
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ.
ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಇದ್ದಾರೆ. ಬಜೆಟ್ನಲ್ಲಿ ವಿಶೇಷ ಯೋಜನೆಗಳ ಜೊತೆಗೆ ಕೆಲವು ಜಿಲ್ಲೆಗಳ ರಚನೆ ಕುರಿತು ಶುಭ ಸುದ್ದಿ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಾಖಲೆಯ 16ನೇ ಬಜೆಟ್ನಲ್ಲಿ ಗ್ಯಾರಂಟಿಗಳ ಹೊರತಾಗಿ ಈ ಸಲದ ಬಜೆಟ್ನಲ್ಲಿ ಹೊಸದೇನು ಇರಲಿದೆ ಎಂಬುದು ಕೂಡ ಚರ್ಚೆಯಾಗುತ್ತಿದೆ. ರೈತರಿಗೆ, ಮಹಿಳೆಯರಿಗೆ ಹೊಸ ಯೋಜನೆಗಳು ಜಾರಿಯಾಗುವ ನಿರೀಕ್ಷೆ ಇದ್ದು, ಬಹುದಿನಗಳಿಂದ ಹೊಸ ಜಿಲ್ಲೆಗಳ ಬೇಡಿಕೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇರುವ ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳನ್ನು ಬಜೆಟ್ನಲ್ಲಿ ಘೋಷಿಸ್ತಾರಾ ಎಂಬ ಪ್ರಶ್ನೆ ವಿವಿಧ ಜಿಲ್ಲಾ ರಚನಾ ಹೋರಾಟಗಾರರಿಗೆ ಕಾಡುತ್ತಿದೆ.
ಈಗಾಗಲೇ ಬಹುದಿನಗಳಿಂದ ಉತ್ತರ ಕರ್ನಾಟಕದಲ್ಲಿ ಜಿಲ್ಲೆಗಳ ವಿಭಜನಯೆ ಕೂಗು ಹೆಚ್ಚಾಗಿದೆ. ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ಕುರಿತು ಸ್ಥಳೀಯ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಈ ಹಿಂದೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡ್ತಾರಾ ಎಂಬ ಬಗ್ಗೆ ಚರ್ಚೆ ಜೋರಾಗಿದೆ.
ಪ್ರಸ್ತುತ 31 ಜಿಲ್ಲೆಗಳ ಪೈಕಿ ಉತ್ತರ ಕರ್ನಾಟಕದ ಜಿಲ್ಲೆಗಳ ವಿಭಜನೆಯ ಕೂಗು ಹೆಚ್ಚಾಗಿದ್ದು, ಅತಿ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಿ ಬೈಲಹೊಂಗಲ ಅಥವಾ ಗೋಕಾಕ್, ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಬೇಡಿಕೆಯಿದೆ.
ಇನ್ನೂ ತುಮಕೂರಿನ ಮಧುಗಿರಿ, ತಿಪಟೂರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಜಿಲ್ಲೆಗಳಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ, ಮೈಸೂರಿನ ಹುಣಸೂರು ಜಿಲ್ಲೆಗಳಾಗಬೇಕು ಎಂಬುದು ಅಲ್ಲಿನ ಜನರ ಆಗ್ರಹಿಸಿದ್ದಾರೆ.
ಈ ನಡುವೆ ಅನೇಕ ಕಡೆಗಳಲ್ಲಿ ಜಿಲ್ಲೆಗಳ ರಚನೆಯಾಗಬೇಕು ಎಂಬ ಹೋರಾಟಗಳು ನಡೆಯುತ್ತಲೆ ಇದೆ. ಆದರೆ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಿರುವ ಹಿನ್ನಲೆ ಸರ್ಕಾರವು ಹೊಸ ಜಿಲ್ಲೆಗಳ ರಚನೆಗೆ ಮುಂದಾಗೋದು ಡೌಟ್ ಎಂದು ಕೂಡ ಹೇಳಲಾಗುತ್ತಿದೆ. ಜಿಲ್ಲಾ ಕೇಂದ್ರಗಳು ತಾಲೂಕು ಕೇಂದ್ರಗಳಿಂದ ದೂರ ಎಂಬ ಕಾರಣಕ್ಕೆ ಬಹುತೇಕ ಹೊಸ ಜಿಲ್ಲೆಗಳ ಬೇಡಿಕೆ ಹೆಚ್ಚಾಗಿದೆ.
