ಕ್ರಾಂತಿ ಎಂಬ ಪದವು ನಮ್ಮ ಮನಸ್ಸಿನಲ್ಲಿ ಒಂದು ಗದ್ದಲವನ್ನು ಎಬ್ಬಿಸುತ್ತದೆ. ಧ್ವಜಗಳು, ಘೋಷಣೆಗಳು, ಹೋರಾಟಗಳು, ರಾಜಕೀಯ ಬದಲಾವಣೆಗಳು — ಇವೆಲ್ಲವೂ ಕ್ರಾಂತಿಯ ರೂಪಗಳಂತೆ ಕಾಣಿಸುತ್ತವೆ. ಆದರೆ ನಿಜವಾಗಿ ನೋಡಿದರೆ, ಕ್ರಾಂತಿ ಎಂದರೆ ಶಬ್ದದ ಸಂಗತಿ ಅಲ್ಲ; ಅದು ಮೌನದ ಘಟನೆ. ನಿಸರ್ಗವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಬೀಜವು ಮಣ್ಣಿನೊಳಗೆ ಸಿಡಿಯುತ್ತದೆ, ಆದರೆ ಅದರ ಸಿಡಿತ ಯಾರಿಗೂ ಕೇಳಿಸದು. ಹೂವು ಅರಳುತ್ತದೆ, ಆದರೆ ಅದು ಘೋಷಣೆ ಮಾಡುವುದಿಲ್ಲ. ಈ ಮೌನವೇ ನಿಜವಾದ ಕ್ರಾಂತಿಯ ಸ್ವಭಾವ.
ನಾವು ಎಲ್ಲರೂ ಬದಲಾವಣೆ ಬೇಕು ಎಂದು ಹೇಳುತ್ತೇವೆ. ಸಮಾಜ ಬದಲಾಗಬೇಕು, ವ್ಯವಸ್ಥೆ ಬದಲಾಗಬೇಕು, ರಾಜಕೀಯ ಸುಧಾರಿಸಬೇಕು — ಈ ಬೇಡಿಕೆಗಳು ಸಾಮಾನ್ಯ. ಆದರೆ ಒಂದು ಮೂಲಭೂತ ಪ್ರಶ್ನೆಯನ್ನು ನಾವು ವಿರಳವಾಗಿ ಕೇಳುತ್ತೇವೆ: “ನಾನು ಬದಲಾಗಲು ಸಿದ್ಧನೇ?” ಬಹುಪಾಲು ಸಂದರ್ಭಗಳಲ್ಲಿ, ನಾವು ಕ್ರಾಂತಿಗೆ ತೆರೆದುಕೊಳ್ಳುವುದಿಲ್ಲ; ನಾವು ಅದರ ಕಲ್ಪನೆಗೆ ಮಾತ್ರ ಆಕರ್ಷಿತರಾಗುತ್ತೇವೆ. ಈ ಆಕರ್ಷಣೆಯೊಳಗೆ ಆತ್ಮವಂಚನೆಯೂ ಇದೆ, ಸೂಕ್ಷ್ಮ ಹಿಪೋಕ್ರಸಿಯೂ ಇದೆ. ಹೊರಗಿನ ಬದಲಾವಣೆಯನ್ನು ಬಯಸುವ ನಾವು, ನಮ್ಮೊಳಗಿನ ಅಹಂಕಾರ ˌ ಅಧಿಕಾರ ದಾಹˌ ದುರಾಸೆˌ ಹಿಂಸೆ….ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡಿರುತ್ತೇವೆ. ನಮ್ಮೊಳಗಿನ ಅಹಂಕಾರˌ ದುರಾಸೆಗಳು ಸಾಯದ ಹೊರತು ಯಾವ ಕ್ರಾಂತಿಯು ಬದಲಾವಣೆ ತರದು.
ಕ್ರಾಂತಿ ಎಂದರೆ ಒಂದರಿಂದ ಮತ್ತೊಂದಕ್ಕೆ ಜಿಗಿತವಲ್ಲ. ಹಳೆಯ ವ್ಯವಸ್ಥೆಯನ್ನು ಬಿಟ್ಟು ಹೊಸ ವ್ಯವಸ್ಥೆಯನ್ನು ಸ್ವೀಕರಿಸುವುದೂ ಅಲ್ಲ. ಹಾಗಿದ್ದರೆ ಅದು ಕೇವಲ ಬದಲಾವಣೆ ಮಾತ್ರ — ಕ್ರಾಂತಿ ಅಲ್ಲ. ನಿಜವಾದ ಕ್ರಾಂತಿ ಅಂದರೆ ಅದು ಹೊರಗಿನ ಲೋಕದೊಂದಿಗೆ ಅಲ್ಲ, ನಮ್ಮೊಳಗಿನ ಹಳೆಯ ಚಿಂತನೆ ಮತ್ತು ಹೊಸ ಅರಿವಿನ ನಡುವೆ.
