ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಿಶ್ತ್ವಾರ್ (Kishtwar) ಜಿಲ್ಲೆಯ ಚಿಶೋಟಿ ಗ್ರಾಮದಲ್ಲಿ ಆಗಸ್ಟ್ 14ರಂದು ಸಂಭವಿಸಿದ ಮೇಘಸ್ಫೋಟವು (Cloudburst) ಭಾರೀ ವಿನಾಶವನ್ನು ಉಂಟು ಮಾಡಿದೆ. ಕನಿಷ್ಠ 60 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಮನೆಗಳು, ತಾತ್ಕಾಲಿಕ ಶೆಡ್ಗಳು, ವಾಹನಗಳು ಭಾರೀ ಪ್ರವಾಹದಿಂದ ಕೊಚ್ಚಿ ಹೋಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ವಿಡಿಯೊಗಳು, ಮಚೈಲ್ ಮಾತಾ ಯಾತ್ರೆಯ ಯಾತ್ರಿಕರು ಜೀವ ಉಳಿಸಿಕೊಳ್ಳಲು ಓಡಾಡುವ, ಕಿರುಚಾಡುವ ಮತ್ತು ಗೊಂದಲದ ನಡುವೆ ಚಿಶೋಟಿಯಲ್ಲಿ ಪ್ರವಾಹದ ಭೀಕರ ಕ್ಷಣಗಳನ್ನು ತೋರಿಸಿವೆ. ಒಂದು ವಿಡಿಯೊದಲ್ಲಿ ಭಾರಿ ಪ್ರಮಾಣದ ನೀರು ಮನೆಗಳನ್ನು ಕೊಚ್ಚಿಕೊಂಡು, ಮರಗಳನ್ನು ಕಿತ್ತು, ದಾರಿಯಲ್ಲಿ ಸಿಗುವ ಎಲ್ಲವನ್ನೂ ನಾಶಪಡಿಸುವ ದೃಶ್ಯ ಕಾಣಿಸುತ್ತದೆ.
75 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳು ನೂರಾರು ಜನರು ಪ್ರವಾಹದಿಂದ ಕೊಚ್ಚಿಕೊಂಡು ಕಲ್ಲುಗಳು, ಮರದ ಕೊಂಬೆಗಳು, ಮತ್ತು ಅವಶೇಷಗಳ ಅಡಿ ಸಿಲುಕಿಕೊಂಡಿರಬಹುದು ಎಂದು ಹೇಳಿದ್ದಾರೆ. ಮೃತರಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಇಬ್ಬರು ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ನ ವಿಶೇಷ ಪೊಲೀಸ್ ಅಧಿಕಾರಿ (SPO) ಸೇರಿದ್ದಾರೆ.
ರಕ್ಷಣಾ ಕಾರ್ಯಾಚರಣೆಯು ತೀವ್ರವಾಗಿ ನಡೆಯುತ್ತಿದ್ದು, 167 ಜನರನ್ನು ಅವಶೇಷಗಳಿಂದ ಹೊರ ತೆಗೆಯಲಾಗಿದೆ. ಅವರಲ್ಲಿ 38 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, ಎಲ್ಲ ಸಂಭವನೀಯ ಸಹಾಯವನ್ನು ಒದಗಿಸುವ ಭರವಸೆಯನ್ನು ಪಡೆದಿದ್ದಾರೆ. “ಪ್ರಧಾನಮಂತ್ರಿ ಈ ದುರಂತದಲ್ಲಿ ಜೀವ ಕಳೆದುಕೊಂಡವರಿಗೆ ದುಃಖ ವ್ಯಕ್ತಪಡಿಸಿದ್ದಾರೆ” ಎಂದು ಅಬ್ದುಲ್ಲಾ ಹೇಳಿದ್ದಾರೆ. ವರದಿಯ ಪ್ರಕಾರ, ಕನಿಷ್ಠ 16 ಮನೆಗಳು, ಸರ್ಕಾರಿ ಕಟ್ಟಡಗಳು, ಮೂರು ದೇವಾಲಯಗಳು, 30 ಮೀಟರ್ ಉದ್ದದ ಸೇತುವೆ, ಮತ್ತು ಒಂದು ಡಜನ್ಗಿಂತಲೂ ಹೆಚ್ಚು ವಾಹನಗಳು ಪ್ರವಾಹದಿಂದ ಹಾನಿಗೊಳಗಾಗಿವೆ.

[…] […]