ಶ್ಲೋಕ – 42
ಅಥವಾ ಯೋಗಿನಾಮೇವ ಕುಲೇ ಭವತಿ ಧೀಮತಾಮ್ ।
ಏತದ್ಧಿ ದುರ್ಲಭತರಂ ಲೋಕೇ ಜನ್ಮ ಯದೀದೃಶಮ್ ॥೪೨॥
ಅಥವಾ ಯೋಗಿನಾಮ್ ಏವ ಕುಲೇ ಭವತಿ ಧೀಮತಾಮ್ । ಏತತ್ ಹಿ ದುರ್ಲಭ ತರಮ್ ಲೋಕೇ ಜನ್ಮ ಯತ್ ಈದೃಶಮ್-ಅಥವಾ ಬಲ್ಲವರಾದ ಯೋಗಿಗಳ ಮನೆತನದಲ್ಲಿ ಹುಟ್ಟುತ್ತಾನೆ. ಲೋಕದಲ್ಲಿ ಈ ಬಗೆಯ ಹುಟ್ಟು ತುಂಬ ದುರ್ಲಭವಾದದ್ದು.
ಮುಂದುವರಿದು ಕೃಷ್ಣ ಹೇಳುತ್ತಾನೆ: ಯೋಗ ಸಾಧಕರಲ್ಲದಿದ್ದರೆ ಯೋಗ ಸಿದ್ಧರ ಮನೆಯಲ್ಲಿ ಆತ ಜನಿಸುತ್ತಾನೆ. ಇದರಿಂದ ಗರ್ಭದಿಂದಲೇ ಆತನಿಗೆ ಯೋಗದ ದೀಕ್ಷೆಯಾಗುತ್ತದೆ. ಹಿಂದಿನ ಜನ್ಮದಲ್ಲಿ ಆತ ಸಾಧನೆಯ ಯಾವ ಮೆಟ್ಟಿಲನ್ನು ಹತ್ತಿದ್ದನೋ ಆ ಮೆಟ್ಟಿಲನ್ನು ಸುಲಭವಾಗಿ ಆತ ತಲುಪಿ ಅಲ್ಲಿಂದ ಮುಂದಿನ ಸಾಧನೆ ಮಾಡುವ ಅವಕಾಶ ಅವನಿಗೆ ಸಿಗುತ್ತದೆ. ಇದು ಅಧ್ಯಾತ್ಮ ಸಾಧನೆಯಲ್ಲಿನ ವಿಶೇಷ. ಒಂದು ಜನ್ಮದಲ್ಲಿ ಎರಡು ಮೆಟ್ಟಿಲು ಹತ್ತಿದರೆ ಮುಂದಿನ ಜನ್ಮದಲ್ಲಿ ನೇರವಾಗಿ ಮೂರನೇ ಮೆಟ್ಟಿಲಿಗೆ ಹೆಜ್ಜೆ. ಈ ಕಾರಣದಿಂದ ಯಾವ ಸಾಧನೆಯೂ ವ್ಯರ್ಥವಲ್ಲ- ಈ ಬಗ್ಗೆ ಎಂದೂ ನಿರಾಶೆಪಡಬೇಕಾಗಿಲ್ಲ. ಈ ರೀತಿ ಪಕ್ವವಾದ ಜೀವ ಯೋಗಸಿದ್ಧರ ಮನೆಯಲ್ಲಿ ಹುಟ್ಟುವುದರಿಂದ ಆತನಿಗೆ ಅಲ್ಲಿ ಅನುವಂಶೀಯ ಸಾತ್ವಿಕ ಸೆಳೆತ (genetic force) ಮತ್ತು ಅದಕ್ಕೆ ಬೇಕಾದ ವಾತಾವರಣ (Environmental forces)ಸಿಗುತ್ತದೆ ಮತ್ತು ಆತ ಅಲ್ಲಿ ತನ್ನ ಸಾಧನೆಯನ್ನು ಮುಂದುವರಿಸುತ್ತಾನೆ. ಲೋಕದಲ್ಲಿ ಯೋಗಸಿದ್ಧರ ಮನೆಯಲ್ಲಿ ಹುಟ್ಟು ಬಹಳ ದುರ್ಲಭ. ಸಾಧನೆಯ ಹಾದಿಯಲ್ಲಿ ಎತ್ತರಕ್ಕೆರಿದವರಿಗೆ ಮಾತ್ರ ಈ ಭಾಗ್ಯ.
