
ಹಾಸನ – ಬಸ್ ನಿಲ್ದಾಣದ ವ್ಯವಸ್ಥೆಯನ್ನು ಸರಿಪಡಿಸಲು ಅಧಿಕಾರಿಗಳು ವಾರದಲ್ಲಿ ಒಂದೊಂದು ದಿನ ಒಬ್ಬೊಬ್ಬರು ನಿರಂತರವಾಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದರ ಮೂಲಕ ಸುಧಾರಣೆ ಮಾಡುವಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೈಸೂರು ವಿಭಾಗದ ಉಪಾಧ್ಯಕ್ಷ ಪುಷ್ಪ ಅಮರ್ನಾಥ್ ಹೇಳಿದರು.
ಹಾಸನ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಶಕ್ತಿ ಯೋಜನೆ ಕುರಿತು ಮಹಿಳೆಯರನ್ನು ಮಾತನಾಡಿಸಿ ಬಸ್ ನಿಲ್ದಾಣದ ಹೋಟೆಲ್ ಹಾಗೂ ಫಾಸ್ಟ್ ಫುಡ್ ಮಳಿಗೆಗಳನ್ನು ವೀಕ್ಷಣೆ ಮಾಡಿ ಆಹಾರ ಸೇವನೆಗೆ ಬಳಸುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ಹೊಟೇಲ್ಗಳಲ್ಲಿ ಆರೋಗ್ಯ ಪೂರ್ಣವಾದ ಉತ್ತಮ ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸಬೇಕು. ಸ್ಟಿಲ್ ತಟ್ಟೆ, ಲೋಟ ಬಳಸುವಂತೆ ಸೂಚಿಸಿದರಲ್ಲದೆ ಸ್ವಚ್ಚತೆ ಕಾಪಾಡಲು ಹೇಳಿದರು.
ಶೌಚಾಲಯ ಬಳಿಕೆಗೆ ಸಾರ್ವಜನಿಕರಿಂದ ಮೂರು ರೂಪಾಯಿಗಿಂತ ಹೆಚ್ಚಿನ ಹಣ ಪಡೆದರೆ ಪರವಾನಗಿ ರದ್ದುಪಡಿಸಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಸ್ ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ ಈ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ವಿಶ್ರಾಂತಿ ಗೃಹ ಹಾಗೂ ಶಿಶುಪಾಲನಾ ಕೊಠಡಿ ಬಳಕೆ ಆಗುತ್ತಿಲ್ಲ ಇನ್ನೂ ಮುಂದೆ ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹೇಳಿದರು.
ನಂತರ ಮಾತನಾಡಿ ಸರ್ಕಾರದ ಪಂಚ ಗ್ಯಾರೆಂಟಿಗಳು ಜನ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ಮೂಡಿಸಿವೆ ಎಂದ ಅವರು ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಉಳಿತಾಯವಾಗುವ ಹಣವನ್ನು ಮಹಿಳೆಯರು ತಮ್ಮ ದಿನನಿತ್ಯದ ಇತರ ಬಳಕೆಗೆ ಉಪಯೋಗಿಸಬಹುದು ಎಂದರು.
ಈ ವೇಳೆಯಲ್ಲಿ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.