ಕೊರಟಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಹೂಲೀಕುಂಟೆ ಗ್ರಾ.ಪಂ ವ್ಯಾಪ್ತಿಯ ಗಂಟಿಗಾನಹಳ್ಳಿ ಗ್ರಾಮದಲ್ಲಿ ಪರಮ ಪೂಜ್ಯ ಡಾ.ಡಿ ವೀರೆಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ.ಹೇಮಾವತಿ ಕೃಪಾಶೀರ್ವಾದ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಆರ್ಥಿಕ ಸಹಕಾರದಿಂದ ವಾತ್ಸಲ್ಯ ಯೋಜನೆ ಕಾರ್ಯಕ್ರಮಡಿಯಲ್ಲಿ ನಿರ್ಮಾಣಗೊಂಡ ನೂತನವಾಗಿ ನಿರ್ಮಿಸಿದ ಮನೆಯನ್ನು ಭಾನುವಾರ ಉದ್ಘಾಟಿಸಿ ಮುದ್ದಯ್ಯನವರಿಗೆ ಹಸ್ತಾಂತರಿಸಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು ಮನೆಗಳನ್ನು ನಿರ್ಗತಿಕರಿಗಾಗಿ ಕಟ್ಟುವ ಗುರಿಯನ್ನು ಹಮ್ಮಿಕೊಂಡಿದ್ದು, ಈಗಾಗಲೇ ಹಲವು ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಒಂದು ಸಾವಿರ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದರು.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಘ ತಾಲ್ಲೂಕಿನ ಕೆರೆಗಳ ಅಭಿವೃದ್ಧಿ, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ಪ್ರತಿ ತಿಂಗಳು ಮಾಸಾಶನ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ನೂ ಅನೇಕ ಸಮಾಜ ಮುಖಿ ಕೆಲಸಗಳಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಧರ್ಮಸ್ಥಳ ಸಂಸ್ಥೆ ತಾ.ಯೋಜನಾಧಿಕಾರಿ ಅನಿತಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಸುಮಾರು ೭೯ ಕುಟುಂಬಕ್ಕೆ ಪ್ರತಿ ತಿಂಗಳು ಮಾಸಾಶನ, ತಾಲ್ಲೂಕಿನಲ್ಲಿ ಒಟ್ಟು ಈವರೆಗೂ ೮ ಕೆರೆಗಳ ಅಭಿವೃದ್ಧಿ, ವಾತ್ಸಲ್ಯ ಯೋಜನೆಯಡಿಯಲ್ಲಿ ಇಂದು ೨ಮನೆ ಉದ್ಘಾಟನೆಗೊಂಡಿದೆ, ಹೈನುಗಾರಿಕೆ-ಕುರಿ,ಮೇಕೆ ಸಾಕಾಣಿಕೆಗೆ ರಾಷ್ಟ್ರೀಕೃತ ಬ್ಯಾಂಕ್ನಿoದ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ೨೪೦ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.

ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಸಮಾಜದಿಂದ ತುಳಿತಕ್ಕೆ ಒಳಪಟ್ಟಂತಹ ನಿರ್ಗತಿಕನನ್ನ ಧರ್ಮಸ್ಥಳ ಸಂಸ್ಥೆ ಗುರುತಿಸಿ ವಾತ್ಸಲ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ಕುಟೀರ ವ್ಯವಸ್ಥೆ ಕಲ್ಪಿಸಿದ್ದಾರೆ. ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂಸ್ಥೆಯ ಜೊತೆ ಕೈ ಜೋಡಿಸಿ ಬಡಕುಟುಂಬಗಳ ಸ್ಫಂದಿಸುವ ಕೆಲಸ ಮಾಡುವೆ ಎಂದರು.
ಈ ವೇಳೆ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಗಂಗಯ್ಯ, ಜಿಲ್ಲಾ ಜನಜಾಗೃತಿ ಸದಸ್ಯ ರಾಜಣ್ಣ, ಪ್ರದೀಪ್ಕುಮಾರ್, ಗುತ್ತಿಗೆದಾರ ರೇಣುಕಾ, ಸಂಸ್ಥೆಯ ಅನಿತಾ,ಆಶಾ, ಅನುಸೂಯಮ್ಮ ಮನು ಮಹೇಂದ್ರ ಗಂಗಯ್ಯಸೇರಿದಂತೆ ಇತರರು ಹಾಜರಿದ್ದರು.
ವರದಿ – ನರಸಿಂಹಯ್ಯ ಹೊಸಕೋಟೆ
