ಕೆ.ಆರ್.ಪೇಟೆ,ಮಾ.25: ತಾಲೂಕಿನ ಕಿಕ್ಕೇರಿ ಮತ್ತು ಲಕ್ಷ್ಮೀಪುರ ಅವಳಿ ಗ್ರಾಮಗಳ ಗ್ರಾಮದೇವತೆ ಶ್ರೀ ಕಿಕ್ಕೇರಮ್ಮ(ಲಕ್ಷ್ಮೀದೇವಿ) ನವರ ಬ್ರಹ್ಮರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸಡಗರ ಸಂಭ್ರಮದಿಂದ ನಡೆಯಿತು.
ಲಕ್ಷ್ಮೀಪುರ ಮತ್ತು ಕಿಕ್ಕೇರಿ ಅವಳಿ ಗ್ರಾಮಗಳ ಮುಖಂಡರು ಗ್ರಾಮದ ನಾಡಕಚೇರಿ ಬಳಿ ಸರ್ವಾಂಲಕಾರಗೊಂಡಿದ್ದ ರಥದಲ್ಲಿ ಸಂಜೆ ಸುಮಾರು 5ಗಂಟೆಯ ಸಮಾರಿನಲ್ಲಿ ಕಿಕ್ಕೇರಮ್ಮನವರ ಉತ್ಸವ ಮೂರ್ತಿಯನ್ನು ಕೂರಿಸಿ, ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 20ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ರಥಕ್ಕೆ ಹಣ್ಣು-ಜವನ ಅರ್ಪಿಸಿ ಕಿಕ್ಕೇರಮ್ಮನಿಗೇ ಉಘೇ.. ಉಘೇ.. ಶ್ರೀ ಲಕ್ಷ್ಮೀ ದೇವಿಗೆ ಉಘೇ.. ಉಘೇ.. ಎಂಬ ಜಯಘೋಷಗಳನ್ನು ಕೂಗುತ್ತಾ ರಥವನ್ನು ಕಿಕ್ಕೇರಿ ಪಟ್ಟಣದ ಪೇಟೆ ಬೀದಿಯಿಂದ ಆರಂಭಿಸಿ ಕೆ.ಆರ್.ಪೇಟೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಮಾರ್ಗವಾಗಿ ಕೆಪಿಎಸ್ ಶಾಲೆಯ ಮೈದಾನದ ಮೂಲಕ ಸಾಗಿ ಕಿಕ್ಕೇರಮ್ಮನ ದೇವಾಲಯದ ಬಳಿ ಸುಮಾರು 6ಗಂಟೆಗೆ ಸಂಪನ್ನಗೊಂಡಿತು.
ನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಿಕ್ಕೇರಿಮ್ಮನ ಒಕ್ಕಲಿನವರು ಒಂದು ವಾರಕ್ಕೆ ಮುಂಚೆ ಕಿಕ್ಕೇರಿ ಗ್ರಾಮಕ್ಕೆ ಬಂದು ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷವಾಗಿದೆ.
ಯುಗಾದಿ ಹಬ್ಬದ ನಂತರ ಏಳು ದಿನಗಳ ಬಳಿಕ ನನಡೆಯುವ ಕಿಕ್ಕೇರಮ್ಮನ ಜಾತ್ರಾ ಮಹೋತ್ಸವ, ರಥೋತ್ಸವ ಇನ್ನಿತರ ಕಾರ್ಯಕ್ರಮಗಳು ನಡೆದವು. ಕಿಕ್ಕೇರಮ್ಮನವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಲಕ್ಷ್ಮೀಪುರ-ಕಿಕ್ಕೇರಿ ಎರಡೂ ಗ್ರಾಮಗಳ ಸರ್ವ ಎಲ್ಲಾ ಜನಾಂಗದವರು ಸಕ್ರಿಯವಾಗಿ ಭಾಗವಹಿಸಿದ್ದರು. ನಾಡಿನ ನಾನಾ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿ ಕಿಕ್ಕೇರಮ್ಮನ ಕೃಫೆಗೆ ಪಾತ್ರರಾದರು. ಲಕ್ಷ್ಮೀಪುರದ ತೆಂಡೆಯವರೆಲ್ಲ ಲಕ್ಕಮ್ಮನ ವಂಶಸ್ಥರು. ಇವರು ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ಮತ್ತು ಬೂನಾಂಶಿ ಎಂಬ ನಾಲ್ಕು ವಠಾರದವರು. ಕಿಕ್ಕೇರಮ್ಮನ ಜಾತ್ರೆ ಮಹೋತ್ಸವವನ್ನು ನಡೆಸಿಕೊಟ್ಟರು.
