ಹಿರಿಯ ಪತ್ರಕರ್ತೆ, ಸ್ತ್ರೀ ಚಿಂತಕಿ, ಬರಹಗಾರ್ತಿ ಕುಸುಮಾ ಶಾನಭಾಗ ಅವರು ಇಂದು(ಜೂನ್ 22) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೂಲತಃ ಕೊಡಗಿನವರಾದ ಕುಸುಮಾ ಅವರು ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿದ್ದರು. ಲೈಂಗಿಕ ಕಾರ್ಯಕರ್ತೆಯರ ಕುರಿತು ಸುಮಾರು ಹತ್ತು ವರ್ಷಗಳಿಗೂ ಅಧಿಕ ಕಾಲ ಅಧ್ಯಯನ ನಡೆಸಿದ್ದರು.
ನೆನಪುಗಳ ಬೆನ್ನೇರಿ ಎಂಬ ಕಥಾಸಂಕಲನ, ಮಣ್ಣಿಂದ ಎದ್ದವರು ಎಂಬ ಕಾದಂಬರಿ ಬರೆದಿದ್ದಾರೆ. ‘ಕಾಯದ ಕಾರ್ಪಣ್ಯ’ ಎಂಬುದು ಲೈಂಗಿಕ ಕಾರ್ಯಕರ್ತೆಯರ ಕುರಿತು ಕುಸುಮಾ ಅವರು ಬರೆದ ಕಥನವಾಗಿದೆ. ಇವರ ಹಲವು ಬರಹಗಳು ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.
ಕುಸುಮಾ ಅವರು ಕಾದಂಬರಿಕಾರ ಭಾರತೀಸುತ ಅವರ ಪುತ್ರಿ. ಎಡಕಲ್ಲು ಗುಡ್ಡದ ಮೇಲೆ, ಹುಲಿಯ ಹಾಲಿನ ಮೇವು, ಗಿರಿಕನ್ಯೆ, ಬಯಲುದಾರಿ ಭಾರತೀಸುತ ಅವರ ಖ್ಯಾತ ಕಾದಂಬರಿಗಳು. ಇವು ಸಿನಿಮಾಗಳಾಗಿಯೂ ಪ್ರಸಿದ್ಧಿ ಪಡೆದಿವೆ.
ಕುಸುಮಾ ಅವರು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದೇಹ ದಾನ ಮಾಡಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣ ಆಸ್ಪತ್ರೆ ದೇಹ ಪಡೆಯಲು ನಿರಾಕರಿಸಿದೆ.
