ಶ್ಲೋಕ – 41
ಪ್ರಾಪ್ಯ ಪುಣ್ಯಕೃತಾಂ ಲೋಕಾನುಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಂ ಶ್ರೀಮತಾಂ ಗೇಹೇ ಯೋಗಭ್ರಷ್ಟೋSಭಿಜಾಯತೇ ॥೪೧॥
ಪ್ರಾಪ್ಯ ಪುಣ್ಯಕೃತಾಮ್ ಲೋಕಾನ್ ಉಷಿತ್ವಾ ಶಾಶ್ವತೀಃ ಸಮಾಃ ।
ಶುಚೀನಾಮ್ ಶ್ರೀಮತಾಮ್ ಗೇಹೇ ಯೋಗ ಭ್ರಷ್ಟಃ ಅಭಿಜಾಯತೇ-ಇಂಥ ಯೋಗ ಭ್ರಷ್ಟನು ಪುಣ್ಯವಂತರ ಲೋಕಗಳನ್ನು ಪಡೆದು ಅಲ್ಲಿ ಬಹಳ ಕಾಲ ನೆಲಸಿ ಅನಂತರ ನಿರ್ಮಲರೂ ಸಿರಿವಂತರೂ ಆದವರ ಮನೆಯಲ್ಲಿ ಹುಟ್ಟುತ್ತಾನೆ.
ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೊ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ ವ್ಯರ್ಥವಲ್ಲ-ಇದು ಏಕೆ ಎನ್ನುವುದನ್ನು ಕೃಷ್ಣ ಹಿಂದಿನ ಅಧ್ಯಾಯದಲ್ಲೇ (ಅ-೨; ಶ್ಲೋ-೪೦) ಹೇಳಿದ್ದಾನೆ, ಅದಕ್ಕೆ ಒತ್ತು ಕೊಟ್ಟು ಇಲ್ಲಿ ಮತ್ತೆ ವಿವರಿಸುತ್ತಾನೆ. ಕೃಷ್ಣ ಹೇಳುತ್ತಾನೆ ಸಾಧನೆ ಮಧ್ಯದಲ್ಲಿ ನಿಂತು ಹೋದರೆ ಏನೂ ತೊಂದರೆ ಇಲ್ಲ. ಏಕೆಂದರೆ ಅಂತವನು ದೇಹತ್ಯಾಗ ಮಾಡಿದ ಮೇಲೆ ಪುಣ್ಯವನ್ನು ಗಳಿಸಿದವರು ಪಡೆಯುವಂತಹ ಲೋಕವನ್ನು ಪಡೆಯುತ್ತಾನೆ. ಬಹಳ ಕಾಲದ ತನಕ ಅಲ್ಲಿ ಸುಖವನ್ನು ಅನುಭವಿಸಿ, ಮತ್ತೆ ಭೂಮಿಯಲ್ಲಿ ಸ್ವಚ್ಛವಾದ ಶ್ರೀಮಂತ ವೇದಜ್ಞರ ಮನೆಯಲ್ಲಿ ಆತ ಹುಟ್ಟುತ್ತಾನೆ. ಆತನಿಗೆ ಯಾವುದೇ ಐಹಿಕ ಭೋಗದ ಕೊರತೆ ಕಾಡದು. ಯೋಗಸಾಧನೆಗೆ ಬೇಕಾದ ಅತ್ಯುತ್ತಮ ವಾತಾವರಣ ಅವನಿಗೆ ದೊರೆಯುತ್ತದೆ.
