ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮಿತಿಯನ್ನು 3ರಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದ್ದು 2023-24ನೇ ಸಾಲಿನಲ್ಲಿ 6,744 ರೈತರಿಗೆ 290 ಕೋಟಿ ಹಾಗೂ 2025ರಲ್ಲಿ ಫೆಬ್ರವರಿ ಅಂತ್ಯದ ವರೆಗೆ 13,689 ರೈತರಿಗೆ 589.12 ಕೋಟಿ ರೂ. ಕೃಷಿ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 3ರಿಂದ 5 ಲಕ್ಷ ರೂ. ಕೃಷಿ ಸಾಲ ಪಡೆಯಲು ಎಲ್ಲ ರೈತರೂ ಅರ್ಹರಿರುವುದಿಲ್ಲ. ಕಡಿಮೆ ಹಿಡುವಳಿ ಹೊಂದಿದ್ದರೆ ಕಡಿಮೆ ಸಾಲ ಸಿಗಲಿದೆ. ಹೆಚ್ಚಿನ ಜಮೀನು ಇದ್ದರೆ ಆಗ ಅವರಿಗೆ 5 ಲಕ್ಷದ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ಸಿಗಲಿದೆ ಎಂದರು.
ಈ ಬಾರಿ ನಬಾರ್ಡ್ ವತಿಯಿಂದ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ನೆರವು ಸಿಕ್ಕಿಲ್ಲ. 5600 ಕೋಟಿ ನೆರವು ಸಿಗುವ ವಿಶ್ವಾಸವಿತ್ತು. ಆದರೆ, ಶೇ.58ರಷ್ಟು ಕಡಿಮೆ ಮಾಡಿದ್ದಾರೆ. ಮತ್ತೆ ಪತ್ರ ವ್ಯವಹಾರ ಮಾಡಿದ್ದರಿಂದ 936 ಕೋಟಿ ರೂಗಳನ್ನು ಮತ್ತೆ ನೀಡಲಾಗಿದೆ. ನಮಗೆ ಬರುವ ಸಂಪನ್ಮೂಲಗಳನ್ನು ಆಧರಿಸಿ ಕೃಷಿ ಸಾಲ ನೀಡಲಾಗುತ್ತದೆ. ಶೂನ್ಯ ಬಡ್ಡಿ ದರದಲ್ಲಿ ಸಹಕಾರಿ ಬ್ಯಾಂಕ್ಗಳು ಸಾಲ ನೀಡಿದಾಗ ಅದಕ್ಕೆ ತಗಲುವ ಬಡ್ಡಿ ದರವನ್ನು ಸರ್ಕಾರ ಪಾವತಿ ಮಾಡಲಿದೆ ಎಂದು ವಿವರಿಸಿದರು.
ಏನಿದು ಶೂನ್ಯ ಬಡ್ಡಿ ಸಾಲ?
ರಾಜ್ಯದ ರೈತರಿಗೆ ಸರಕಾರವು ಶೇಕಡಾ 3ರ ಬಡ್ಡಿ ದರದಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ವಿತರಿಸುವ ಯೋಜನೆಯನ್ನು 2004ರಲ್ಲಿ ಅನುಷ್ಠಾನಗೊಳಿಸಿದೆ. 2012-13ನೇ ಸಾಲನಲ್ಲಿ 1 ಲಕ್ಷ ರೂಪಾಯಿ ವರೆಗೆ ಅಲ್ಪಾವಧಿ ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿತ್ತು.
ಮಾರನೇ ವರ್ಷ ಅಂದರೆ 2013-14ನೇ ಸಾಲಿನಿಂದ 2 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲಮಿತಿ ವಿಸ್ತರಿಸಲಾಯಿತು. ಬಳಿಕ 2014-15ನೇ ಸಾಲಿನಿಂದ 2 ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗುತ್ತಿದೆ. ಹಿಂದಿನ ಬಿಜೆಪಿ ಸರಕಾರ ಈ ಮಿತಿಯನ್ನು 5 ಲಕ್ಷ ರೂಪಾಯಿ ಗೆ ಹೆಚ್ಚಿಸಿತ್ತು. ಆದರೆ ಅದು ಅನುಷ್ಠಾನಗೊಳ್ಳುವ ಮೊದಲೇ ಚುನಾವಣೆ ಬಂದು ಹೊಸ ಸರಕಾರ ರಚನೆಯಾಯಿತು. ಈಗೀನ ಸರಕಾರ ಕೂಡ ಬೆಳೆಸಾಲ ಮಿತಿಯನ್ನು 3ರಿಂದ 5 ಲಕ್ಷಕ್ಕೆ ಹೆಚ್ಚಿಸಿದೆ.