ಕೇತಕಿ ನದಿ ದಡದ ಊರೇ ಕಿಕ್ಕೇರಿ:
ಶಕ್ತಿ ದೇವತೆ ಕಿಕ್ಕೇರಮ್ಮ ನೆಲೆಸಿರುವ ಊರು ಸರ್ವಜ್ಞಪುರಿ, ಕಾಳಿಕಾಂಬಪುರಿ ಎಂದು ಕರೆಸಿಕೊಳ್ಳುತ್ತಿದ್ದ ಕಿಕ್ಕೇರಿ ಗ್ರಾಮ ದೇವತೆ ಲಕ್ಷ್ಮೀದೇವಿ ಶಕ್ತಿ ದೇವತೆಯಾಗಿ, ಸಂಕಷ್ಟ ನಿವಾರಣೆಗಾಗಿ ಪ್ರಸಿದ್ಧಿ ಪಡೆದಿದ್ದಾಳೆ.
ಕಿಕ್ಕೇರಮ್ಮ ದೇಗುಲ ಪೂರ್ವಾಭಿಮುಖವಾಗಿದ್ದು, ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಪೂರ್ವಭಾಗದಲ್ಲಿ ಕೆರೆ ಅಂಗಳವಿದೆ. ಇದನ್ನು ಪೂರ್ವಕಾಲದಲ್ಲಿ ಈ ಕೆರೆಯನ್ನು ಕೇತಕಿ ನದಿ ಎಂದು ಕರೆಯಲಾಗುತ್ತಿತ್ತು.
ಕೇತಕಿ ನದಿ ದಡದಲ್ಲಿ ನಿರ್ಮಾಣಗೊಂಡಿರುವ ಕಾರಣ ಕಿಕ್ಕೇರಿ ಎಂದು ಕರೆಯಲಾಯಿತು ಎಂದು ಪೂರ್ವಜನ ಮಾತಾಗಿದೆ. ಕೇತಕಾ ನದಿ ಅಥವಾ ಕಿಕ್ಕೇರಿ ಕೆರೆಯು ಕಿಕ್ಕೇರಿ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಜೀವ ನದಿಯಾಗಿ, ನಿರಂತರವಾಗಿ ಹರಿಯುತ್ತಾ ಇಲ್ಲಿನ ಜನರಿಗೆ ಹಸಿರು ಕ್ರಾಂತಿಗೆ ಕಾರಣವಾಗಿತ್ತು.
ಗ್ರಾಮ ದೇವತೆ ಕಿಕ್ಕೇರಮ್ಮ ಕಿಕ್ಕೇರಿ, ಲಕ್ಷ್ಮೀಪುರ ಸುತ್ತಮುತ್ತ ಗ್ರಾಮಗಳ ರಕ್ಷಣೆಗೆ ನಿಂತ ದೇವತೆಯಾಗಿದ್ದು, ದೇವಿ ಸನ್ನಿದಿಯಲ್ಲಿ ನಾನಾ ಪೂಜೆ, ಜಾತ್ರೆ-ಮೆರವಣಿಗೆಗಳು ನಡೆಯುತ್ತವೆ.
