ಆಲೂರು : ರಸ್ತೆ ಸುರಕ್ಷತೆಯು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಸಂಚಾರ ನಿಯಮಗಳನ್ನು ಪಾಲಿಸುವುದು ಜೀವಗಳನ್ನು ಉಳಿಸಲು ಅತ್ಯಗತ್ಯ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸಪ್ತಾಹ ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಬಾಲ್ಯದಿಂದಲೇ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಔಚಿತ್ಯಪೂರ್ಣವಾದುದು. ಈ ನಿಟ್ಟಿನಲ್ಲಿ ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಸಾರಥ್ಯದಲ್ಲಿ ಉತ್ತಮೋತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಪ್ರತಿಯೊಬ್ಬರೂ ಸಂಚಾರಿ ನಿಯಮಗಳಾದ ವೇಗದ ಮಿತಿ, ಹೆಲ್ಮೆಟ್, ಸೀಟ್ ಬೆಲ್ಟ್ ಬಳಕೆ, ಸಂಚಾರ ಚಿಹ್ನೆಗಳನ್ನು ಗೌರವಿಸುವ ಮೂಲಕ ಅಪಘಾತಗಳನ್ನು ತಡೆಯಬಹುದಾಗಿದೆ. ಕುಡಿದು ವಾಹನ ಚಾಲನೆ ಮಾಡುವುದು, ಚಾಲನೆಯಲ್ಲಿದ್ದಾಗ ಮೊಬೈಲ್ ಬಳಕೆ ಮಾಡುವುದು ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುವುದು ತುಂಬಾ ಅಪಾಯಕಾರಿ ಹಾಗೂ ಕಾನೂನು ಬಾಹಿರವಾಗಿದೆ. ಆಧುನಿಕ ಜಗತ್ತಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ, ರಸ್ತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.

ಎಸ್. ವಿ. ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಎಸ್. ಎನ್. ನಳಿನಾಗಿರೀಶ್ ಮಾತನಾಡಿ ರಸ್ತೆ ಸುರಕ್ಷತೆ ಎಂದರೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಚಾಲಕರು, ಪಾದಚಾರಿಗಳು ಮತ್ತು ಪ್ರಯಾಣಿಕರನ್ನು ರಸ್ತೆ ಅಪಘಾತಗಳಿಂದ ರಕ್ಷಿಸುವ ಕ್ರಮಗಳಾಗಿವೆ. ಪ್ರತಿಯೊಬ್ಬರೂ ಇವುಗಳನ್ನು ಪಾಲಿಸಿದಾಗ ಮಾತ್ರ ಸಮಾಜ ಸ್ವಾಸ್ಥ್ಯವಾಗಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ತಾಲ್ಲೂಕು ಖಜಾಂಚಿ ಬಿ.ಎಸ್. ಹಿಮ, ತಾಲ್ಲೂಕು ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಫ್ಲಾಕ್ ಲೀಡರ್ ಎಂ.ಎಲ್.ಎಲಿಜಬೆತ್, ಬೈರಾಪುರ ಶಾಲೆಯ ಮುಖ್ಯ ಶಿಕ್ಷಕ ಶಂಕರಶೆಟ್ಟಿ, ಎಚ್.ಸಿ. ಜ್ಯೋತಿ ಅಮೃತೇಶ್, ಎಸ್.ವಿ.ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಎಂ. ಎನ್. ಸುನಿಲ್ ಮುಂತಾದವರು ಮಾತನಾಡಿದರು.

ಸಪ್ತಾಹದಲ್ಲಿ ಎಸ್.ವಿ. ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ರೋಸ್ ಮೇರಿ, ನವ್ಯಶ್ರೀ, ಗೈಡ್ ಕ್ಯಾಪ್ಟನ್ ಸುಮಿತ್ರ, ಸ್ಕೌಟ್ ಮಾಸ್ಟರ್ ದೇವರಾಜ್, ಸತೀಶ್; ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ಸ್ ಶಿಲ್ಪಾಕೃತಿ, ಎಂ. ಚಂದ್ರಕಲಾ, ಸೌಮ್ಯ ಎಚ್.ಎನ್; ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಾಪುರ ಗೈಡ್ ಕ್ಯಾಪ್ಟನ್ ಅಶ್ವಿನಿ; ಆಲೂರು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ಕೆ.ಜೆ. ರಾಮಚಂದ್ರು, ಗೈಡ್ ಕ್ಯಾಪ್ಟನ್ ರೋಹಿಣಿ ಬಿ.ಎಂ, ಲೇಡಿ ಸ್ಕೌಟ್ ಮಾಸ್ಟರ್ ಕೆ.ಎ. ಶಕುಂತಲಾ; ಬೈರಾಪುರ ಶಾಲೆಯ ಸಹ ಶಿಕ್ಷಕರಾದ ಜ್ಯೋತಿಅಮೃತೇಶ್, ನಾಗರತ್ನ, ಅಂಬಿಕಾ, ಅತಿಥಿ ಶಿಕ್ಷಕಿ ಕಾವ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
