ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದ ಪತಿ
ಮಡಿಕೇರಿ: ಸತ್ತ ವ್ಯಕ್ತಿಗಳು ಬದುಕಿ ಎದ್ದು ಬರುವಂತಹ ದೃಶ್ಯಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಸತ್ತು ಶವ ಸಂಸ್ಕಾರ ನೇರವೇರಿಸಿದ್ದ ಮಹಿಳೆ ಐದು ವರ್ಷಗಳ ಬಳಿಕ ಪ್ರತ್ಯಕ್ಷವಾದಂತಹ ಸಿನಿಮೀಯ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ. ಕೇಳುವುದಕ್ಕೆ ಅಚ್ಚರಿ ಎನಿಸಬಹುದು. ಆದರೆ ಇದು ಅಕ್ಷರಶಃ ಸತ್ಯ ಸಂಗತಿ.
ಹೌದು ಸಿನಿಮಾಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ ಯಾವುದೇ ವ್ಯಕ್ತಿ ಸತ್ತ ಬಳಿಕ ಎದ್ದು ಬರುವಂತಹ ಘಟನೆಯನ್ನು ನೋಡಿರುತ್ತೇವೆ. ನಿಜ ಜೀವನದಲ್ಲೂ ಅಪರೂಪಕ್ಕೆ ಎಲ್ಲಾದರೂ ಒಮ್ಮೆ ಈ ರೀತಿಯ ಘಟನೆಗಳನ್ನು ನೋಡಿರುತ್ತೇವೆ. ಇದೇ ರೀತಿಯ ನೈಜ ಘಟನೆಯೊಂದು ಮಡಿಕೇರಿ ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿ ನಡೆದಿದೆ. ಸತ್ತಿದ್ದಾಳೆಂದು ನಂಬಿ ಶವಸಂಸ್ಕಾರ ನೆರವೇರಿಸಿದ್ದ ಮಹಿಳೆ ಐದು ವರ್ಷಗಳ ಬಳಿಕ ಪ್ರತ್ಯಕ್ಷಗೊಂಡಿದ್ದಾಳೆ.
ಈ ಮಹಿಳೆಯ ಹೆಸರು ಮಲ್ಲಿಗೆ. ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ನಿವಾಸಿ ಮಲ್ಲಿಗೆ, ಸುರೇಶ್ ಎಂಬುವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಆದರೆ ಸುರೇಶ್ ಪತ್ನಿ ಮಲ್ಲಿಗೆ ಗಣೇಶ್ ಎಂಬುವರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ಆತನ ಜೊತೆಯೇ 2020ರಲ್ಲಿ ಓಡಿ ಹೋಗಿದ್ದಾಳೆ. ಬಳಿಕ ಮಲ್ಲಿಗೆಯ ಪತಿ ಸುರೇಶ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತ್ನಿ ಮಲ್ಲಿಗೆ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಇದಾದ ಬಳಿಕ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ಬಳಿ ಅಪರಿಚಿತ ಮಹಿಳೆಯ ಶವದ ಅಸ್ಥಿಪಂಜರ ಸಿಗುತ್ತದೆ. ಬೆಟ್ಟದಪುರ ಠಾಣೆಯ ಪೊಲೀಸರು ಸುರೇಶ್ ಪತ್ನಿ ಮಲ್ಲಿಗೆಯ ಶವ ಇದೇ ಇರಬಹುದು ಎಂದುಕೊಂಡು ಸುರೇಶ್ ರನ್ನು ಕರೆ ತರುತ್ತಾರೆ. ಇಲ್ಲಿಂದಲೇ ಆರಂಭವಾಗೋದು ಅಸಲಿ ಕಥೆ. ಪತ್ನಿಯನ್ನು ತಾನೇ ಕೊಲೆ ಮಾಡಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿರುವ ಪೊಲೀಸರು, ಸುರೇಶ್ ರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ.

ಈ ಪ್ರಕರಣದಲ್ಲಿ ತಪ್ಪೇ ಮಾಡದ ಸುರೇಶ್ ಜೈಲು ಪಾಲಾಗುತ್ತಾನೆ. ತನ್ನ ಮಗನನ್ನು ಜೈಲಿನಿಂದ ಬಿಡಿಸಲು ಸುರೇಶ್ ತಂದೆ ಗಾಂಧಿ ಹಲವು ವಕೀಲರನ್ನು ಭೇಟಿ ಮಾಡಿ, ಮಗನನ್ನು ಜೈಲಿನಿಂದ ಆಚೆ ಕರೆ ತರುತ್ತಾರೆ. ಸುರೇಶ್ ಜೈಲಿನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಪತ್ನಿ ಮಲ್ಲಿಗೆ ಗಣೇಶ್ ಜೊತೆ ಓಡಾಡುತ್ತಿದ್ದ ವಿಷಯ ಗೊತ್ತಾಗುತ್ತದೆ. ಇದನ್ನು ತನ್ನ ಪರ ವಾದ ಮಾಡುತ್ತಿದ್ದ ವಕೀಲರಿಗೆ ತಿಳಿಸುತ್ತಾನೆ. ವಕೀಲ ಪಾಂಡು ಪೂಜಾರಿ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಕೂಡ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ. ಕೊನೆಗೆ ಕೋರ್ಟ್ ಮೊರೆ ಹೋಗಿರುವ ವಕೀಲ ಪಾಂಡು ಪೂಜಾರಿ ಅವರು, ಸುರೇಶ್ ಪತ್ನಿ ಮಲ್ಲಿಗೆ ಏಪ್ರಿಲ್ 1ರಂದು ಮಡಿಕೇರಿ ಬಳಿ ಇರುವ ಮಾಹಿತಿ ತಿಳಿದು ಆಕೆಯನ್ನು ಮೈಸೂರಿನ ನ್ಯಾಯಾಲಯಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುರೇಶ್, ಪತ್ನಿ ಮಲ್ಲಿಗೆ, ಕುಟುಂಬ ಸದಸ್ಯರು, ಪ್ರಕರಣದ ತನಿಖೆ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನೂ ವಿಚಾರಣೆ ನಡೆಸಿದ ಮೈಸೂರಿನ 5ನೇ ಜೆಎಂಎಫ್ ಸಿ ನ್ಯಾಯಾಲಯ ಇದೇ ಏಪ್ರಿಲ್ 17ರ ಒಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶಿಸಿದೆ.
ಇದರ ಬೆನ್ನಲ್ಲೇ ನನ್ನ ಮಗ ಯಾವುದೇ ತಪ್ಪು ಮಾಡದಿದ್ದರೂ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಈ ವಿಚಾರದಲ್ಲಿ ತಪ್ಪು ಮಾಡಿರುವ ಪೊಲೀಸರಿಗೂ ಶಿಕ್ಷೆ ಆಗಲಿ, ಮಗನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಂದೆ ಗಾಂಧಿ, ತಾಯಿ ಮುತ್ತಮ್ಮ ಮನವಿ ಮಾಡಿದ್ದಾರೆ.
