
ಸವಿತ ಮಹರ್ಷಿ ಕೇಶ ಶೃಂಗಾರ, ಲಲಿತ ಕಲೆ, ಸಾಹಿತ್ಯದಲ್ಲಿಯೂ ಪ್ರಸಿದ್ಧರು
ಹಾಸನ : ಸವಿತ ಮಹರ್ಷಿಯವರು ಕೇಶ ಶೃಂಗಾರ ಮಾಡುವುದರ ಜೊತೆಗೆ ಲಲಿತ ಕಲೆ, ಸಾಹಿತ್ಯದಲ್ಲಿಯೂ ಕೂಡ ಪ್ರಸಿದ್ಧರಾಗಿದ್ದರು, ಅವರ ತತ್ವಗಳನ್ನು ಅಳವಡಿಸಿಕೊಂಡು ಸನ್ಮಾರ್ಗಿಗಳಾಗಬೇಕು ಎಂದು ಜಿಲ್ಲಾ ಭಜಂತ್ರಿ ಸಂಘದ ಕಾರ್ಯದರ್ಶಿಗಳಾದ ಷಣ್ಮುಗಂ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿಂದು ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸವಿತ ಮಹರ್ಷಿಗಳು ಹುಟ್ಟಿದ ಮಗುವಿಗೆ ಮೊದಲಿಗೆ ಕ್ಷೌರ ಕರ್ಮಗಳನ್ನು ಮಾಡಬೇಕೆಂದು ಪ್ರಪ್ರಥಮವಾಗಿ ಐದುಮುಡಿಗಳನ್ನು ಶಿರಸ್ಸಿನಿಂದ ತೆಗೆಯುತ್ತಾರೆ, ನಂತರ ಐದು ವರ್ಷಗಳ ಕಾಲ ವೇದ ಪಠಣಗಳನ್ನು ಅಭ್ಯಾಸ ಮಾಡಿದವರಾಗಿದ್ದಾರೆ.
ಮನುಷ್ಯನ ಧರ್ಮವನ್ನು ಬ್ರಹ್ಮ ಜ್ಞಾನದಲ್ಲಿ ನಡೆಸಿಕೊಂಡು ಹೋಗಬೇಕು, ಪ್ರಪಂಚ ಶೂನ್ಯವಾಗದೆ ಪ್ರಜ್ವಲಿಸಬೇಕು, ಪ್ರಪಂಚದ ಎಲ್ಲಾ ಭಾಗಗಳಲ್ಲೂ ಮಾನವೀಯ ಧರ್ಮ ಮತ್ತು ಹಿಂದೂ ಧರ್ಮವನ್ನು ಸನಾತನ ಧರ್ಮವನ್ನಾಗಿ ಪರಿವರ್ತನೆ ಮಾಡಿ ರಕ್ಷಣೆ ಮಾಡಬೇಕು, ಜಗತ್ತಿನಲ್ಲಿ ಬದುಕುವಂತಹ ಪ್ರತಿ ಮನುಷ್ಯನಿಗೂ ಸೂಕ್ತವಾದ ವಾತಾವರಣ ಸಮನ್ವಯತೆ ಇರಬೇಕು ನಂತರ ಮುಕ್ತಿಯನ್ನು ಪಡೆದುಕೊಳ್ಳಬೇಕು ಎಂದು ಬ್ರಹ್ಮರ್ಷಿಗಳು ಸವಿತಾ ಮಹರ್ಷಿ ಅವರಿಗೆ ಸೂಚನೆ ನೀಡಿದ್ದರು ಎಂದು ತಿಳಿಸಿದರು.
ಡಿ.ವೈ.ಎಸ್.ಪಿ ಮುರುಳಿಧರ ಅವರು ಮಾತನಾಡಿ ಸವಿತಾ ಮಹರ್ಷಿ ಸಮಾಜದ ಜನರು ಇಲ್ಲದೆ ಹೋಗಿದ್ದರೆ ನಾವುಗಳು ಕಾಡು ಮನುಷ್ಯರಂತೆ ಇರುತ್ತಿದ್ದೆವು, ಪುರುಷರು, ಮಹಿಳೆಯರು, ಸಿನಿಮಾದಲ್ಲಿ ನಟಿಸುವಂತಹ ನಟ-ನಟಿಯರು, ಪೊಲೀಸರು, ಯೋಧರು ಒಟ್ಟಾರೆಯಾಗಿ ಎಲ್ಲಾ ಮನುಷ್ಯರು ರೂಪವಂತರಾಗಿರಲು ಕಾರಣಕರ್ತರು ಸವಿತ ಮಹರ್ಷಿಗಳು ಹಾಗೂ ಅವರ ಸಮಾಜದವರು ಎಂದರು.
ಕಾರ್ಯಕ್ರಮದಲ್ಲಿ ಶಿರಸ್ತೆದಾರರಾದ ಯಶೋದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಚ್.ಪಿ ತಾರಾನಾಥ್, ಹಾಸನ ನೌಕರರ ಸಂಘದ ಗೌರವಾಧ್ಯಕ್ಷರಾದ ಈ ಕೃಷ್ಣೇಗೌಡ, ಹಾಗೂ ಸಮುದಾಯದ ಇತರ ಮುಖಂಡರು ಉಪಸ್ಥಿತರಿದ್ದರು.