ವಿಜಯನಗರ ಅರಸರ ಕಾಲ ಅಥವಾ ಅದಕ್ಕಿಂತಲೂ ಪೂರ್ವದಿಂದಲೇ ಈ ದೇಗುಲ ನಿರ್ಮಾಣವಾಗಿದೆ. ದಾಖಲೆಗಳ ಪ್ರಕಾರ ಈ ದೇವಾಲಯವು ಒಂದನೇ ಹರಿಹರ ರಾಯ, ಆತನ ತಮ್ಮ ಹಾಗೂ ಒಂದನೇ ಬುಕ್ಕರಾಯನ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿದೆ.
ಕ್ರಿ.ಶ.1368ರಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಶ್ರೀ ಮಠದ ಪಕ್ಕದಲ್ಲಿರುವ ಜೈನ ದೇವಾಲಯದಲ್ಲಿ ಒಂದನೇ ಬುಕ್ಕರಾಯ ಬರೆಯಿಸಿರುವ ಬುಕ್ಕರಾಯನ ಶಾಸನದಲ್ಲೂ ಕಿಕ್ಕೇರಮ್ಮನ ದೇವಾಲಯದ ನಿರ್ಮಾಣದ ಬಗ್ಗೆ ಉಲ್ಲೇಖವಾಗಿದೆ.

*ಹಾಲುಮತ ಸಮಾಜಕ್ಕೆ ಪೂಜಾ ಭಾಗ್ಯ*: ಕಿಕ್ಕೇರಮ್ಮ ವಿಜಯನಗರ ಬ್ರಾಹ್ಮಣ ಸಂಪ್ರದಾಯಸ್ಥರಾದ ಹೆಬ್ಬಾರ ರಾಯರ ಕಾಲದಲ್ಲಿ ಕಿಕ್ಕೇರಿಯಲ್ಲಿ ನೆಲೆಸಿದಳು. ಮೊದಲು ಈ ದೇವಸ್ಥಾನಕ್ಕೆ ಬ್ರಾಹ್ಮಣರು ಪೂಜೆ ನೆರವೇರಿಸುತ್ತಿದ್ದರು. ಕಾಲಾ ನಂತರದಲ್ಲಿ ಕಿಕ್ಕೇರಿ ಸಮೀಪದಲ್ಲಿಯೇ ಇರುವ ಲಕ್ಷ್ಮೀಪುರದ ಕುರುಬ ಜನಾಂಗಕ್ಕೆ (ಹಾಲು ಮತದ ಕುರುಬರು) ಪೂಜೆಯ ಭಾಗ್ಯ ಒಲಿದು ಬಂದಿದೆ. ಇಂದಿಗೂ ಅವರೇ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ದೇವಾಲಯವನ್ನು ದ್ರಾವಿಡ-ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅಮ್ಮನವರ ರಥೋತ್ಸವ ಕಾಲದಲ್ಲಿ ಪೂಜೆಯ ಹಕ್ಕನ್ನು ಬ್ರಾಹ್ಮಣರಿಗೆ ಬಿಟ್ಟು ಕೊಡಲಾಗಿದ್ದು, ಇಂದಿಗೂ ಆ ಆಚರಣೆ ನಿರಂತರವಾಗಿ ನಡೆದುಕೊಂಡು ಬಂದಿದೆ.
*ಬೈಗುಳದ ವಸಂತನ ಕುಣಿತ*
ರಂಗೇನಗಳ್ಳಿಯ ದೇವಿ ಭಕ್ತರು ಬೈಗುಳದ ಉತ್ಸವದಲ್ಲಿ ಕೊಂತನ ಕಟ್ಟಿಕೊಂಡು ಕುಣಿಯುವ ವಸಂತ ಉತ್ಸವ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರು ನಾಚಿ ನೀರಾಗುವುದು ಇದು ಈ ಕಿಕ್ಕೇರಮ್ಮನ ಜಾತ್ರೆಯ ವಿಶೇಷವಾಗಿದೆ.
ಕಿಕ್ಕೇರಿ ಪೋಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಯರಾಮ್ ಅವರ ನೇತೃತ್ವದಲ್ಲಿ ರಥೋತ್ಸವಕ್ಕೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.
– ಶ್ರೀನಿವಾಸ್ ಆರ್.
