ಬೆಳಗಾವಿ / ಹಾಸನ : ಅರ್ಹ ಬರಹಗಾರರಿಗೆ ಅಥವಾ ಬರಹಕ್ಕೆ ಸೂಕ್ತವಾದ ಪ್ರೋತ್ಸಾಹ ಹಾಗೂ ಮೌಲ್ಯದೊರೆಯುತ್ತಿಲ್ಲ. ಪ್ರಶಸ್ತಿಗಳಿಂದು ವ್ಯಾಪಾರೀಕರಣ ಮತ್ತು ರಾಜಕಾರಣದ ಸರಕುಗಳಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕದ ದುರಂತ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಮಹಾಂತೇಶ ನಗರದ ಲಿಂಗಾಯಿತ ಸಂಘಟನೆಯ ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ ವರ್ತಮಾನದಲ್ಲಿ ಪ್ರಶಸ್ತಿಗಳೆಂದೆರೆ ವ್ಯಪಾರದ ಸರಕುಗಳಾಗಿವೆ. ರಾಜಕಾರಣ, ಹಣ, ಜಾತಿ, ಧರ್ಮ, ವರ್ಗಗಳ ಹಿತಾಸಕ್ತಿಯ ಆಧಾರಗಳ ಮೇಲೆ ಹಂಚಿಕೆಯಾಗುತ್ತಿರುವುದು ನಿಜವಾದ ಪ್ರತಿಭೆಗಳನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಇಂತಹ ವ್ಯವಸ್ಥೆಯ ವಿರುದ್ಧ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರಾರಂಭದಿಂದಲೂ ಕಾರ್ಯೋನ್ಮುಖವಾಗಿದೆ.

ಇದುವರೆಗೂ ಯಾವುದೇ ಅರ್ಜಿ ಆಹ್ವಾನಿಸದೇ ರಾಜ್ಯ ಹಾಗೂ ಹೊರ ರಾಜ್ಯಗಳ ನೂರಾರು ನೈಜ ಸಾಧಕರನ್ನು ಗುರುತಿಸಿ ಕನ್ನಡ ಸಾಹಿತ್ಯೇತಿಹಾಸದ ಪ್ರಮುಖರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದ್ದೇವೆ. ಕ್ರಿಯಾಶೀಲ ಜಿಲ್ಲಾಧ್ಯಕ್ಷೆ ಸುಶೀಲಾ ಗುರವ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಲವಾರು ಮೌಲಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಉದಯೋನ್ಮುಖ ಹಾಗೂ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ರಮೇಶ್ ಇಂಗಳಗಿ ನೇತೃತ್ವದಲ್ಲಿ ಬೈಲಹೊಂಗಲ, ವಿಜಯ ಬಡಿಗೇರ ನೇತೃತ್ವದಲ್ಲಿ ಖಾನಾಪುರ, ಬಿ.ಯು.ಭೈರಕದಾರ ನೇತೃತ್ವದಲ್ಲಿ ರಾಮದುರ್ಗ, ಡಾ. ಪಾರ್ವತಿದೇವಿ ಪಾಟೀಲ ನೇತೃತ್ವದಲ್ಲಿ ಬೆಳಗಾವಿ, ಹಣಮಂತ ಫ. ನಾಯಿಕ ನೇತೃತ್ವದಲ್ಲಿ ನಿಪ್ಪಾಣಿ, ಪ್ರೊ. ಸರೋಜಿನಿ ಸುರೇಂದ್ರ ಸಮಾಜೆ ನೇತೃತ್ವದಲ್ಲಿ ಚಿಕ್ಕೋಡಿ ತಾಲ್ಲೂಕುಗಳು ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಬಾಬಾ ಸಾಹೆಬ್ ಅಂಬೇಡ್ಕರ್ ಹೇಳುವಂತೆ ‘ಇತಿಹಾಸ ಅರಿಯದವನು ಇತಿಹಾಸ ಸೃಷ್ಠಿಸಲಾರ’ ಎನ್ನುವಂತೆ ‘ಸಾಹಿತ್ಯೇತಿಹಾಸ ಅರಿಯದವನು ಉತ್ಕೃಷ್ಟ ಸಾಹಿತ್ಯ ಸೃಜಿಸಲಾರ. ಕವಿಯಾದವನಿಗೆ ನಮ್ಮ ಪರಂಪರೆಯ ಅರಿವು ಅತ್ಯಗತ್ಯ. ಸಾಹಿತಿ ನಿತ್ಯ ಕಲಿಕಾರ್ತಿಯಾಗಬೇಕು. ಕಾವ್ಯ ಹಾಗೂ ಬರಹದ ಮುಖೇನ ಸಮಾಜದ ಕಟ್ಟಕಡೆಯ ವರ್ಗದ ತಲ್ಲಣಗಳಿಗೆ ಧ್ವನಿಯಾಗಬೇಕು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಸಾಹಿತ್ಯ ಸೃಜಿಸುವತ್ತ ಗಮನಹರಿಸಬೇಕು. ಕವಿಯಾದವನಿಗೆ ಅಧ್ಯಯನ ಮತ್ತು ಅಧ್ಯಾಪನ ಅತ್ಯಗತ್ಯ ಎಂದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಪ್ರಧಾನ ಮಾತುಗಳನ್ನಾಡಿ ಮಾನಸಿಕ ಪರಿವರ್ತನೆಯ ವೈಚಾರಿಕ ಮನೋಧರ್ಮವೇ ಸ್ತ್ರೀವಾದದ ಆಶಯವಾಗಿದೆ. ಸಮಾನತೆ ಅದರ ಗುರಿ. ಸೋಲಿಸುವವರನ್ನು ಸೋಲಿಸುವುದೇ ಹೋರಾಟದ ದಾರಿ. ಸ್ಥಗಿತವಾದುದನ್ನು ತಿರಸ್ಕರಿಸುವುದು ಚಲನಶೀಲವಾದುದನ್ನು ಸ್ವೀಕರಿಸುವುದು ಎಲ್ಲ ಚಳುವಳಿಗಳ ಸಮಾನ ಧೋರಣೆ. ಮಹಿಳಾ ಚಳುವಳಿಯು ಪುರುಷ ಮನೋಧರ್ಮ ಮತ್ತು ಪರಿಭಾಷೆಯನ್ನು ಮುರಿದು ಕಟ್ಟದಿದ್ದರೆ, ಯಥಾಸ್ಥಿತಿವಾದ ಮುಂದುವರಿಯುತ್ತದೆ. ದೌರ್ಜನ್ಯಕ್ಕೊಳಗಾಗುವ ಸ್ತ್ರೀ ಸಮುದಾಯವು ‘ನಾವೂ ನಿಮ್ಮಂತೆ ಮನುಷ್ಯರಲ್ಲವೇ?’ ಎಂದು ಕೇಳುವ ಬದಲಿಗೆ ‘ನೀವೂ ನಮ್ಮಂತೆ ಮನುಷ್ಯರಲ್ಲವೇ?’ ಎಂದು ಪ್ರಶ್ನಿಸಬೇಕು ಅಂದಾಗ ಶೋಷಕರು ದಿಗಿಲುಗೊಳ್ಳುತ್ತಾರೆ, ಮಾನಸಿಕ ಪರಿವರ್ತನೆಗೆ ಒಳಗಾಗುತ್ತಾರೆ ಎಂದು ಹೇಳಿದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಸುಶೀಲಾ ಗುರವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಣ್ಣು ಮಕ್ಕಳ ಸ್ಥಾನ ಮಾನ ಹಾಗೂ ಅವರಿಗೆ ಪ್ರೋತ್ಸಾಹ ನೀಡುವಂತಹ ಸಮಾಜ ನಿರ್ಮಾಣವಾಗಬೇಕಿದೆ. ಒಂದು ದಿನದ ಮಹಿಳಾ ದಿನಾಚರಣೆಯ ಅಲ್ಲ ಅದು ದಿನ ನಿತ್ಯ ವಿಚಾರಗಳಲ್ಲಿ ಕೃತಿಗಳಲ್ಲಿ ಮೂಡಿಬರುವಂತಹ ಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕೆಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪ್ರಸ್ತಾಪ ಪಡಿಸಿದರು.

