ಚನ್ನರಾಯಪಟ್ಟಣ: ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯು ಶುಕ್ರವಾರ ಜಿಲ್ಲೆಯ ಗಡಿ ಕಿರಿಸಾವೆಗೆ ಆಗಮಿಸಿದ್ದು ಹೂವಿನ ಹಾರಗಳನ್ನು ಹಾಕಿ, ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯ ಮುಂದೆ ಪ್ರತಿಷ್ಠಾಪನೆ ಆಗಲಿರುವ ಈ ಪ್ರತಿಮೆಯು ಮಧ್ಯಾಹ್ನ 1 ಗಂಟೆಗೆ ಮೇಟಿಕೆರೆ ವೃತ್ತಕ್ಕೆ ಆಗಮಿಸಿದಾಗ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಎಂಎಲ್ ಸಿ ಎಂ.ಎ. ಗೋಪಾಲಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಜೈ ಭೀಮ್ ಘೋಷಣೆಗಳನ್ನು ಕೂಗುತ್ತ, ನಾಸಿಕ್ ಡೋಲ್ ನಾದಕ್ಕೆ ಕುಣಿಯುತ್ತ, ಪುತ್ಥಳಿಯ ಮೆರವಣಿಗೆಯನ್ನು ಪ್ರಾರಂಭಿಸಿದರು. ರಾಜ್ಯ ಹೆದ್ದಾರಿ 8 ರಲ್ಲಿ ಸಾಗಿ, ಶ್ರೀಚೌಡೇಶ್ವರಿ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ, ಶ್ರೀಕಂಠಯ್ಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನರಾಯಪಟ್ಟಣದ ಕಡೆಗೆ ಸಾಗಿತು. ರಸ್ತೆ ಉದ್ದಕ್ಕೂ ಸಾರ್ವಜನಿಕರು ಹೂವಿನ ಹಾರ ಹಾಕಿ ಡಾ. ಅಂಬೇಡ್ಕರ್ ಪ್ರತಿಮೆಗೆ ನಮಿಸಿದರು.
ಜೆಡಿಎಸ್ ಮುಖಂಡರಾದ ಬೆಳಗೀಹಳ್ಳಿ ಪಟ್ಟಸ್ವಾಮಿ, ದಿಡಗ ವಾಸು, ರವಿಕುಮಾರ್, ಮಹೇಶ್, ರಘುರಾಮ್, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಬಿ.ಸಿ.ಕಿರಣ್, ಬ್ಯಾಡರಹಳ್ಳಿ ಯೋಗೇಶ್, ಪುರಸಾಭೆ ಅಧ್ಯಕ್ಷ ಮೋಹನ್ ಕೋಟೆ, ಪಿಎಲ್ಡಿಬಿ ಅಧ್ಯಕ್ಷ ಬಿ.ಎನ್. ಮಂಜುನಾಥ್, ದಲಿತ ಸಂಘಟನೆಯ ಮಹಾದೇವ್, ಸೋಮಶೇಖರ್, ದಂಡಿಗನಹಳ್ಳಿ ರವಿ, ಆಲದಹಳ್ಳಿ ವೆಂಕಟೇಶ್ ಗೋವಿಂದರಾಜ್, ಮತಿಘಟ್ಟ ರಂಗಸ್ವಾಮಿ, ನಾಗೇಶ್, ಹಿರೀಸಾವೆ ಮಂಜುನಾಥ್ ಮೌರ್ಯ, ಮಧು, ಹೊಸಹಳ್ಳಿ ಅಣ್ಣಯ್ಯ ,ಹರೀಶ್,ಸೇರಿದಂತೆ ಹೋಬಳಿಯ ದಲಿತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ : ಮಂಜುನಾಥ್ ಐ ಕೆ