ಮಾನವ ಇತಿಹಾಸವನ್ನು ನೋಡಿದರೆ, ನಾವು ಸಾವಿರಾರು ವರ್ಷಗಳಿಂದ ಒಂದರಿಂದ ಮತ್ತೊಂದಕ್ಕೆ ಓಡುತ್ತಿದ್ದೇವೆ. ಒಂದು ನಂಬಿಕೆಯಿಂದ ಮತ್ತೊಂದಕ್ಕೆ, ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ. ಆದರೆ ಪ್ರತಿಯೊಂದು “ಹೊಸದು” ನಮ್ಮದೇ ಹಳೆಯ ಮನಸ್ಸಿನ ಉತ್ಪನ್ನ. ಆದ್ದರಿಂದ ಅದು ಹೊಸ ರೂಪದ ನರಕವಾಗುತ್ತದೆ. ಈ ನಿರಂತರ ನೆಗೆತವೇ ನಮ್ಮೊಳಗಿನ ಸ್ವರ್ಗ ಮತ್ತು ನರಕದ ಸಂಘರ್ಷವನ್ನು ಮುಂದುವರಿಸುತ್ತದೆ.
ಹಾಗಾದರೆ ನಿಜವಾದ ಕ್ರಾಂತಿ ಎಲ್ಲಿದೆ? ಅದು ಸಮಾಜದಲ್ಲಿ ಹುಟ್ಟುವುದಿಲ್ಲ. ಅದು ರಾಜಕೀಯದಿಂದ ಬರೋದಿಲ್ಲ. ಅದು ವ್ಯಕ್ತಿಯ ಒಳಗೆ ಹುಟ್ಟುತ್ತದೆ. ಬುದ್ಧ ತನ್ನೊಳಗಿನ ಸತ್ಯವನ್ನು ಕಂಡುಕೊಂಡಾಗ, ಅವನು ಸಮಾಜವನ್ನು ಬದಲಿಸಲು ಹೊರಟಿರಲಿಲ್ಲ. ಆದರೆ ಅವನ ಒಳಗಿನ ಬದಲಾವಣೆ ಸಮಾಜದ ಮೇಲೆ ಆಳವಾದ ಪರಿಣಾಮ ಬೀರಿತು. ಹಾಗೆಯೇ ಬಸವಣ್ಣ ತನ್ನ ಅನುಭವದಿಂದಲೇ ಒಂದು ಹೊಸ ದಾರಿಯನ್ನು ತೆರೆದರು. ಅವರು ಕ್ರಾಂತಿಯನ್ನು ಬದುಕಿದರು.
ವ್ಯಕ್ತಿ ಮತ್ತು ಸಮಾಜದ ನಡುವೆ ಸದಾ ಒಂದು ಸಂಘರ್ಷ ಇರುತ್ತದೆ. ಸಮಾಜಕ್ಕೆ ಸ್ಥಿರತೆ ಬೇಕು; ವ್ಯಕ್ತಿಗೆ ಸ್ವಾತಂತ್ರ್ಯ ಬೇಕು. ಬಹುಪಾಲು ಜನರು ಸುರಕ್ಷತೆಯಿಗಾಗಿ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಬದುಕುತ್ತಾರೆ. ಆದರೆ ಕ್ರಾಂತಿ ಸುರಕ್ಷತೆಯಲ್ಲಿ ಹುಟ್ಟುವುದಿಲ್ಲ. ಅದು ಅಜ್ಞಾತದೊಳಗೆ ಹೆಜ್ಜೆ ಇಡುವ ಧೈರ್ಯದಲ್ಲಿ ಹುಟ್ಟುತ್ತದೆ. ಅದಕ್ಕಾಗಿ ನಿಜವಾದ ಕ್ರಾಂತಿಕಾರಿಗಳು ವಿರಳ. ಅವರು ಹೊರಗಿನ ಹೋರಾಟಕ್ಕಿಂತ ಒಳಗಿನ ಪರಿವರ್ತನೆಯನ್ನು ಆಯ್ಕೆ ಮಾಡುತ್ತಾರೆ.
