ಭಾರತದಲ್ಲಿ ಸಾಕಷ್ಟು ಧಾರ್ಮಿಕ ಸ್ಥಳಗಳಿರಬಹುದು ಆದರೆ, ಇಲ್ಲಿ ಹೇಳಿರುವ ಈ 6 ಧಾರ್ಮಿಕ ಸ್ಥಳಗಳು ಭೂಮಿಯನ್ನು ಸ್ವರ್ಗದಂತೆ ಮಾಡಿದೆ. ಭೂಮಿಯ ಮೇಲೆ ಸ್ವರ್ಗದ ಅನುಭವವನ್ನು ನೀಡುವ ಆ 6 ಧಾರ್ಮಿಕ ಸ್ಥಳಗಳು ಯಾವುವು.? ಈ ಸುಂದರ ಧಾರ್ಮಿಕ ಸ್ಥಳಗಳು ನೋಡಲು ಹೇಗಿವೆ.?
ಈ ಸ್ಥಳಗಳ ಮಹತ್ವವೇನು ನೋಡಿ..
ನಾವು ದೇಶದ ಯಾವುದೇ ಮೂಲೆಗೆ ಹೋದರೂ ನಾವಲ್ಲಿ ದೇವಸ್ಥಾನಗಳನ್ನು, ಮಠಗಳನ್ನು ನೋಡಬಹುದಾಗಿದೆ. ಅದೇ ರೀತಿ ಸಾಕಷ್ಟು ಧಾರ್ಮಿಕ ಸ್ಥಳಗಳನ್ನು ಕೂಡ ನಾವಿಲ್ಲಿ ನೋಡಬಹುದು. ಭೂಮಿಯ ಮೇಲಿನ ಧಾರ್ಮಿಕ ಸ್ಥಳಗಳಿಂದಾಗಿ ಭೂಮಿಯೂ ಸ್ವರ್ಗದಂತೆ ಕಾಣುವುದು. ಇಂತಹ ಧಾರ್ಮಿಕ ಸ್ಥಳಗಳಿಗೆ ನೀವು ಭೇಟಿ ನೀಡುವುದರಿಂದ ದೈವಿಕ ಶಕ್ತಿಯ ಅನುಭವವನ್ನು ಪಡೆದುಕೊಳ್ಳುತ್ತೀರಿ. ದೇವರು ಮತ್ತು ದೇವತೆಗಳ ಅನುಗ್ರಹವೂ ನಿಮ್ಮ ಮೇಲಿರುವುದು. ಈ ಲೇಖನದಲ್ಲಿ ನಾವು ಭೂಮಿಯ ಮೇಲೆ ಭೇಟಿ ನೀಡಬಹುದಾದ 6 ಧಾರ್ಮಿಕ ಸ್ಥಳಗಳ ಕುರಿತು ಉಲ್ಲೇಖಿಸಲಾಗಿದೆ. ಇವುಗಳಿಗೆ ಭೇಟಿ ನೀಡುವ ಮೂಲಕ ವ್ಯಕ್ತಿಯು ದೇವರುಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ. ಭೂಮಿಯನ್ನೇ ಸ್ವರ್ಗವಾಗಿ ಮಾಡಿರುವ 6 ಧಾರ್ಮಿಕ ಸ್ಥಳಗಳು ಇಲ್ಲಿವೆ..

ಅಂಕೋರ್ ವಾಟ್ ದೇವಾಲಯ, ಕಾಂಬೋಡಿಯಾ
ಕಾಂಬೋಡಿಯಾದ ಅಂಕೋರ್ ವಾಟ್ ದೇವಸ್ಥಾನವು ವಿಷ್ಣು ದೇವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇದು ವಿಶ್ವದ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ನಿರ್ಮಿಸುವ ಸಮಯದಲ್ಲಿ ಖಮೇರ್ ಸಾಮ್ರಾಜ್ಯವು ಅಸ್ಥಿತ್ವದಲ್ಲಿತ್ತು. 12 ಶತಮಾನದ ಅವಧಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಮೂಲತಃ ವಿಷ್ಣು ದೇವನಿಗೆ ಸಮರ್ಪಿತವಾಗಿದ್ದು, ಕ್ರಮೇಣ ದಿನಗಳು ಕಳೆದಂತೆ ಇದು ಬೌದ್ಧ ಧರ್ಮದ ದೇವಾಲಯವಾಯಿತು. ಕಾಂಬೋಡಿಯಾದ ರಾಷ್ಟ್ರೀಯ ಸಂಕೇತವಾದ ಈ ದೇವಾಲಯವು ತನ್ನ ಗೋಡೆಯ ಮೇಲೆ ಕಂಭದ ಮೇಲೆ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಕಥೆಗಳನ್ನು ಹೊಂದಿದೆ.
