
ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಯರವರ 6 ನೇ ವರ್ಷದ ಪುಣ್ಯಸ್ಮರಣೆ ಮತ್ತು ದಾಸೋಹ ಕಾರ್ಯಕ್ರಮ
ಡಾ.ಶಿವಕುಮಾರಮಹಾಸ್ವಾಮಿಗಳು ದೇಶ ಕಂಡಂತ ಸಂತರಲ್ಲಿ ಸಂತರಾಗಿದ್ದಾರೆ: ಶ್ರೀವೀರಬಸವಸ್ವಾಮೀಜಿ
ತುಮಕೂರು:-ಡಾ.ಶಿವಕುಮಾರಮಹಾಸ್ವಾಮಿಗಳು ದೇಶ ಕಂಡಂತ ಸಂತರಲ್ಲಿ ಸಂತರಾಗಿದ್ದಾರೆ ಎಂದು ಬೆಳ್ಳಾವಿಯ ಖಾರದಮಠದ ಶೀ ವೀರಬಸವಸ್ವಾಮೀಜಿ ತಿಳಿಸಿದರು.
ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಶ್ರೀ ವೀರಶೈವ ಲಿಂಗಾಯಿತ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ತ್ರಿವಿಧ ದಾಸೋಹಿ ಡಾ.ಶಿವಕುಮಾರಮಹಾಸ್ವಾಮಿಜೀಯವರ 6 ನೇ ವರ್ಷದ ಪುಣ್ಯಸ್ಮರಣೆ ಮತ್ತು ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಾ.ಶಿವಕುಮಾರ ಮಹಾಸ್ವಾಮಿಗಳು ಅನ್ನ, ಅಕ್ಷರ, ಹಾಗೂ ಜ್ಞಾನದ ದಾಸೋಹಗಳನ್ನು ಕರ್ನಾಟಕ ರಾಜ್ಯಕ್ಕೆ ನೀಡಿದ ಮಹಾತ್ಮರಾಗಿದ್ದಾರೆ ರಾಜ್ಯದಲ್ಲಿ ಈ ದಿನವನ್ನು ದಾಸೋಹದ ದಿನವನ್ನಾಗಿ ಆಚರಿಸಿದ್ದಾರೆ, ನಮ್ಮೇಲ್ಲರ ಸೌಭಾಗ್ಯ ಏನೆಂದರೆ, ನಮ್ಮ ಜೀವಿತಾವಧಿಯಲ್ಲಿ 144 ವರ್ಷಗಳ ಪ್ರಯಾಗ್ರಾಜ್ ನ 40 ಕೋಟಿ ಜನರು ಸೇರುವ ಬೃಹತ್ ಕುಂಭಮೇಳ ನೋಡುತ್ತಿರುವುದು ಮತ್ತು ಮಹಾನ್ ಸಂತ ಡಾ.ಶಿವಕುಮಾರಮಹಾಸ್ವಾಮಿಗಳ ಭಾರದ ಹೆಜ್ಜೆಯ ಗುರುತುಗಳನ್ನು ಕಂಡಿರುವುದಾಗಿದೆ ಎಂದರು.
ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಡಾ.ಶ್ರೀ ಶಿವಕುಮಾರಮಹಾಸ್ವಾಮಿಗಳು ರಾಜ್ಯ ಮತ್ತು ಹೊರ ರಾಜ್ಯದಿಂದ ಬಂದಂತಹ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದ್ದಾರೆ. ಅವರು ಮಾಡುತ್ತಿರುವ ಈ ಸೇವೆಗೆ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದ್ದು, ನಮ್ಮ ಧರ್ಮ ಹಾಗೂ ಸಂಸ್ಕೃತಿ ವಿಶ್ವದೆಲ್ಲೆಡೆ ಗೌರವ ದೊರೆತಿದೆ ಎಂದರು.
ಟ್ರಸ್ಟ್ ನ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಡಾ.ಶಿವಕುಮಾರಮಹಾಸ್ವಾಮಿಗಳು ಯಾವುದೇ ಒಂದು ಜಾತಿ ಮತಕ್ಕೆ ಸೀಮಿತವಾದವರಲ್ಲ. ಸರ್ವ ಜನಾಂಗದ ಶಾಂತಿ ಮತ್ತು ಬದುಕಿಗೆ ದುಡಿದ ಮಹಾತ್ಮರು ಇವರ ಪುಣ್ಯಸ್ಮರಣೆ ದಿನವನ್ನು, ರಾಷ್ಟ್ರೀಯ ದಾಸೋಹ ದಿನಚಾರಣೆಯನ್ನಾಗಿ ಆಚರಿಸಲು ಭಾರತ ಸರ್ಕಾರ ಆದೇಶ ಹೊರಡಿಸಬೇಕು ಹಾಗೂ ಇಂತಹ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾ.ಪಂ.ಇ.ಒ, ಅಪೂರ್ವ ಟ್ರಸ್ಟ್ ನ ಉಪಾಧ್ಯಕ್ಷ ಹುಚ್ಚಣ್ಣ, ಕಾರ್ಯದರ್ಶಿ ನಾಗರಾಜು, ಖಜಾಂಚಿ ಮಂಜುನಾಥ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಮತ, ತಾಲ್ಲೂಕು ಅಧ್ಯಕ್ಷೆ ವೇದಾಂಬ, ನಿರ್ದೇಶಕರುಗಳಾದ ಮಧುಸೂದನ್, ಲಿಂಗರಾಜು, ಶಿವಕುಮಾರ್, ಮಂಜಣ್ಣ, ನಟರಾಜು, ಸಿದ್ದಗಂಗಯ್ಯ, ಮುಕ್ಕಣ್ಣ, ಮಲ್ಲಣ್ಣ, ಮುಖಂಡರುಗಳಾದ ಕಾಮರಾಜು, ರಂಗಣ್ಣ, ಸೇರಿದಂತೆ ಇತರರು ಹಾಜರಿದ್ದರು.