ಶ್ಲೋಕ – 43
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೈಹಿಕಮ್ ।
ಯತತೇ ಚ ತತೋ ಭೂಯಃ ಸಂಸಿದ್ಧೌ ಕುರುನಂದನ ॥೪೩॥
ತತ್ರ ತಮ್ ಬುದ್ಧಿಸಂಯೋಗಮ್ ಲಭತೇ ಪೌರ್ವ ದೈಹಿಕಮ್ ।
ಯತತೇ ಚ ತತಃ ಭೂಯಃ ಸಂಸಿದ್ಧೌ ಕುರುನಂದನ-ಈ ಜನ್ಮದಲ್ಲು ಹಿಂದಿನ ಜನ್ಮದ ವಿವೇಕದ ನಂಟನ್ನು ಮರಳಿ ಪಡೆಯುತ್ತಾನೆ. ಕುರುಕುಮಾರ, ಮತ್ತೆ ಮರಳಿ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ.
ಹಿಂದಿನ ಜನ್ಮದಲ್ಲಿ ಅವನು ಏನು ಸಾಧನೆ ಮಾಡಿದ್ದ ಅವೆಲ್ಲವೂ ಸ್ತುಪ್ತಪ್ರಜ್ಞೆಯಲ್ಲಿ ಹುದುಗಿದ್ದು ಅದಕ್ಕೆ ಅನುಗುಣವಾದ ವಾತಾವರಣ ಸಿಕ್ಕ ತಕ್ಷಣ ಅದು ಜಾಗೃತವಾಗುತ್ತದೆ. ಈ ಜನ್ಮದ ಬೆಳವಣಿಗೆ ಹಿಂದಿನ ಜನ್ಮದ ಬೆಳವಣಿಗೆಯ ಉತ್ತರಾರ್ಧವಾಗುತ್ತದೆ. ಒಂದು ವೇಳೆ ಹಿಂದಿನ ಜನ್ಮದಲ್ಲಿ ಹೆಚ್ಚು ಬೆಳವಣಿಗೆ ಆಗದೇ ಇದಿದ್ದರೆ ಇಲ್ಲಿ ಅದನ್ನು ಪ್ರಾರಂಭಿಸಬೇಕೇ ಹೊರತು ಅದಕ್ಕಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಪೂರ್ವ ಜನ್ಮದ ಸಂಸ್ಕಾರ ಸದಾ ನಮ್ಮೊಂದಿಗಿರುತ್ತದೆ ಹಾಗು ಆ ಸಂಸ್ಕಾರದೊಂದಿಗೆ ನಾವು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ಧ್ಯಾನಯೋಗವೆಂಬುವುದು ಒಂದು ಜನ್ಮದ ಸಾಧನೆಯಲ್ಲ.