ಸಣ್ಣ ಜಿಲ್ಲೆಗಳ ರಚನೆಯಾದರೆ ಸರ್ಕಾರದಿಂದ ಹೆಚ್ಚು ಅನುದಾನ ದೊರೆಯುತ್ತದೆ. ಅಭಿವೃದ್ದಿ ಕಾಮಗಾರಿಗಳು ವೇಗ ಪಡೆಯುತ್ತವೆ. ಸರಕಾರಿ ಕಚೇರಿಗಳು ಜನ ಸಾಮಾನ್ಯರಿಗೆ ಹತ್ತಿರವಾಗಿ, ನಾನಾ ಸೌಲಭ್ಯಗಳು ದೊರಕುತ್ತವೆ ಎಂದು ಹೊಸ ಜಿಲ್ಲೆಗಳಿಗೆ ಜನರು ಬೇಡಿಕೆಯಿಟ್ಟಿದ್ದಾರೆ.
ಯಾವ ಜಿಲ್ಲೆಗಳ ರಚನೆಗೆ ಹೆಚ್ಚಿದೆ ಕೂಗು?
ಬೆಳಗಾವಿ – ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ,
ತುಮಕೂರು – ತಿಪಟೂರು, ಮಧುಗಿರಿ
ಉತ್ತರ ಕನ್ನಡ – ಶಿರಸಿ
ಮೈಸೂರು – ಹುಣಸೂರು
ಶಿವಮೊಗ್ಗ – ಶಿಕಾರಿಪುರ, ಸಾಗರ
ದಕ್ಷಿಣ ಕನ್ನಡ – ಪುತ್ತೂರು
ಬಾಗಲಕೋಟೆ – ಜಮಖಂಡಿ
ವಿಜಯಪುರ – ಇಂಡಿ
ರಾಯಚೂರು – ಸಿಂಧನೂರು
ಕಲಬುರಗಿ – ಸೇಡಂ, ಶಹಾಪುರ
ಕೊಪ್ಪಳ – ಗಂಗಾವತಿ
ಇನ್ನೂ ರಾಜ್ಯ ವಿವಿಧ ಭಾಗಗಳಲ್ಲಿ ಹೊಸ ಜಿಲ್ಲೆಗಳ ರಚನೆಗೆ ಎಲ್ಲ ಕಡೆಯಿಂದ ಬೇಡಿಕೆಗಳು ಕೇಳಿ ಬರುತ್ತಿದೆ. ಆದರೆ, ಸರ್ಕಾರ ಮಾತ್ರ ಜಿಲ್ಲೆಗಳ ರಚನೆಗೆ ಮುಂದಾಗುತ್ತಿಲ್ಲ. ಹೊಸ ಜಿಲ್ಲೆ ರಚಿಸಿದರೆ ಆ ಜಿಲ್ಲೆಗೆ ಪ್ರತ್ಯೇಕ ಅನುದಾನ ನೀಡಬೇಕು, ಹೊಸ ಕಟ್ಟಡ, ಸಿಬ್ಬಂದಿ ಸೇರಿ ಎಲ್ಲವನ್ನೂ ಕೊಡಬೇಕಾಗುತ್ತದೆ. ಇದಕ್ಕೆ ಭಾರೀ ಪ್ರಮಾಣದ ಹಣವನ್ನು ಮೀಸಲಿಡಬೇಕಾಗುತ್ತದೆ. ಹೊಸ ಜಿಲ್ಲೆಗಳನ್ನು ರಚಿಸಿದರೆ ಬೇರೆ ಕಡೆಯಿಂದಲೂ ಹೊಸ ಜಿಲ್ಲೆಗೆ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕೆ ಸರ್ಕಾರ ಹೊಸ ರಚನೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.