ಅಧ್ಯಾಯ-1
ಶ್ಲೋಕ – 10
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ ॥೧೦॥
ಅಪರ್ಯಾಪ್ತಮ್ ತತ್ ಅಸ್ಮಾಕಮ್ ಬಲಮ್ ಭೀಷ್ಮ ಅಭಿರಕ್ಷಿತಮ್ ಪರ್ಯಾಪ್ತಮ್ ತು ಇದಮ್ ಏತೇಷಾಮ್ ಬಲಮ್ ಭೀಮ ಅಭಿರಕ್ಷಿತಮ್-ಭೀಷ್ಮಾಚಾರ್ಯರ ಕಣ್ಗಾಪಿನ ಆ ನಮ್ಮ ಸೇನೆಯ ಸಜ್ಜು ಸಾಲದು. ಭೀಮನ ಕಣ್ ಗಾಪಿನ ಇವರ ಈ ಸೇನೆಯೋ ಸಾಕಷ್ಟು ಸಿದ್ಧಗೊಂಡಿದೆ.
ಇಲ್ಲಿ ದುರ್ಯೋಧನನ ಮಾತಿನ ಪರ್ಯಾವಸಾನ(Conclusion)ವಿದೆ . ಆತ ಹೇಳುತ್ತಾನೆ “ಆ ನಮ್ಮ ಸೈನ್ಯವಿದೆಯಲ್ಲ, ಪಾಂಡವ ಪಕ್ಷಪಾತಿ ಭೀಷ್ಮಾಚಾರ್ಯರ ಮುಂದಾಳತ್ವದಲ್ಲಿನ ಆ ನಮ್ಮ ಸೈನ್ಯ, ಅದು ಭೀಮನ ಕಣ್ಗಾಪಿನ ಈ ಸೈನ್ಯದ ಮುಂದೆ ಸಜ್ಜಾಗಿರುವುದು ಸಾಲದು” ಎಂದು. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ ಭೀಷ್ಮಾಚಾರ್ಯರು ಕೌರವ ಸೇನಾಧಿಪತಿ. ಆದರೆ ಭೀಮ ಪಾಂಡವ ಸೇನಾಧಿಪತಿ ಅಲ್ಲ. ದುರ್ಯೋಧನನಿಗೆ ಭೀಮನ ಮೇಲೆ ದ್ವೇಷವಿದೆ ಹಾಗು ಭಯವಿದೆ. ಆ ಕಾರಣದಿಂದ ಆತ ಭೀಮನ ಕಣ್ಗಾಪಿನ ಪಾಂಡವ ಸೇನೆ ಎಂದು ಸಂಬೋಧಿಸುತ್ತಾನೆ.
ಇನ್ನೂ ಸೂಕ್ಷ್ಮವಾಗಿ ನೋಡಿದರೆ- ದುರ್ಯೋಧನ ಯುದ್ಧ ಭೂಮಿಯಲ್ಲಿ ತನ್ನ ಸೇನೆಯ ಮುಂಚೂಣಿಯಲ್ಲಿ ನಿಂತಿದ್ದಾನೆ. ಪಾಂಡವ ಸೇನೆ ಆತನಿಂದ ದೂರದಲ್ಲಿದೆ. ಆದರೆ ಮಾತನಾಡುವಾಗ ಆತ “ಈ ಪಾಂಡವ ಸೇನೆ” ಹಾಗು “ಆ ನಮ್ಮ ಸೇನೆ” ಎಂದು ಸಂಬೋಧಿಸುತ್ತಾನೆ. ಪಾಂಡವ ಸೇನೆ ಈಗಾಗಲೇ ತನ್ನ ಹತ್ತಿರ ಬಂದು ನಿಂತಿದೆ ಹಾಗು ತನ್ನ ಸೇನೆ ತನ್ನಿಂದ ಬಲು ದೂರದಲ್ಲಿದೆ ಎನ್ನುವಂತೆ ಆತ ಮಾತನಾಡುತ್ತಿದ್ದಾನೆ.

[…] […]