ಕೈಲಾಸ ದೇವಸ್ಥಾನ, ಎಲ್ಲೋರಾ
ಎಲ್ಲೋರಾದಲ್ಲಿರುವ ಕೈಲಾಸ ದೇವಸ್ಥಾನವು ಅತ್ಯಂತ ಪ್ರಾಚೀನ ದೇವಸ್ಥಾನವಾಗಿದ್ದು, ಇದು 1200 ವರ್ಷಕ್ಕೂ ಹಿಂದಿನ ಐತೀಹ್ಯವನ್ನು ಒಳಗೊಂಡಿದೆ. ಪರಶಿವನಿಗೆ ಸಮರ್ಪಿತವಾದ ಈ ದೇವಸ್ಥಾನವು ಕೈಲಾಸ ಪರ್ವತವನ್ನು ಪ್ರತಿನಿಧಿಸುತ್ತದೆ. ಈ ದೇವಾಲಯವನ್ನು ನೋಡುವಾಗ ಅದು ಕೈಲಾಸ ಪರ್ವತದ ಆಕಾರದಲ್ಲಿ ಕಾಣಿಸುತ್ತದೆ. ಈ ಅದ್ಭುತವಾದ ವಾಸ್ತುಕಲೆಯನ್ನು ಹೊಂದಿರುವ ದೇವಾಲಯವನ್ನು ಯಾರು ನಿರ್ಮಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ, ಇಲ್ಲಿ ದೊರೆತಿರುವ ಕೆಲವೊಂದು ಶಿಲಾಶಾಸನದ ಪ್ರಕಾರ, ರಾಷ್ಟ್ರಕೂಟ ರಾಜನಾದ ಒಂದನೇ ಕೃಷ್ಣರಾಜನು ನಿರ್ಮಿಸಿದನೆಂದು ತಿಳಿದುಕೊಳ್ಳಬಹುದು. ಈ ಸುದಂರವಾದ ಕೆತ್ತನೆಯನ್ನು ಒಳಗೊಂಡಿರುವ ದೇವಾಲಯವನ್ನು ಯಾರೇ ನೋಡಿದರೂ ಒಮ್ಮೆ ದಿಭ್ರಾಂತರಾಗಿ ಅಲ್ಲೇ ನಿಂತು ಬಿಡುತ್ತಾರೆ. ಈ ದೇವಾಲಯವನ್ನು ನಾಶಮಾಡಲು ಅನೇಕರು ಪ್ರಯತ್ನಿಸಿದರೂ ಅದು ಅವರ ಬಳಿ ಸಾಧ್ಯವಾಗಲಿಲ್ಲ.
ಪ್ರಂಬನನ್ ಹಿಂದೂ ದೇವಾಲಯ, ಇಂಡೋನೇಷ್ಯಾ
ಇದು ಇಂಡೋನೇಷ್ಯಾದಲ್ಲಿನ ಹಿಂದೂ ದೇವಾಲಯವಾಗಿದ್ದು, ಅತ್ಯಂತ ಎತ್ತರವಾದ ಹಾಗೂ ಮನಮೋಹಕ ಕೆತ್ತನೆಯನ್ನು ಒಳಗೊಂಡಿರುವ ದೇವಾಲಯವಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಈ ಹಿಂದೂ ದೇವಾಲಯವನ್ನು ಕ್ಯಾಂಡಿ ಪ್ರಂಬನನ್ ದೇವಾಲಯವೆಂದೂ ಕರೆಯಲಾಗುತ್ತದೆ. ಇಂಡೋನೇಷ್ಯಾದಲ್ಲಿ ಭಾರತೀಯರು ಅತಿ ಹೆಚ್ಚಾಗಿ ಭೇಟಿ ನೀಡುವ ಸ್ಥಳವೆಂದರೆ ಅದುವೇ ಈ ಪ್ರಂಬನನ್ ಹಿಂದೂ ದೇವಾಲಯವಾಗಿದೆ. ಪ್ರಂಬನನ್ ದೇವಾಲಯದ ಒಂದೇ ಆವರಣದಲ್ಲಿ ನಾವು 240 ದೇವಾಲಯಗಳನ್ನು ನೋಡಬಹುದಾಗಿತ್ತು. ಅವುಗಳಲ್ಲಿ ಕೆಲವೊಂದು ದೇವಾಲಯಗಳು ಭೂಕಂಪ ಹಾಗೂ ಇನ್ನಿತರ ನೈಸರ್ಗಿಕ ವಿಕೋಪಗಳಿಗೆ ಗುರಿಯಾಗಿದೆ. ಇಲ್ಲಿ ಹಿಂದೂ ಧರ್ಮದ ತ್ರಿಮೂರ್ತಿ ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪೂಜಿಸುವ ಸಂಪ್ರದಾಯವಿದೆ. ಈ ತ್ರಿಮೂರ್ತಿ ದೇವರುಗಳ ದೇವಾಲಯಕ್ಕೆ ವಿರುದ್ಧವಾಗಿ ಅವರ ವಾಹನವಾದ ಅಂಗಸ, ಗರುಡ ಮತ್ತು ನಂದಿಯ ದೇವಾಲಯಗಳಿವೆ.
