ತುಮಕೂರು- ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು,ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರು ಆಗಿರುವ ಡಾ.ಎಂ.ಆರ್.ಹುಲಿನಾಯ್ಕರ್ ಸಾಧನೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ರಾಷ್ಟ್ರಮಟ್ಟದ ಡಾ.ಎಂ.ಆರ್. ಹುಲಿನಾಯ್ಕರ್ ಮತ್ತು ಶಾಂತದುರ್ಗಾದೇವಿಹುಲಿನಾಯ್ಕರ್ ಜೀವನ ಸಾಧನ ಪುರಸ್ಕಾರವನ್ನು ಮಾ. 13 ರಂದು ಲ್ಯಾಪ್ರೋಸ್ಕೋಪಿಕ್ ಮತ್ತು ರೋಬೋಟಿಕ್ ತಜ್ಞರಾದ ಡಾ.ಪಳಿನಿವೇಲು ಅವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಸಂಚಾಲಕರಾದ ಡಾ.ರಮಣ್ ಹುಲಿನಾಯ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಉತ್ತರ ಕರ್ನಾಟಕದ ಕಡು ಬಡತನ ಕುಟುಂಬದಲ್ಲಿ ಹುಟ್ಟಿ ವೈದ್ಯಕೀಯ ಶಿಕ್ಷಣ ಪಡೆದು, ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ವೃತ್ತಿ ನಡೆಸಿ, ತದನಂತರ ಶಿಕ್ಷಣ ಸಂಸ್ಥೆಗಳನ್ನು ತೆರೆದು, ವಿಧಾನಪರಿಷತ್ ಸದಸ್ಯರಾಗಿ,ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿರುವ ಡಾ.ಎಂ.ಆರ್.ಹುಲಿನಾಯ್ಕರ್ ರವರು ಸಮಾಜಮುಖಿಯಾಗಿ ಸದಾ ಜನಮಾನಸದಲ್ಲಿ ಉಳಿಯುವಂತೆ ಮಾಡುವ ಉದ್ದೇಶದಿಂದ ವೈದ್ಯಕೀಯ,ಸಮಾಜ ಸೇವೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಸಾಧಕರನ್ನು ಗುರುತಿಸಿ,ಡಾ.ಎಂ.ಆರ್.ಹುಲಿನಾಯ್ಕರ್ ಮತ್ತು ಶ್ರೀಮತಿ ಶಾಂತದುರ್ಗಾದೇವಿ ಹುಲಿನಾಯ್ಕರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲು ಪ್ರತಿಷ್ಠಾನ ತೆರೆದಿದ್ದು,ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಬಡತನವನ್ನೇ ಬದುಕಾಗಿಸಿಕೊಂಡು ವೈದ್ಯರಾಗಿ ಹತ್ತಾರು ಸಂಶೋಧನೆಗಳನ್ನು ನಡೆಸಿ,ಜನಸಾಮಾನ್ಯರಿಗೂ ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆ ದೊರೆಯುವಂತೆ ಮಾಡಿದ ಡಾ.ಪಳಿನಿವೇಲು ಅವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ಪ್ರಶಸ್ತಿಯೂ 1.50 ಲಕ್ಷ ನಗದು ಪುರಸ್ಕಾರದ ಜೊತೆಗೆ, ಪ್ರಶಸ್ತಿ ಫಲಕ, ಫಲ ತಾಂಬೂಲಗಳನ್ನು ಹೊಂದಿದೆ.ಡಾ.ಪಳಿನಿವೇಲು ಅವರು ಪ್ರಶಸ್ತಿ ಸ್ವೀಕರಿಸಲು ಒಪ್ಪಿರುತ್ತಾರೆ ಎಂದರು.
ಮಾ.13ರ ಶನಿವಾರ ನಡೆಯುವ ಡಾ.ಎಂ.ಆರ್.ಹುಲಿನಾಯ್ಕರ್ ಮತ್ತು ಶ್ರೀಮತಿ ಶಾಂತದುರ್ಗಾದೇವಿ ಹುಲಿನಾಯ್ಕರ್ ಜೀವಮಾನ ಸಾಧನೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಸುವರ್ಣಮುಖಿ ಸಂಸ್ಕೃತಿಧಾಮದ ಅಧ್ಯಕ್ಷರಾದ ಡಾ.ಆಚಾರ್ಯ ಎಂ.ನಾಗರಾಜ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಡಾ.ಪಳಿನಿವೇಲು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಈಶ್ವರ್ ಅರ್.ಹೊಸಮನಿ ಅಭಿನಂದನಾ ಭಾಷಣ ಮಾಡಲಿದ್ದಾರೆ.ರಾಷ್ಟ್ರೀಯ ಸ್ವಾಭಿಮಾನ ಪರಿಷತ್ತಿನ ಅಧ್ಯಕ್ಷರಾಗಿರುವ ಬಸವರಾಜು ಪಾಟೀಲ್ ಅವರು ಡಾ.ಪಳನಿವೇಲು ಅವರ ಸಾಧನೆ ಕುರಿತು ಪರಿಚಯ ಮಾಡಲಿದ್ದಾರೆ ಎಂದು ಡಾ.ರಮಣ್ ಹುಲಿನಾಯ್ಕರ್ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್,ಟ್ರಸ್ಟಿಗಳಾದ ಡಾ.ಲಾವಣ್ಯರಮಣ್ ಹುಲಿನಾಯ್ಕರ್, ಅಂಬಿಕಾಹುಲಿನಾಯ್ಕರ್, ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಡಾ.ನರೇಂದ್ರ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
