ.ಮೀ. ಉದ್ದದ ಪಾಕ್-ಅಫ್ಘಾನ್ ಗಡಿಯಲ್ಲಿ 53 ಸ್ಥಳಗಳಲ್ಲಿ ಅಫ್ಘಾನ್ ದಾಳಿಕೋರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಪ್ರತಿಯಾಗಿ ಪಾಕಿಸ್ತಾನ ‘ಗಜಬ್ ಲಿಲ್ ಹಕ್’ ಎಂಬ ಸೈನಿಕ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಈ ವೇಳೆ 185 ಟ್ಯಾಂಕ್ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿ ಬಂದೂಕುಗಳನ್ನು ನಾಶಪಡಿಸಲಾಗಿದೆ ಎಂದು ಪಾಕಿಸ್ತಾನಿ ಮೂಲಗಳು ಹೇಳಿವೆ.
ಇದಕ್ಕೂ ಮುನ್ನ ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಚಿವ ಡಾ. ತಾರಿಕ್ ಫಜಲ್ ಚೌಧರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ‘ಕಾರ್ಯಾಚರಣೆ ಮುಕ್ತಾಯ’ ವರದಿಗಳನ್ನು ತಳ್ಳಿಹಾಕಿ, ಅಫ್ಘಾನ್ ತಾಲಿಬಾನ್ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದರು.
ಇನ್ನೊಂದೆಡೆ, ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಅಫ್ಘಾನ್ ತಾಲಿಬಾನ್ ಹೇಳಿಕೊಂಡಿದ್ದರೂ, ಪಾಕಿಸ್ತಾನಿ ಅಧಿಕಾರಿಗಳು ಆ ದಾವೆಯನ್ನು ನಿರಾಕರಿಸಿದ್ದಾರೆ. ಪಾಕಿಸ್ತಾನ ಮತ್ತೊಮ್ಮೆ ಅಫ್ಘಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದರೆ ಅಥವಾ ಆಕ್ರಮಣಕಾರಿ ಕ್ರಮ ಕೈಗೊಂಡರೆ ಕಠಿಣ ಪ್ರತಿಕ್ರಿಯೆ ನೀಡುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ.
ಗಡಿಭಾಗದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಅಂತಾರಾಷ್ಟ್ರೀಯ ಸಮುದಾಯ ಕಣ್ಣಿಟ್ಟಿದೆ.
