ಮೈಸೂರು : ಮುಂದಿನ ದಿನಗಳಲ್ಲಿ ಉತ್ತಮ ನಾಯಕನಾಗಬೇಕಾದರೆ ಟೆಕ್ನಾಲಾಜಿಯ ಬಳಕೆಯನ್ನು ಸರಿಯಾಗಿ ತಿಳಿದಿರಬೇಕು ಎಂದು ಎಸ್ಡಿಎಂ ಅಧ್ಯಕ್ಷರಾದ ಡಾ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಮೈಸೂರು ಎಸ್ಡಿಎಂ ಐಎಂಡಿ ಕಾಲೇಜಿನ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ನೈತಿಕ ಮಾರ್ಗ ತುಂಬಾ ಮುಖ್ಯ. ಎಸ್ಡಿಎಂ ಐಎಂಡಿಯಲ್ಲಿ ಆ ಮಾರ್ಗವನ್ನು ತೋರಿಸಿದ್ದಾರೆ ಎಂದು ತಿಳಿಯುತ್ತೇನೆ.
ಭಾರತ ಹೊಸ ಪ್ರತಿಭೆಗಳನ್ನು ಬಯಸುತ್ತಿದೆ. ಸಾಧನೆಯೆಂದರೆ ಕೇವಲ ನಾವು ಬೆಳೆಯುವುದು ಮಾತ್ರವಲ್ಲ. ನಮ್ಮ ಜೊತೆ ಇರುವವರನ್ನೂ ಬೆಳೆಸುವುದು. ಒಂದು ಡಿಗ್ರಿ ಪಡೆದರೆ ಅಲ್ಲಿಗೆ ಶಿಕ್ಷಣ ಮುಗಿಯಿತು ಅಂತಲ್ಲ. ಇನ್ನೂ ಹೆಚ್ಚಿನ ಶಿಕ್ಷಣಕ್ಕೆ ಡಿಗ್ರಿ ಒಂದು ಹಂತವಷ್ಟೆ. ಧೈರ್ಯವಾಗಿ ಮುಂದೆ ಸಾಗಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಿಸಿ ಮಾತನಾಡಿದ ಕಾರ್ಯಕ್ರಮದ ವಿಶೇಷ ಅತಿಥಿ ಟಿವಿಎಸ್ ಆಟೊಮೊಬೈಲ್ ಸೊಲ್ಯೂಷನ್ಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ನಟರಾಜನ್ ಶ್ರೀನಿವಾಸನ್, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ನೋಡಬೇಕೆಂದರೆ ಮೈಸೂರಿಗೆ ಬರಬೇಕು. ಅದರಲ್ಲಿಯೂ ಎಸ್ಡಿಎಂ ವಿದ್ಯಾರ್ಥಿಗಳಲ್ಲಿನ ಶಿಸ್ತನ್ನು ನೋಡಿದರೆ ಸಂತೋಷವಾಗುತ್ತದೆ. ದೇಶದಲ್ಲಿ ಧರ್ಮಸಂರಕ್ಷಣೆ ಮಾಡುವಲ್ಲಿ ಧರ್ಮಸ್ಥಳದ ಪಾತ್ರ ಮಹತ್ತರವಾದದ್ದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಹೇಳಿದರು.

ನನ್ನ ವಿದ್ಯಾರ್ಥಿ ಜೀವನದಲ್ಲಿ ಮನೆಯಿಂದ ಬೇರೆ ಕಡೆ ಹೋಗಿ ಶಿಕ್ಷಣ ಪಡೆಯುವ ಅಥವಾ ಕೆಲಸ ಮಾಡುವ ಮನಸ್ಸು ಇರಲಿಲ್ಲ. ಆದರೆ ಜೀವನ ನಮಗೆ ಎಲ್ಲವನ್ನೂ ಕಲಿಸುತ್ತದೆ. ನಂತರದ ದಿನಗಳಲ್ಲಿ ನಾನು ದೇಶದ ಮತ್ತು ವಿದೇಶದ ಹಲವು ಭಾಗಗಳಿಗೆ ಹೋಗಿ ಕಾರ್ಯ ನಿರ್ವಹಿಸುವ ಅವಕಾಶ ದೊರಕಿತು. ನಾವು ಸಾಧನೆ ಮಾಡಬೇಕಾದರೆ ನಮ್ಮವರದ್ದೇ ವಲಯದಲ್ಲಿರುವುದನ್ನು ಬಿಡಬೇಕು ಎಂದರು.
ಶಿಕ್ಷಣ ಸಂಸ್ಥೆಗಳು ಬೆಳೆದಂತೆ ಅಲ್ಲಿನ ವಿದ್ಯಾರ್ಥಿಗಳ ಗುಣಮಟ್ಟವೂ ಉತ್ಕೃಷ್ಟವಾಗುತ್ತದೆ ಮತ್ತು ಇದರಿಂದ ವಿನಮ್ರತೆಯೂ ಬೆಳೆಯುತ್ತದೆ ಎಂದು ಹೇಳುತ್ತಾ ರತನ್ ಟಾಟಾ ಅವರ ಉದಾಹರಣೆಯನ್ನು ನೀಡಿದರು.
ಕಾಲೇಜಿನ ನಿರ್ದೇಶಕ ಪ್ರಸಾದ್ ಎಸ್ಎನ್ ಮಾತನಾಡಿ, ಎಸ್ಡಿಎಂ ಐಎಂಡಿ ಕಾಲೇಜು ವರ್ಷದಿಂದ ವರ್ಷಕ್ಕೆ ಉತ್ತಮ ದರ್ಜೆಯನ್ನು ಹೊಂದುತ್ತಿದೆ. ನಮ್ಮಲ್ಲಿ ವಿದ್ಯಾರ್ಥಿಗಳನ್ನು ಇಂಟರ್ನ್ಶಿಪ್ಗೆ ಕಳುಹಿಸುವ ಮೊದಲು ವಿದ್ಯಾರ್ಥಿಗಳ ಮತ್ತು ಅವರು ಹೋಗುತ್ತಿರುವ ಕಂಪನಿಯ ಬಗ್ಗೆ ಮಾಹಿತಿ ಕಲೆಹಾಕುತ್ತೇವೆ ಎಂದು ಹೇಳಿದರು.
ಈ ವರ್ಷ ಉತ್ತೀರ್ಣಗೊಂಡ ವಿದ್ಯಾರ್ಥಿಗಳ ಸಂಬಳವೂ ಉತ್ತಮವಾಗಿದ್ದು ವಿದ್ಯಾರ್ಥಿಗಳು ವರ್ಷಕ್ಕೆ ಸರಾಸರಿ 9.5 ಲಕ್ಷ ರೂಪಾಯಿಗಳನ್ನು ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಂ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಡೀನ್ ಮೋಸಮಿ ಸೇನ್ ಗುಪ್ತ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
