ಹಿಂದಿನ ಕಾಲದಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಆಡುತ್ತಿದ್ದ ಜನಪ್ರಿಯ ಆಟ ಕುಂಟೆಬಿಲ್ಲೆ. ಇದೊಂದು ಸಾಂಪ್ರದಾಯಿಕ ಆಟವೂ ಹೌದು. ಅದನ್ನೇ ಶೀರ್ಷಿಕೆಯಾಗಿಸಿಕೊಂಡ ದಕ್ಷಯಜ್ಞ, ತರ್ಲೆ ವಿಲೇಜ್, ಋತುಮತಿ, ಹೂವಿನ ಹಾರದಂಥ ವಿಭಿನ್ನ ಚಿತ್ರಗಳನ್ನು ತೆರೆಗೆ ತಂದಿದ್ದ ನಿರ್ದೇಶಕ ಸಿದ್ದೇಗೌಡ ಜಿ.ಬಿ.ಎಸ್. ಅವರು ಈಗ ‘ಕುಂಟೆ ಬೆಲ್ಲೆ’ ಎಂಬ ವಿಭಿನ್ನ ಶೀರ್ಷಿಕೆಗೆ ಆಕ್ಷನ್ ಕಟ್ ಹೇಳಿದ್ದಾರೆ.
ಯವನಟ ಯದು ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದು ಕೃಷ್ಣ ರುಕ್ಮಿಣಿ ಖ್ಯಾತಿಯ ಮೇಘಶ್ರೀ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಸಧ್ಯ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಸಿದ್ದತೆ ಮಾಡಿಕೊಳ್ಳುತ್ತಿದೆ. ಜೀವಿತ ಕ್ರಿಯೇಷನ್ಸ್ ಮೂಲಕ ಎಸ್.ಬಿ. ಶಿವು ಹಾಗೂ ಕುಮಾರ್ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ಕುರಿತಂತೆ ಮಾತನಾಡಿದ ಚಿತ್ರದ ನಿರ್ದೇಶಕ ಸಿದ್ದೇಗೌಡ ಜೀವನದ ಮೌಲ್ಯ, ಪ್ರೀತಿ ಪ್ರೇಮದ ತಾರತಮ್ಯ, ಘರ್ಷಣೆ, ಸಮಾಜದ ಹುಳುಕುಗಳನ್ನು ತೆರೆದಿಡುವ ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಸೆಂಟಿಮೆಂಟ್ ಕಥಾಹಂದರ ಒಂಗೊಂಡ ಚಿತ್ರವಿದು.
ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಶ್ರೀಮಂತ ಯುವತಿಯ ಪ್ರೀತಿಯಲ್ಲಿ ಬಿದ್ದಾಗ ನಂತರ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ. ಆ ಹಾದಿಯಲ್ಲಿ ಪೋಷಕರಿಂದ, ಸಮಾಜದಿಂದ ಆತನಿಗೆ ಏನೆಲ್ಲ ಅಡೆತಡೆಗಳು ಎದುರಾಗುತ್ತವೆ, ಕೊನೆಗೆ ಆತ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತೇ, ಇಲ್ಲವೇ ಎಂಬುದನ್ನು “ಕುಂಟೆಬಿಲ್ಲೆ” ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ.

ಕುಂಟೆಬಿಲ್ಲೆ ಎಂಬ ಟೈಟಲ್ ಚಿತ್ರಕ್ಕೆ ಏಕೆ ಇಟ್ಟಿದ್ದೇವೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುವುದು ಸಹಜ. ಚಿತ್ರದಲ್ಲೂ ಕುಂಟೆಬಿಲ್ಲೆ ಥರದ ಒಂದು ಗೇಮ್ ಇದೆ, ಅದು ಯಾತಕ್ಕೆ, ಯರ್ಯಾರ ನಡುವೆ ನಡೆಯುತ್ತದೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು, ಇದೊಂದು ವಿಭಿನ್ನ ನಿರೂಪಣೆಯ ಚಿತ್ರವಾಗಿದ್ದು ಇದುವರೆಗೂ ಈ ಥರದ ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡಿಲ್ಲವೆಂದೇ ಹೇಳಬಹುದು.

ಕುಂಟೆಬಿಲ್ಲೆ ಚಿತ್ರಕ್ಕೆ ಮೈಸೂರು, ಕೆಆರ್ ನಗರ, ಹೆಚ್ಡಿ ಕೋಟೆಯ ಚಿಕ್ಕಮ್ಮನ ಬೆಟ್ಟ, ಚಿಕ್ಕದೇವಿ ಬೆಟ್ಟ, ಕೋಳಿ ಫಾರಂ ಸೇರಿದಂತೆ ಹಲವಾರು ಲೊಕೇಶನ್ಗಳಲ್ಲಿ ಸುಮಾರು ೩೮ ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ, ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಚಿತ್ರದ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.
-ಶ್ರೀ ಸಾಯಿ ಎಸ್ ಮಂಜು