ಸಾಹಿತಿ ಗುರುದೇವಿ ಹುಲೆಪ್ಪನವರಮಠ, ರತ್ನ ಪ್ರಭಾ ಬೆಲ್ಲದ, ಧಾರವಾಡ ಜಿಲ್ಲಾಧ್ಯಕ್ಷ ಎ ಎ ದರ್ಗಾ, ಈರಣ್ಣ ದೇಯನ್ನವರ ಅತಿಥಿ ಮಾತುಗಳನ್ನಾಡಿದರು. ವೇದಿಕೆಯ ಗೌರವಾಧ್ಯಕ್ಷರಾದ ಬಸವರಾಜ ಗಾರ್ಗಿ ಉಪಸ್ಥಿತರಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶಾಂತಾದೇವಿ ಹುಲೆಪ್ಪನವರಮಠ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಲಾ ರಾಜೇಂದ್ರ ಮಠದ ಅವರನ್ನು ಸನ್ಮಾನಿಸಲಾಯಿತು. ರಮೇಶ ಮಗದುಮ್, ರಮೇಶ ಇಂಗಳಗಿ, ವಿಜಯ ಬಡಿಗೇರ, ಹಣಮಂತ ನಾಯಕ, ಬಿ. ಯು. ಭೈರಕದಾರ, ಎಚ್.ಎಫ್. ನಾಯಿಕ, ಸುಧಾ ಸಾಬಣ್ಣವರ, ಗೀತಾ ಜಮಖಂಡಿ, ಗೌರಿ ರಾಮಗುರವಾಡಿ ಮುಂತಾದವರಿದ್ದರು. ತಾಲೂಕಾ ಅಧ್ಯಕ್ಷೆ ಡಾ. ಪಾರ್ವತಿ ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ನಡೆದು ಬಂದ ಹಾದಿಯನ್ನು ವಿವರಿಸಿದರು.
ಜಿಲ್ಲಾ ಘಟಕದ ನೂತನ ಸದಸ್ಯರಿಗೆ ಪದಗ್ರಹಣ ಮಾಡಲಾಯಿತು. ಜಿಲ್ಲಾ ಗೌರವಾಧ್ಯಕ್ಷರಾಗಿ ಬಸವರಾಜ ಗಾರ್ಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ಮ. ಹೂಗಾರ, ಲೀಲಾ ರಜಪೂತ; ಜಿಲ್ಲಾ ಕೋಶಾಧ್ಯಕ್ಷರಾಗಿ ಭಾರತಿ ಕೋರೆ; ಜಿಲ್ಲಾ ಕಾರ್ಯದರ್ಶಿಯಾಗಿ ದಾಮೋದರ ಬಡಿಗೇರ; ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಗೀತಾ ಪಾ. ಜಮಖಂಡಿ; ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಸಾವಿತ್ರಿ ಎನ್. ಉಪ್ಪಿನ; ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿ ಗೌರಿ ರಮೇಶ ರಾಮಗುರವಾಡಿ; ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಗಂಗಮ್ಮ ಎಸ್. ಪಾಟೀಲ; ಜಿಲ್ಲಾ ಪತ್ರಿಕಾ ಕಾರ್ಯದರ್ಶಿಯಾಗಿ ರಮೇಶ ಬ. ಮಗದುಮ್ ಹಾಗೂ ಜಿಲ್ಲಾ ಸಂಚಾಲಕರಾಗಿ ಮಹಾದೇವಿ ಪ್ರ ಪಾಟೀಲ ಮತ್ತು ಸುಧಾ ಪ್ರ. ಸಾಬಣ್ಣವರ ಅಧಿಕಾರ ಸ್ವೀಕರಿಸಿದರು.
ಸರೋಜಿನಿ ಸಮಾಜೆ ಸ್ವಾಗತಿಸಿದರು. ಕೆಎಚ್ ಪಿ ಎಸ್ ನಂಬರ್ ೧೫ ಮಲಪ್ರಭಾ ನಗರ್ ಶಾಲೆಯ ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಗೂ ಜನಪದ ನೃತ್ಯ ಪ್ರದರ್ಶಿಸಿದರು ಪ್ರಕಾಶ ಗಾಣಿಗಿ ವಂದಿಸಿದರು. ಪ್ರೀತಿ ಕುಲಕರ್ಣಿ ನಿರೂಪಿಸಿದರು.