ಬೃಹದೀಶ್ವರ ದೇವಸ್ಥಾನ, ತಮಿಳುನಾಡು
ತಮಿಳುನಾಡಿನಲ್ಲಿನ ಬೃಹದೀಶ್ವರ ದೇವಾಲಯವು 11ನೇ ಶತಮಾನಕ್ಕೆ ಸೇರಿದ ದೇವಾಲಯವಾಗಿದೆ. ತಮಿಳುನಾಡಿನಲ್ಲಿ ಚೋಳರ ಆಳ್ವಿಕೆಯಿದ್ದಂತ ಸಮಯದಲ್ಲಿ ಈ ಸುಂದರವಾದ ದೇವಾಲಯವನ್ನು 1ನೇ ರಾಜ ರಾಜ ಚೋಳನು ನಿರ್ಮಿಸಿದನು ಎನ್ನುವ ಪುರಾವೆಗಳಿವೆ. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಈ ದೇವಾಲಯದಲ್ಲಿನ ಶಿವಲಿಂಗದ ಮುಂದೆ ಒಂದೇ ಕಲ್ಲಿನಿಂದ ಕೆತ್ತಲಾದ ನಂದಿಯ ಅತಿ ದೊಡ್ಡ ವಿಗ್ರಹವಿದೆ. ಈ ವಿಗ್ರಹವು 13 ಅಡಿ ಎತ್ತರ ಮತ್ತು 16 ಅಡಿ ಅಗಲವನ್ನು ಹೊಂದಿದೆ.
ಗೋಲ್ಡನ್ ಟೆಂಪಲ್, ಅಮೃತ್ಸರ್
ಹೊರಗಿನಿಂದ ಯಾರೇ ಈ ದೇವಾಲಯವನ್ನು ನೋಡಿದರೂ ತಮ್ಮ ಬಾಯಿ ಮೇಲೆ ಬರೆಳಿಟ್ಟು ನಿಲ್ಲುತ್ತಾರೆ. ಯಾಕೆಂದರೆ ಈ ದೇವಾಲಯವನ್ನು ಚಿನ್ನದಿಂದ ನಿರ್ಮಿಸಲಾಗಿದೆ. ಈ ದೇವಾಲಯಕ್ಕೆ ಯಾವುದೇ ಜಾತಿ, ಧರ್ಮದ ಭೇದ ಭಾವವಿಲ್ಲದೆ ಎಲ್ಲರೂ ಭೇಟಿ ನೀಡಬಹುದಾಗಿದೆ. ಗೋಲ್ಡನ್ ಟೆಂಪಲ್ ಆರಂಭವಾಗಿದ್ದು ಒಂದು ಚಿಕ್ಕ ಇಟ್ಟಿಗೆಯ ದೇವಾಲಯದ ರೂಪದಲ್ಲಿ ನಂತರ 1800 ರ ದಶಕದಲ್ಲಿ ಮಹಾರಾಜ ರಂಜಿತ್ ಸಿಂಗ್ ಅವರು ಗೋಲ್ಡನ್ ಟೆಂಪಲ್ ಅನ್ನು ಅಮೃತಶಿಲೆ ಮತ್ತು ತಾಮ್ರದಿಂದ ಮರುನಿರ್ಮಿಸಿ, ಗರ್ಭಗುಡಿಗೆ ಚಿನ್ನದ ಲೇಪವನ್ನು ನೀಡಿದರು. ಭಾರತದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ದೇವಾಲಯಗಳಲ್ಲಿ ಈ ಗೋಲ್ಡನ್ ಟೆಂಪಲ್ ಕೂಡ ಒಂದಾಗಿದ್ದು, ಇದು ಪ್ರತಿನಿತ್ಯವೂ 60,000ಕ್ಕೂ ಹೆಚ್ಚಿನ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ರಾತ್ರಿ ಸಮಯದಲ್ಲಿ ದೇವಸ್ಥಾನಕ್ಕೆ ನೀಡಿದ ಚಿನ್ನದ ಹೊದಿಕೆ ಸ್ವರ್ಗದ ಅನುಭವವನ್ನು ನೀಡುತ್ತದೆ.
