ಬೆಂಗಳೂರು: ಪರಿಚಯಸ್ಥ ಕ್ಯಾಬ್ ಚಾಲಕನಿಂದ ಅಪಹರಣಕ್ಕೊಳಗಾಗಿ ಕೊಲೆಯಾಗಿದ್ದ ಹದಿಮೂರು ವರ್ಷದ ಬಾಲಕನ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲಎಂಬುದು ದೃಢಪಟ್ಟಿದೆ.
ಅರಕೆರೆಯಲ್ಲಿ ವಾಸವಿರುವ ಅಚ್ಯುತ್ ದಂಪತಿ ಪುತ್ರ ನಿಶ್ಚಿತ್ (13)ನನ್ನು ಜು.30ರಂದು ಸಾಯಂಕಾಲ ಟ್ಯೂಷನ್ ಮುಗಿಸಿ ವಾಪಸ್ ಬರುವಾಗ ಕ್ಯಾಬ್ ಚಾಲಕ ಗುರುಮೂರ್ತಿ ಅಪಹರಿಸಿದ್ದ.
ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಹಣ ಕೊಡದಿದ್ದಕ್ಕೆ ನಿಶ್ಚಿತ್ನನ್ನು ಕತ್ತುಸೀಳಿ ಕೊಲೆಗೈದು, ಬನ್ನೇರುಘಟ್ಟ ರಸ್ತೆಯ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶದಲ್ಲಿಮೃತದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಈ ಕೃತ್ಯಕ್ಕೆ ಸ್ನೇಹಿತ ಗೋಪಾಲಕೃಷ್ಣ ಎಂಬುವವನ ನೆರವು ಪಡೆದಿದ್ದ.
ಪ್ರಮುಖ ಆರೋಪಿ ಗುರುಮೂರ್ತಿ(27) ವಿರುದ್ಧ 2020ರಲ್ಲಿಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿಪೋಕ್ಸೊ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಆರೋಪಿ ಸೈಕೋ ಮನಸ್ಥಿತಿ ಹೊಂದಿದ್ದು, ಬಾಲಕ ನಿಶ್ಚಿತ್ ಮೇಲೆ ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಮೃತ ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿಲೈಂಗಿಕ ದೌರ್ಜನ್ಯ ನಡೆದಿಲ್ಲಎಂಬುದನ್ನು ವೈದ್ಯರು ದೃಧಿಢಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.(ಹಣಕ್ಕಾಗಿ ಬಾಲಕ ಕೊಲೆ; ಬಿಜೆಪಿ-ಕಾಂಗ್ರೆಸ್ ಜಟಾಪಟಿ)
ಹಣಕ್ಕಾಗಿ ಸಂಚು..!
ಆನ್ಲೈನ್ ಆಯಪ್ ಮುಖಾಂತರ ಪಾರ್ಟ್ಟೈಮ್ ಚಾಲಕನಾಗಿದ್ದ ಗುರುಮೂರ್ತಿ, ಕೆಲ ತಿಂಗಳ ಹಿಂದೆ ನಿಶ್ಚಿತ್ ತಾಯಿ, ಆಯಪ್ ಮುಖಾಂತರ ಬುಕ್ಕಿಂಗ್ ಮಾಡಿದಾಗ ಅವರ ಕಾರಿಗೆ ಚಾಲಕನಾಗಿ ಹೋಗಿದ್ದ. ಪ್ರಯಾಣದ ವೇಳೆ ಇನ್ನು ಮುಂದೆ ಆಯಪ್ ಬಿಟ್ಟು ನೇರವಾಗಿ ಕರೆ ಮಾಡುವಂತೆ ಅವರಿಗೆ ಒಪ್ಪಿಸಿದ್ದ. ಹೀಗಾಗಿ, ನಿಶ್ಚಿತ್ನ ತಾಯಿ ಹಲವು ಬಾರಿ ಗುರುಮೂರ್ತಿಯನ್ನು ಕಾರು ಚಾಲಕನಾಗಿ ಕರೆಸಿಕೊಂಡಿದ್ದರು. ಈ ಮೂಲಕ ಇಡೀ ಕುಟುಂಬಕ್ಕೆ ಗುರುಮೂರ್ತಿ ಪರಿಚಿತನಾಗಿದ್ದ
ಒಂದು ತಿಂಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ವೇಳೆ ಬಾಲಕ ನಿಶ್ಚಿತ್ನ ಜತೆ ಸ್ನೇಹ ಬೆಳೆಸಿಕೊಂಡಿದ್ದ. ಜತೆಗೆ, ನಿಶ್ಚಿತ್ ಒಬ್ಬನೇ ಪೋಷಕರಿಗೆ ಮಗನಾಗಿದ್ದು, ಅವನಿಗಾಗಿ ಇಡೀ ಕುಟುಂಬ ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲಿದೆ ಎಂದು ಅರಿತಿದ್ದ. ಹೀಗಾಗಿ, ನಿಶ್ಚಿತ್ನನ್ನು ಅಪಹರಿಸಿ ಹಣ ಸುಲಿಗೆ ಮಾಡುವ ಯೋಜನೆ ರೂಪಿಸಿ ಈ ಕೃತ್ಯಕ್ಕೆ ಸ್ನೇಹಿತ ಗೋಪಾಲಕೃಷ್ಣನನ್ನು ಒಪ್ಪಿಸಿದ್ದ.
