
ಮಂಡ್ಯ: ಅರ್ಹ ಫಲಾನುಭವಿಗಳಿಗೆ ಸ್ಲಮ್ ಬೋರ್ಡ್ನಲ್ಲಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರಗಳನ್ನು ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.
ನಾಗಮಂಗಲ ಪಟ್ಟಣದ ವಾರ್ಡ್ ನಂ.1 ವ್ಯಾಪ್ತಿಯ ಸುಭಾಷ್ ಚಂದ್ರ ಬೋಸ್ ನಗರ ಕೊಳಗೇರಿ ಪ್ರದೇಶದಲ್ಲಿ ನರ್ಮ್-ಐಹೆಚ್ ಎಸ್ ಡಿಪಿ ಯೋಜನೆಯಡಿ ನಿರ್ಮಿಸಿರುವ 226 ಮನೆಗಳಿಗೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಇಂದು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಎಂದರು.
ನಾಗಮಂಗಲದ ಸುಭಾಷ್ ಚಂದ್ರ ಬೋಸ್ ಕೊಳಗೇರಿಯ 9 ಎಕರೆ 39 ಕುಂಟೆಯ ಪ್ರದೇಶದಲ್ಲಿ 226 ಮನೆಗಳು ನಿರ್ಮಾಣಗೊಂಡಿದ್ದು, ಅಲ್ಲಿಯ ಮನೆಗಳಲ್ಲಿ ಅಕ್ರಮವಾಗಿ ವಾಸಿಸುವತ್ತಿರುವವರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲು ಸೂಚಿಸಿದರು.
ಸ್ಲಮ್ ಬೋರ್ಡ್ ಪ್ರಕಾರ ಎಷ್ಟು ಜನ ಫಲಾನುಭವಿಗಳು ಇದ್ದಾರೆ ಮತ್ತು ಸ್ಲಮ್ ಬೋರ್ಡ್ಗೆ ಒಳಪಡದೆ ಇರುವ ಎಷ್ಟು ಜನ ಫಲಾನುಭವಿಗಳಿದ್ದಾರೆ ಎಂದು ಪಟ್ಟಿ ಮಾಡಿ, ಅವರು ಆಧಾರ್ ಸಂಖ್ಯೆ, ಹೆಸರು, ವಿಳಾಸ, ಕುಟುಂಬ ಸದಸ್ಯರು, ಅವರಿಗೆ ಇನ್ನಿತರೆ ನಿವೇಶನಗಳು ಇವೆಯಾ, ಅವರು ಮೂಲ ನಿವಾಸಿಗಳಾ ಎಂದು ಪರೀಶೀಲನೆ ನಡೆಸಲು ತಹಶೀಲ್ದಾರ್, ಚೀಫ್ ಆಫೀಸರ್, ಸ್ಲಮ್ ಬೋರ್ಡ್ನ ಕಾರ್ಯಪಾಲಕ ಅಭಿಯಂತರರು ಮತ್ತು ಜೆ ಎನ್ ಯು, ಪುರಸಭೆ ಮುಖ್ಯಾಧಿಕಾರಿ ಒಳಗೊಂಡಂತೆ ಒಂದು ತಂಡ ರಚಿಸಲು ತಿಳಿಸಿದರು.
ಜಿ.ಪಿ.ಎಸ್ ಫೋಟೋಗಳೊಂದಿಗೆ ಪ್ರತಿ ನಿವಾಸಕ್ಕೂ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಆದರ್ಶ್, ಜಬ್ರುಲ್ಲಾ, ಯೋಗಾನಂದ, ಪುರಸಭೆ ಸದಸ್ಯ ನರಸಿಂಹ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.