ಬೆಂಗಳೂರು (ಏ.05): ಸಿಲಿಕಾನ್ ಸಿಟಿ ಬೆಂಗಳೂರಿನ ಜೆಪಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಂಡ ವಿಧಿಸಿದ ಬೆನ್ನಲ್ಲೇ, ಲಾರಿ ಚಾಲಕನೊಬ್ಬ ಪೊಲೀಸ್ ಠಾಣೆಗೆ ಎಳೆದೊಯ್ದ ಲಾರಿಯಲ್ಲೇ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
ಏನಿದು ಘಟನೆ?
ಮೃತ ಚಾಲಕನನ್ನು ಷಣ್ಮುಗ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಜೆಪಿ ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ತಪಾಸಣೆ (Drink and Drive Checking) ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕ ಷಣ್ಮುಗ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ತಡೆದ ಪೊಲೀಸರು ಬ್ರೀತ್ ಅನಲೈಸರ್ ಮೂಲಕ ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಇದಾದ ನಂತರ ಪೊಲೀಸರು ನಿಯಮದಂತೆ ಷಣ್ಮುಗನಿಗೆ ಭಾರೀ ಮೊತ್ತದ ದಂಡ (Fine) ವಿಧಿಸಿದ್ದಾರೆ. ಅಲ್ಲದೆ, ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ವಾಹನ ಚಲಾಯಿಸಲು ಬಿಡದ ಪೊಲೀಸರು, ಲಾರಿಯನ್ನು ವಶಕ್ಕೆ ಪಡೆದು ಜೆಪಿ ನಗರ ಪೊಲೀಸ್ ಠಾಣೆಯ ಸಮೀಪವೇ ತಂದು ನಿಲ್ಲಿಸಿದ್ದರು.
ಠಾಣೆಯ ಬಳಿಯೇ ಲಾರಿಯಲ್ಲಿ ಆತ್ಮ*ಹತ್ಯೆ:
ಪೊಲೀಸರು ಲಾರಿಯನ್ನು ಠಾಣೆಯ ಹತ್ತಿರ ನಿಲ್ಲಿಸಿ ಹೋದ ನಂತರ, ಚಾಲಕ ಷಣ್ಮುಗ ತೀವ್ರ ಮಾನಸಿಕ ಅಸಮಾಧಾನಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಮದ್ಯಪಾನದ ಅಮಲು ಹಾಗೂ ಪೊಲೀಸರು ದಂಡ ಹಾಕಿದ ವಿಚಾರದಿಂದ ನೊಂದ ಆತ, ತಡರಾತ್ರಿ ಲಾರಿಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಇಂದು ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಿದ್ದು, ಲಾರಿಯೊಳಗೆ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಪೊಲೀಸ್ ತನಿಖೆ ಚುರುಕು:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಜೆಪಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮದ್ಯಪಾನ ಮಾಡಿದ್ದರಿಂದ ಉಂಟಾದ ಭಯ ಅಥವಾ ದಂಡ ಪಾವತಿಸಲು ಹಣವಿಲ್ಲದ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈಗಾಗಲೇ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ‘ಚಾಲಕ ಷಣ್ಮುಗ ಮದ್ಯಪಾನ ಮಾಡಿದ್ದ ಎನ್ನುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ನಿಯಮದಂತೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಆತ ಈ ರೀತಿ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
