ಆಲೂರು : ಧರ್ಮಗಳ, ಜಾತಿಗಳ ಭೇದವಿಲ್ಲದೆ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವವನ್ನು ಬೆಳೆಸುವುದೇ ಇಫ್ತಾರ್ ಸೌಹಾರ್ದ ಕೂಟದ ಮುಖ್ಯ ಉದ್ದೇಶ ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಪಟ್ಟಣದ ದೊಡ್ಡಿಬೀದಿ ಪ್ರಕೃತಿ ನಗರದಲ್ಲಿರುವ ಜಬಿಉಲ್ಲ ಗೃಹದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಸೌಹಾರ್ದ ಕೂಟದ ಉದ್ಘಾಟನೆ ಮಾಡಿ ಮಾತನಾಡಿ ಸ್ವಾಮಿ ವಿವೇಕಾನಂದರು ಹೇಳುವಂತೆ ಇಸ್ಲಾಮಿನ ದೇಹ, ವೇದಾಂತದ ಮೆದುಳು ಸೇರಿದಾಗ ಮಾತ್ರ ಭಾರತದ ಔನತ್ಯ ಸಾಧ್ಯ. ಎಲ್ಲಾ ಧರ್ಮಗಳ ಅಂತಿಮ ಗುರಿ ಮಾನವ ಜೀವನದ ಸಾಕ್ಷತ್ಕಾರ, ಮುಕ್ತಿಯಾಗಿದೆ.
ಎಲ್ಲಾ ಧರ್ಮಗಳು ಪ್ರೀತಿ, ಸ್ನೇಹ, ಸಹೋದರತೆ, ತ್ಯಾಗ, ಸಹಕಾರ ಮುಂತಾದ ಉನ್ನತ ಗುಣಧರ್ಮಗಳನ್ನೇ ಬೋಧಿಸುತ್ತವೆ. ಇಸ್ಲಾಂ ಧರ್ಮ, ಕ್ರಿಶ್ಚಿಯನ್ ಧರ್ಮ, ಲಿಂಗಾಯತ ಧರ್ಮ ಇವೆಲ್ಲವೂ ಏಕದೇವೋಪಾಸನೆಗೆ ಒತ್ತು ನೀಡಿ ಕಾಯಕ ಸಿದ್ಧಾಂತ, ಸಹಕಾರ ಗುಣಗಳಿಗೆ, ದಾಸೋಹ ಗುಣಗಳಿಗೆ ಹೆಚ್ಚು ಒತ್ತು ನೀಡಿದವು. ಮೊಹಮ್ಮದ್ ಪೈಗಂಬರ್, ಏಸುಕ್ರಿಸ್ತ, ಬುದ್ಧ, ಬಸವಣ್ಣ ಮುಂತಾದ ಮಹಾಮಾನವತಾ ವಾದಿಗಳೆಲ್ಲರೂ ಮನುಷ್ಯನ ಬದುಕಿನ ಔನತ್ಯಕ್ಕಾಗಿ ಬೇಕಾದ ಗುಣಧರ್ಮಗಳನ್ನೇ ಬೋಧಿಸಿದ್ದಾರೆ. ಧರ್ಮಾಂಧತೆಯ ಮಡುವಿನಲ್ಲಿ ಒದ್ದಾಡುತ್ತಿರುವ ವರ್ತಮಾನದಲ್ಲಿ ಧರ್ಮಾತೀತ, ಜಾತ್ಯಾತೀತ ಮನೋಭಾವಗಳು, ಸೌಹಾರ್ದಭಾವಗಳು ಅತಿಮುಖ್ಯವಾಗಿವೆ ಎಂದರು.
ಆಮಾಅತೆ ಇಸ್ಲಾಮೀ ಹಿಂದ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಜ. ರಿಜ್ವಾನ್ ಖಾಲಿದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಫ್ತಾರ್ ಕೂಟವು ಮುಸ್ಲಿಮರು ಪವಿತ್ರ ರಂಜಾನ್ ಮಾಸದಲ್ಲಿ ಸೂರ್ಯಾಸ್ತದ ನಂತರ ತಮ್ಮ ದಿನದ ಉಪವಾಸವನ್ನು ಹಂಚಿಕೊಂಡು ಮುರಿಯುವ ಸೌಹಾರ್ದಯುತ ಕೂಟವಾಗಿದೆ. ದೇಶದಾದ್ಯಂತ ಈ ಕೂಟಗಳನ್ನು ಅರ್ವಧರ್ಮ ಸೌಹಾರ್ದತೆ, ಶಾಂತಿ ಮತ್ತು ಪ್ರೀತಿಯ ಸಂಕೇತವಾಗಿ ಆಯೋಜಿಸಲಾಗುತ್ತದೆ. ಸಹಜವಾಗಿ ವಿವಿಧ ಧರ್ಮದ ಸಮಾನ ಮನಸ್ಕರು ಭಾಗಿಯಾಗಿ ಆಚರಿಸಿ ಧರ್ಮಗಳ ಸಾರ, ಐಕ್ಯತೆ ಅರಿಯುವುದಾಗಿದೆ ಎಂದರು.
ಆಲೂರು ಬಿಲಿವಿಯರ್ಸ್ ಚರ್ಚಿನ ಫಾದರ್ ಡಿ.ಸಿ. ಬಸವರಾಜ್ ಮಾತನಾಡಿ ಭಾರತವೊಂದು ಬಹುಧರ್ಮೀಯ ರಾಷ್ಟçವಾದ್ದರಿಂದ ಎಲ್ಲಾ ಧರ್ಮಗಳ ಅನ್ಯೋನ್ಯತೆ, ಐಕ್ಯತೆ ಮುಖ್ಯ. ಈ ದಿಸೆಯಲ್ಲಿ ಪರಸ್ಪರ ಬ್ರಾತೃತ್ವ, ಸಹಕಾರ, ಭಾವೈಕ್ಯತೆ ವೃದ್ಧಿಸುವ ಹಿನ್ನೆಲೆಯಲ್ಲಿ ಇಂತಹ ಕೂಟಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಕಾರ್ಯಕ್ರಮದಲ್ಲಿ ಮೊಹಮ್ಮದ್ ಜಬಿಉಲ್ಲ, ಜಾಫರ್ ಸೇರಿದಂತೆ ವಿವಿಧ ಧರ್ಮದ ಮುಖಂಡರು ಉಪಸ್ಥಿತರಿದ್ದರು.
