ಮಂಗಳೂರು: ಮಂಗಳೂರು ಹೊರವಲಯದ ಕೋಟೆಕಾರ್ ಸಹಕಾರಿ ಬ್ಯಾಂಕ್ನಲ್ಲಿನ ದರೋಡೆ, ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿತ್ತು. ಬ್ಯಾಂಕ್ಗೆ ನುಗ್ಗಿದ್ದ ಚೋರರು ಪಿಸ್ತೂಲ್ ತೋರಿಸಿ 12 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿದ್ದರು. ಇದರ ಬೆನ್ನಲ್ಲೇ ಇತ್ತೀಚೆಗೆ ಅದೇ ಮಂಗಳೂರು ಹೊರವಲಯದ ದೇರಳಕಟ್ಟೆ ಜಂಕ್ಷನ್ನಲ್ಲಿರುವ ಮುತ್ತೂಟ್ ಫೈನಾನ್ಸ್ಗೆ (Muthoot Finance) ಕನ್ನ ಹಾಕಲು ಮುಂದಾಗಿದ್ದ ಚೋರರು ಲಾಕ್ ಆಗಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಟೋರಿಯಸ್ ದರೋಡೆಕೋರರಿಬ್ಬರ ವಿಚಾರಣೆ ತೀವ್ರವಾಗಿದ್ದು, ಮಂಗಳೂರು ಪೊಲೀಸರು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.
ಕೇರಳ ಮೂಲದ ಐವರು ದರೋಡೆಕೋರರಿಂದ ದರೋಡೆಗೆ ಯತ್ನ
ಕೇರಳ ಮೂಲದ ಐವರು ದರೋಡೆಕೋರರಿಂದ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ್ದರು. ದರೋಡೆಗೂ ಮೊದಲು ಮುರುಳಿ ತಂಡ ಫೈನಾನ್ಸ್ನ ರೇಖಿ ನಡೆಸಿತ್ತು. ಫೈನಾನ್ಸ್ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನಾಭರಣವಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಎಂಬುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ತಡರಾತ್ರಿ ಕಟ್ಟಡದ ಹಿಂದಿರುವ ಮರವೇರಿ ಫೈನಾನ್ಸ್ ಕಟ್ಟಡ ಪ್ರವೇಶಿಸಿದ್ದ ಮುರುಳಿ, ಹರ್ಷದ್ ಮತ್ತು ಲತೀಫ್, ಅತ್ಯಾಧುನಿಕ ಸೈಲೆಂಟ್ ಡ್ರಿಲ್ ಮಿಷನ್ ತಂದಿದ್ದರು. ಫೈನಾನ್ಸ್ನಲ್ಲಿದ್ದ ಅತ್ಯಾಧುನಿಕ ಸೆನ್ಸರ್ ಸೈರನ್ ಮೊಳಗಿದ ಹಿನ್ನೆಲೆ ಸ್ಥಳದಲ್ಲೇ ಮುರುಳಿ ಮತ್ತು ಹರ್ಷದ್ ಸಿಕ್ಕಿಬಿದ್ದಿದ್ದು, ಲತೀಫ್ ಸ್ಥಳದಿಂದ ಪರಾರಿಯಾಗಿದ್ದ.
35 ಕೆಜಿಗೂ ಹೆಚ್ಚು ಚಿನ್ನಾಭರಣ ಮುತ್ತೂಟ್ ಫೈನಾನ್ಸ್ನಲ್ಲಿತ್ತು. ಆದರೆ ಕಂಟ್ರೋಲ್ ರೂಮ್ನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿತ್ತು. ಈ ಮೂವರು ಆರೋಪಿಗಳು ಈ ಹಿಂದೆ ಕೇರಳದಲ್ಲಿ ನಡೆದಿದ್ದ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಅನ್ನೋ ಮಾಹಿತಿ ಕೂಡ ತನಿಖೆಯಲ್ಲಿ ಬಯಲಾಗಿದೆ. ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ಮಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.
ಹಣಕಾಸು ಸಂಸ್ಥೆಗಳಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳು ಇಲ್ಲದೇ ಇದ್ದರೆ ಏನಾಗುತ್ತೆ ಅನ್ನೋದಕ್ಕೆ ಮಂಗಳೂರಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಸಾಕ್ಷಿಯಾಗಿತ್ತು. ಅದೇ ರೀತಿ ಭದ್ರತಾ ವ್ಯವಸ್ಥೆಗಳು ಸರಿಯಾಗಿ ಇದ್ದರೆ ಏನಾಗುತ್ತೆ ಅನ್ನೋದಕ್ಕೂ ಮಂಗಳೂರಿನಲ್ಲಿ ನಡೆದ ಕಳ್ಳತನಕ್ಕೆ ವಿಫಲ ಪ್ರಯತ್ನವೇ ಸಾಕ್ಷಿ ಆಗಿದೆ. ಆದರೆ ಈ ಫೈನಾನ್ಸ್ ಕಳ್ಳತನಕ್ಕೆ ಯತ್ನದಲ್ಲಿ ಭದ್ರತಾ ಸಲಕರಣೆಗಳೇ ಸಹಕಾರಿಯಾಗಿದೆ. ಜೊತೆಗೆ ಫೈನಾನ್ಸ್ನ ಕಂಟ್ರೋಲ್ ರೂಂ ಅಧಿಕಾರಿಗಳು, ಸ್ಥಳೀಯರು ಹಾಗೂ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ಕಳ್ಳತನವೊಂದು ತಪ್ಪಿತ್ತು.