ರೈತರು ಪಡೆಯುವ ಎಲ್ಲ ಸಾಲಗಳಿಗೆ ಕೃಷಿ ಜಮೀನು ಇಲ್ಲವೇ ಬೆಳೆ ಆಧಾರವಾಗಿಟ್ಟುಕೊಂಡು ಸಾಲ ನೀಡಲಾಗುತ್ತದೆ. ಅಲ್ಪಾವಧಿ ಸಾಲ 1 ವರ್ಷಕ್ಕೆ ಸೀಮಿತ. ಆದರೆ ಇದು ಶೂನ್ಯ ಬಡ್ಡಿ ಅಂದರೆ ಬಡ್ಡಿ ಇಲ್ಲದ ಸಾಲವಾಗಿದೆ. ಮಧ್ಯಮಾವಧಿ 5 ವರ್ಷ ಮತ್ತು ದೀರ್ಘಾವಧಿ ಸಾಲವನ್ನು 10 ವರ್ಷ ಅವಧಿಗೆ ನೀಡಲಾಗುತ್ತದೆ.
ಯಾವೆಲ್ಲ ಬ್ಯಾಂಕುಗಳು ಸಾಲ ನೀಡುತ್ತವೆ?
ರೈತರ ಕೃಷಿ ಚಟುವಟಿಕೆಗೆ ನೆರವಾಗಲೆಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗಳು, ಪಿಕಾರ್ಡ್ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿ೦ದ (DCC Bank) ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ. ಕೃಷಿ ಚಚುವಟಿಕೆಗಷ್ಟೇ ಅಲ್ಲದೇ, ಕೃಷಿ ಉಪಕಸುಬುಗಳಾದ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ನಿರ್ಮಾಣಕ್ಕೂ 5 ಲಕ್ಷ ರೂಪಾಯಿವರೆಗೆ ಸಾಲ ಸಿಗಲಿದೆ.
ಸಾಲ ಪಡೆಯಲು ಯಾರೆಲ್ಲ ಅರ್ಹರು?
ಗಮನಾರ್ಹವೆಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿ೦ದ ಎಲ್ಲಾ ರೈತರಿಗೆ ಈ ಸಾಲ ಸಿಗುವುದಿಲ್ಲ. ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಅವರಿಗೆ ಬ್ಯಾಂಕುಗಳಿಂದ ಸಾಲ ಸೌಲಭ್ಯ ಸಿಗಲಿದೆ.
- ರೈತರು ವಾಸವಿರುವ ಸ್ಥಳದ ಸಂಘ ಅಥವಾ ಜಮೀನು ಹೊಂದಿರುವ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ. ರೈತರು ಬೇರೆ ಕಡೆ ಸಾಲ ಪಡೆದಿರಬಾರದು.
- ಎರಡು ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸಸ್ಥಳ ವಿವಿಧ ಸಂಘದ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತದೆ.
- ಒಂದು ವೇಳೆ ರೈತನು ವಾಸಿಸುತ್ತಿರುವ ಪ್ರದೇಶದಲ್ಲಿ ಸಂಘವು ಇಲ್ಲದಿದ್ದರೆ ಅಥವಾ ಸಾಲ ನೀಡಲು ಸಂಘವು ಸಶಕ್ತರಾಗಿಲ್ಲದಿದ್ದರೆ ಅಂತಹ ಸಂಘದಿ೦ದ ನಿರಪೇಕ್ಷಣಾ ಪತ್ರ ಪಡೆದು ಸಂಬ೦ಧಿಸಿದ ಡಿಸಿಸಿ ಬ್ಯಾಂಕುಗಳ ಶಾಖೆಗಳಲ್ಲಿ ಸಾಲ ಪಡೆಯಬಹುದು.
- ರೈತ ನೆರೆ ರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದಲ್ಲಿ ಭೂಮಿ ಇದ್ದರೆ ಅಂತಹ ರೈತರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಏನೆಲ್ಲ ದಾಖಲೆಗಳು ಬೇಕು?
ರೈತರು ಡಿಸಿಸಿ ಬ್ಯಾಂಕಿನಿ೦ದ ಸಾಲ ಪಡೆಯಬೇಕಾದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರುವುದು ಕಡ್ಡಾಯವಾಗಿದೆ.
ಪಹಣಿ, ಆಧಾರ್ ಕಾರ್ಡ್ ಇರಬೇಕು. ರೈತರು ಯಾವ ಬ್ಯಾಂಕಿನಿ೦ದ ಸಾಲ ಪಡೆಯಲಿಚ್ಚಿಸುತ್ತಾರೋ ಅಲ್ಲಿಂದ ಅರ್ಜಿ ಪಡೆದುಕೊಳ್ಳಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು. ಜಾತಿ ಮತ್ತು ಆದಾಯ ಪತ್ರ ಹೊಂದಿರಬೇಕು.