ನಾವು ಅನೇಕ ಬಾರಿ ಕ್ರಾಂತಿಯ ಹೆಸರಿನಲ್ಲಿ ಪಲಾಯನ ಮಾಡುತ್ತೇವೆ. ಮತ್ತೊಬ್ಬರಿಗೆ ಜವಾಬ್ದಾರಿ ಕಲಿಸುತ್ತೇವೆ, ಆದರೆ ನಮ್ಮೊಳಗೆ ನೋಡಿಕೊಳ್ಳುವುದಿಲ್ಲ. ಇದು ಕ್ರಾಂತಿ ಅಲ್ಲ — ಇದು ತಪ್ಪಿಸಿಕೊಳ್ಳುವಿಕೆ. ನಿಜವಾದ ಕ್ರಾಂತಿ ಯಾವತ್ತೂ ವೈಯಕ್ತಿಕ. ಅದು ನಿನ್ನೊಳಗೆ ಆರಂಭವಾಗಬೇಕು. ವ್ಯಕ್ತಿಗತವಾಗಿ ಆಗದ ಕ್ರಾಂತಿಯನ್ನು ಸಮಾಜದಲ್ಲಿ ಬಯಸುವುದು ಒಂದು ಮಿಥ್ಯೆ.
ಸಮಾಜ ತನ್ನದೇ ಗತಿಯಲ್ಲಿ ಬದಲಾಗುತ್ತಲೇ ಇರುತ್ತದೆ. ಅದು ನೈಸರ್ಗಿಕ ಪ್ರಕ್ರಿಯೆ. ಆದರೆ ನಮ್ಮ ಅಹಂಕಾರ ಆ ಬದಲಾವಣೆಯನ್ನು ನಿಯಂತ್ರಿಸಲು ಯತ್ನಿಸುತ್ತದೆ. “ನಾನು ಬಯಸಿದಂತೆ ಬದಲಾಗಬೇಕು” ಎಂಬ ಆಕಾಂಕ್ಷೆ ಕ್ರಾಂತಿ ಅಲ್ಲ; ಅದು ನಿಯಂತ್ರಣದ ಆಸೆ. ಮೂಲದಿಂದ ಬದಲಾಗುವವರು ಅತಿ ಕಡಿಮೆ. ಅವರು ಅನುಕರಣ ಮಾಡುವುದಿಲ್ಲ; ಅವರು ದಾರಿ ನಿರ್ಮಿಸುತ್ತಾರೆ. ಉಳಿದವರು ಅವರನ್ನು ಅನುಸರಿಸುತ್ತಾರೆ.
ಕೊನೆಯಲ್ಲಿ, ಕ್ರಾಂತಿ ಎಂದರೆ ಒಂದು ಒಳಗಿನ ಮೌನ. ಅಲ್ಲಿ ಮುಂದೆ ಹೋಗಬೇಕಾದ ದಾರಿಯೂ ಇಲ್ಲ, ಹಿಂದಕ್ಕೆ ತಿರುಗಬೇಕಾದ ಅಗತ್ಯವೂ ಇಲ್ಲ. ಅಲ್ಲಿ ವ್ಯಕ್ತಿ ತನ್ನನ್ನು ಸಂಪೂರ್ಣವಾಗಿ ಕಾಣುತ್ತಾನೆ. ಇದೇ ಪರಿಪೂರ್ಣ ಕ್ರಾಂತಿ.
ಆದ್ದರಿಂದ ಕ್ರಾಂತಿ ಹೊರಗಿನಿಂದ ಬರುವುದಿಲ್ಲ. ಅದು ನಿನ್ನೊಳಗೆ ಹುಟ್ಟಬೇಕು. ನೀನು ಬದಲಾಗಿದರೆ, ಅದು ಕೇವಲ ಒಂದು ವ್ಯಕ್ತಿಯ ಬದಲಾವಣೆ ಅಲ್ಲ — ಅದು ಸಮಸ್ತ ಸೃಷ್ಟಿಯಲ್ಲಿ ಒಂದು ಹೊಸ ಸ್ಪಂದನೆ.
ಜಯದೇವ ಪೂಜಾರ
7676870233
