ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿನ್ನಸ್ವಾಮಿ ಯತಿರಾಜ್ ಬಂಡವಾಳ ಹೂಡಿ ಯುವ ನಿರ್ದೇಶಕ ಹರಿವರಾಸನಂ ಆಕ್ಷನ್ ಕಟ್ ಹೇಳಿರುವ ವಿಭಿನ್ನ ಶೀರ್ಷಿಕೆಯ ಕಾದಂಬರಿ ಆಧಾರಿತ ಚಿತ್ರ “ಮಗ್ಗಿ ಪುಸ್ತಕ” ಇದೇ ಫೆಬ್ರವರಿ 13ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಅಂದಹಾಗೆ ಮಗ್ಗಿ ಪುಸ್ತಕ ಚಿತ್ರದ ಟೈಟಲ್ ಕೇಳಿದಾ ಕ್ಷಣ ಇದು ಮಕ್ಕಳ ಚಿತ್ರ ಎಂದೇ ಎಲ್ಲರ ಮನಸ್ಸಿನಲ್ಲಿ ಬರುವುದು ಸಹಜ ಆದರೆ ಚಿತ್ರದ ನಿರ್ದೇಶಕ ಹರಿವರಾಸನಂ ಹೇಳುವಂತೆ ಈ ಚಿತ್ರದ ಆಯಾಮಾವೇ ಬೇರೆ ರೀತಿಯಲ್ಲಿದೆಯಂತೆ.
ನಮ್ಮ ಜೀವನವೇ ಒಂದು ಮಗ್ಗಿಪುಸ್ತಕ ಇದ್ದಂತೆ, ಇದರಲ್ಲಿ ಕೂಡುವುದು, ಕಳೆಯುವುದು, ಗುಣಾಕಾರ ಭಾಗಾಕಾರ ಎಲ್ಲವೂ ಇರುತ್ತದೆ, ಲೆಕ್ಕಾಚಾರ ಇಲ್ಲದ ಬದುಕು ಬದುಕೇ ಅಲ್ಲ ಎನ್ನುವುದು ನಿರ್ದೇಶಕರ ಮಾತು.

4 ಆಯಾಮಗಳನ್ನು ತೆರೆದಿಡುವ ವಿಭಿನ್ನ ಚಿತ್ರ ಇದಾಗಿದ್ದು ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಕೊರೋನಾ ಸಂದರ್ಭದಲ್ಲಿ ನಡೆದಂತಹ ಹೃದಯ ಹಿಂಡುವ ಘಟನೆ ಇಟ್ಟುಕೊಂಡು ನಿರ್ದೇಶಕರೇ ಬರೆದಿರುವ ಕಾದಂಬರಿಯನ್ನು ಆಧರಿಸಿ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಬೆಂಗಳೂರು, ಮೈಸೂರು, ಮಂಗಳೂರು, ನಂಜನಗೂಡು, ಶ್ರೀರಂಗಪಟ್ಟಣ, ಹೆಚ್.ಡಿ.ಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ, ಮಗ್ಗಿಪುಸ್ತಕ ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು, ಯಶಸ್ ನಾಚಪ್ಪ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ವಿಷ್ಣುವರ್ಧನ್ ಅಭಿನಯದ ಅಪ್ಪಾಜಿ, ಜಮೀನ್ದಾರು ಚಿತ್ರಗಳ ನಂತರ ಬಹಳ ದಿನಗಳಾದ ಮೇಲೆ ಎಂ.ಎಂ. ಕೀರವಾಣಿ ಅವರು ಈ ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ಬಾಹುಬಲಿ, ಆರ್.ಆರ್.ಆರ್. ಖ್ಯಾತಿಯ ಕೀರವಾಣಿ ಅವರು ತುಂಬಾ ವರ್ಷಗಳ ನಂತರ ಹಾಡಿರುವುದು ಚಿತ್ರದ ವಿಶೇಷ. ಉಳಿದಂತೆ ಕನ್ನಡದ ಹೆಸರಾಂತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಗುರುರಾಜ್ ಹೊಸಕೋಟೆ, ನವೀನ್ ಸಜ್ಜು, ಸೈಂಧವಿ, ವೈಕಂ ವಿಜಯಲಕ್ಷ್ಮಿ ಹಾಗೂ ರವೀಂದ್ರ ಸೊರಗಾವಿ ಸೇರಿದಂತೆ ಕನ್ನಡದ 18 ಜನ ಗಾಯಕರು ಈ ಚಿತ್ರದಲ್ಲಿ ಹಾಡಿರುವುದು ಮತ್ತೊಂದು ವಿಶೇಷ.

ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಪ್ರಚಾರದ ಕೆಲಸದಲ್ಲಿ ಬ್ಯುಸಿಯಾಗಿ.

ರಂಜನ್ ಕಾಸರಗೋಡು, ರಾನ್ವಿ ಶೇಖರ್, ರಕ್ಷಾಗೌಡ. ಶ್ರೀ ಸಾಯಿ ಮಂಜು. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶೋಭರಾಜ್, ಮೇಘ ಶ್ರೀ , ಮೈಸೂರು ರಮಾನಂದ್, ಕೃಷ್ಣ ಮಹೇಶ್ ಚಂದ್ರಪ್ರಭ ಇನ್ನೂ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಗ್ಗಿಪುಸ್ತಕ ಚಿತ್ರಕ್ಕೆ ನಂದಕುಮಾರ್ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಸಂಕಲನ ವಿದೆ.
-ಶ್ರೀ ಸಾಯಿ ಎಸ್ ಮಂಜು
