ಮಂಡ್ಯ- ಜಿಲ್ಲೆಯ ಪೂರ್ವದ ಇತಿಹಾಸವನ್ನು ಶಾಸನಗಳು ತಿಳಿಸುತ್ತದೆ. ಶಾಸನಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ಅವರು ಹೇಳಿದರು.
ಇಂದು ಪ್ರಸಿದ್ಧ ಆತಗೂರು “ಕಾಳಿ” ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಸಮಾರಂಭ ಹಾಗೂ ಕೆರೆ ಕಟ್ಟೆಗಳ ಅಳಿವು ಉಳಿವು ಕುರಿತು ಅಧಿಕಾರಿಗಳೊಂದಿಗೆ ಒಂದು ಚಿಂತಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರಪಂಚದಲ್ಲೇ ಯಾವ ದೇಶದಲ್ಲೂ ಇರದ ಐತಿಹಾಸಿಕ ಪರಂಪರೆಯನ್ನು ಭಾರತ ದೇಶ ಹೊಂದಿದೆ ಎಂದರು.
ಆತಗೂರು “ಕಾಳಿ” ಹೆಸರಿನ ನಾಯಿ ಶಾಸನ ತನ್ನದೇ ಆದ ವಿಶೇಷ ಮಹತ್ವ ಹೊಂದಿದೆ ಅದನ್ನು ಸಂರಕ್ಷಿಸಲು ಜಿಲ್ಲಾಡಳಿತ ನಡೆಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.
ಕೆರೆಕಟ್ಟೆಗಳ ಸಂರಕ್ಷಣೆ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅಗತ್ಯದ ಕೆಲಸ, ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಇರಬೇಕು ಆಗ ಮಾತ್ರ ಕೆರೆಗಳ ಸಂರಕ್ಷಣೆಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಸಹ ಕೆರೆ ಸಂರಕ್ಷಣೆಗೆ ಸಹ ಹಲವಾರು ಯೋಜನೆ ಹಾಗೂ ಕ್ರಮ ಕೈಗೊಳ್ಳುತ್ತಿದೆ.
ಜಿಲ್ಲಾಧಿಕಾರಿ ಡಾ. ಕುಮಾರ ಮಾತನಾಡಿ, ಪ್ರಾಣಿಗಳನ್ನು ಗೌರವದಿಂದ ಕಾಣಬೇಕು ಎನ್ನುವುದಕ್ಕೆ ಈ ಒಂದು ಶಾಸನ ನಿಜಕ್ಕೂ ಸಾಕ್ಷಿಯಾಗಿದೆ. ಶಾಸನಗಳನ್ನು ಒಂದು ಕಲ್ಲು ಎಂದು ಪರಿಗಣಿಸದೆ ಅದರಲ್ಲಿ ಇರುವ ಒಳ ಅರ್ಥವನ್ನು ಅರಿತಾಗ ಅದರ ಮಹತ್ವವೇನು ಎಂದು ತಿಳಿಯುತ್ತದೆ. ನಮ್ಮ ಪರಂಪರೆ, ಇತಿಹಾಸಗಳಿಗೆ ಸಾಕ್ಷಿಯಾಗಿರುವ ಶಾಸನಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಮಂಡ್ಯ ಜಿಲ್ಲೆ ಕಲೆ, ಸಂಸ್ಕೃತಿ ಇತಿಹಾಸದಲ್ಲಿ ಶ್ರೀಮಂತಿಕೆ ಹೊಂದಿರುವ ಜಿಲ್ಲೆ, ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಶಾಸನಗಳು ಲಭ್ಯವಿದ್ದು ಎಲ್ಲವೂ ಸಹ ನಮ್ಮ ಸಂಸ್ಕೃತಿ ಇತಿಹಾಸದ ಮಹತ್ವವನ್ನ ತಿಳಿಸಿ ಹೇಳುವ ಶಾಸನಗಳಾಗಿವೆ. ನಾವು ಮುಂದಿನ ಪೀಳಿಗೆಗೆ ಶಾಸನಗಳನ್ನು ಉಳಿಸಿಕೊಡಲು ಹೆಚ್ಚು ಪ್ರೋತ್ಸಾಹ ನೀಡಬೇಕು .
ಲೇಖಕ ಹಾಗೂ ಸಂಶೋಧಕರಾದ ತೈಲೂರು ವೆಂಕಟಕೃಷ್ಣ ಅವರು ಮಾತನಾಡಿ ಇತಿಹಾಸದ ವೈಭವವನ್ನು ಸಾರುವ ಅನೇಕ ದೇವಾಲಯಗಳು, ಸ್ಮಾರಕಗಳು, ಶಾಸನಗಳನ್ನು ಸಂರಕ್ಷಣೆ ಮಾಡಬೇಕಾಗಿದೆ, ಆತಗೂರು ನಾಯಿ ಶಾಸನವನ್ನು ಅಮೇರಿಕಾದ ಒಂದು ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದಲ್ಲಿ ನೂರು ವರ್ಷ ಹಿಂದೆಯೇ ಅದರ ಪ್ರತಿಕೃತಿಯನ್ನು ಸ್ಥಾಪಿಸಲಾಗಿದೆ ಎಂದರೆ ಇದರ ಮಹತ್ವ ಅರಿತುಕೊಳ್ಳಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ಶಾಸನಗಳ ಮೌಲ್ಯದ ಬಗ್ಗೆ ಅನೇಕರಿಗೆ ಅರಿವಿಲ್ಲ, ಶಾಸನಗಳ ಮೌಲ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ, ಶಾಸನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅವುಗಳನ್ನು ಸಂರಕ್ಷಿಸಬೇಕಾಗಿದೆ, ಸಾರ್ವಜನಿಕರು ನಮ್ಮ ನೆಲದ ಶಾಸನಗಳನ್ನು ಹೆಮ್ಮೆಯಿಂದ ಕಾಳಜಿಯಿಂದ ಕಾಣುವಂತಾಗಬೇಕು ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಕೆ.ಹೆಚ್. ಗೋಪಾಲಕೃಷ್ಣೇಗೌಡ ಅವರು ಮಾತನಾಡಿ, ನಗರೀಕರಣದಿಂದ ಕೆರೆಕಟ್ಟೆಗಳನ್ನು ಮುಚ್ಚಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ, ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ, ಜನಜೀವನಕ್ಕೆ ಕೆರೆಗಳು ಎಷ್ಟು ಮುಖ್ಯ ಎಂಬುದು ಸಾರ್ವಜನಿಕರ ಅರ್ಥೈಸಿಕೊಳ್ಳಬೇಕು ಹಾಗೂ ಆತಗೂರು ಶಾಸನದ ಬಗ್ಗೆ ಜಿಲ್ಲೆಯ ಸಾರ್ವಜನಿಕರು ತಿಳಿದುಕೊಳ್ಳಬೇಕು.
ಈ ವೇಳೆ ಇತಿಹಾಸ ಸಂಶೋಧಕರಾದ ಮೊಹಮ್ಮದ್ ಕಲೀಂ, ಸಿ. ಮಹದೇವ್, ಹರವು ದೇವೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.