ಭಯಗೊಂಡು ಕೊಂದೇ ಬಿಟ್ಟ..!
ಆರೋಪಿ ಗುರುಮೂರ್ತಿ, ಜು.30ರಂದು ಸಾಯಂಕಾಲ ನಿಶ್ಚಿತ್ ಟ್ಯೂಷನ್ ಮುಗಿಸಿಕೊಂಡು ಹೋಗುವ ವೇಳೆ ಅಲ್ಲಿಗೆ ತೆರಳಿ ತನ್ನ ಜತೆ ಬರುವಂತೆ ಕರೆದಿದ್ದ. ಪರಿಚಯವಾಗಿದ್ದರಿಂದ ನಿಶ್ಚಿತ್ ಬೈಕ್ ಹತ್ತುತ್ತಿದ್ದಂತೆ ಅಪಹರಿಸಿಕೊಂಡು ಹೋಗಿದ್ದ. ನಿಶ್ಚಿತ್ ಪೋಷಕರಿಗೆ ವಾಟ್ಸಾಪ್ ಕರೆ ಮಾಡಿ ಐದು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ. ಪೋಷಕರು ಹಣ ಕೊಡಲು ಒಪ್ಪಿಕೊಂಡಿದ್ದರು.
ಕೆಲ ಸಮಯದ ಬಳಿಕ ತನ್ನ ಮನಸ್ಸು ಬದಲಿಸಿಕೊಂಡ ಗುರುಮೂರ್ತಿ, ನಿಶ್ಚಿತ್ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿರಬಹುದು. ಇಲ್ಲವೇ ನಿಶ್ಚಿತ್ನೇ ನಾನೇ ಅಪಹರಿಸಿದ್ದು ಎಂದು ಪೋಷಕರ ಬಳಿ ಹೇಳಬಹುದು ಎಂದು ಲೆಕ್ಕಾಚಾರ ಹಾಕಿ ಕತ್ತು ಸೀಳಿ ಕೊಲೆಗೈದಿದ್ದ. ಕೊಲೆಗೈದ ಸುಮಾರು ಹೊತ್ತಿನ ಬಳಿಕ ಸ್ನೇಹಿತ ಗೋಪಾಲಕೃಷ್ಣ ಸ್ಥಳಕ್ಕೆ ಬಂದಿದ್ದ. ಬಳಿಕ ಇಬ್ಬರೂ ಪೆಟ್ರೋಲ್ ಸುರಿದು ಮೃತದೇಹವನ್ನು ಅರ್ಧಸುಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕಿಬೀಳುವ ಹಾಗೂ ತನ್ನ ಗುರುತನ್ನು ಬಾಲಕ ಮುಂದಿನ ದಿನಗಳಲ್ಲಿ ಪತ್ತೆಹಚ್ಚಬಹುದು ಎಂಬ ಭಯದಲ್ಲಿ ಕೊಲೆಗೈದಿದ್ದಾಗಿ ಆರೋಪಿ ಗುರುಮೂರ್ತಿ ಪ್ರಾಥಮಿಕವಾಗಿ ತಿಳಿಸಿದ್ದಾನೆ. ಆದರೆ, ಆರೋಪಿಗಳಾದ ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಇಬ್ಬರೂ ಕಾಲಿಗೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ ನಂತರ ಯಾವ ವಿಚಾರಕ್ಕೆ ಕೊಲೆಗೈದ ಎಂಬುದು ದೃಧಿಪಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
