ಶ್ಲೋಕ – 30
ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ ।
ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ॥೩೦॥
ಯಃ ಮಾಮ್ ಪಶ್ಯತಿ ಸರ್ವತ್ರ ಸರ್ವಮ್ ಚ ಮಯಿ ಪಶ್ಯತಿ ।
ತಸ್ಯ ಅಹಮ್ ನ ಪ್ರಣಶ್ಯಾಮಿ ಸಃ ಚ ಮೇ ನ ಪ್ರಣಶ್ಯತಿ –ಯಾರು ನನ್ನನ್ನು ಎಲ್ಲೆಡೆ ಕಾಣುತ್ತಾನೆ ಮತ್ತು ಎಲ್ಲವನ್ನು ನನ್ನಲ್ಲಿ ಕಾಣುತ್ತಾನೆ ಅವನಿಗೆ ನಾನು ಎರವಾಗಲಾರೆ; ಅವನೂ ನನಗೆ ಎರವಾಗಲಾರ.
ಮುಂದುವರಿದು ಕೃಷ್ಣ ಹೇಳುತ್ತಾನೆ: “ಯಾರು ಹೀಗೆ ನನ್ನನ್ನು ಎಲ್ಲರಲ್ಲಿಯೂ ಮತ್ತು ಎಲ್ಲರನ್ನು ನನ್ನಲ್ಲಿ ಕಾಣುತ್ತಾನೋ ಅವನಿಗೆ ನಾನೆಂದೂ ಇಲ್ಲವಾಗುವುದಿಲ್ಲ. ಸದಾ ಆತನ ಯೋಗ ಕ್ಷೇಮದ ಹೊಣೆ ನನ್ನದು. ಅದೇ ರೀತಿ ನಾನು ಆತನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ ಎನ್ನುವ ಎಚ್ಚರ ಸದಾ ಆತನಲ್ಲಿರುತ್ತದೆ” ಎಂದು. ಹೀಗೆ ಭಗವಂತನ ಅನ್ಯೋನ್ಯ ಸಂಬಂಧ, ದೇವರು ಎಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಸದಾ ಜಾಗೃತವಾಗಿರುತ್ತದೆ. ಹಿಂದೆ ಹೇಳಿದಂತೆ ಭಗವಂತ ನಾವು ಆತನನ್ನು ಹೇಗೆ ನೋಡುತ್ತೆವೋ ಹಾಗೆ. ಈ ಕಾರಣದಿಂದ ನಮ್ಮಲ್ಲಿನ ಈ ಎಚ್ಚರದಿಂದ ಯಾವತ್ತೂ ಜೀವನದಲ್ಲಿ ಬಗೆಹರಿಯದಂತಹ ಸಮಸ್ಯೆ ನಮಗೆ ಬರುವುದಿಲ್ಲ. ಪ್ರರಾಬ್ಧಕರ್ಮದಿಂದ ಬಂದರೂ ಕೂಡಾ ಕಾಣದ ಕೈ ನಮ್ಮನ್ನು ಕೈ ಹಿಡಿದು ನಡೆಸುತ್ತಿರುವ ಅನುಭವವಾಗುತ್ತದೆ. ‘ನನ್ನನ್ನು ಕಾಪಾಡುವವನಿದ್ದಾನೆ ಅವನು ನನ್ನ ಯೋಗ-ಕ್ಷೇಮವನ್ನು ನೋಡಿಕೊಳ್ಳುತ್ತಾನೆ, ನಾನೇಕೆ ಹೆದರಬೇಕು’ ಎನ್ನುವ ದೈರ್ಯ ಬರುತ್ತದೆ. ಕೆಟ್ಟ ಯೋಚನೆ ದೂರವಾಗುತ್ತದೆ. ಸಾಮಾಜಿಕ ಪ್ರತಿಕ್ರೀಯೆಗಳಿಗೆ, ಟೀಕೆ-ಟಿಪ್ಪಣಿಗಳಿಗೆ, ಅಪವಾದಗಳಿಗೆ, ನಿಂದನೆಗಳಿಗೆ, ಯಾವುದಕ್ಕೂ ವಿಚಲಿತನಾಗುವುದಿಲ್ಲ. ಭಗವಂತ ಕೈಬಿಟ್ಟ ಎನ್ನುವ ಸ್ಥಿತಿ ಭಕ್ತನಿಗೆ ಎಂದೂ ಬರುವುದಿಲ್ಲ. ಭಗವಂತ ಎಂದೂ ತನ್ನ ಆತ್ಮೀಯ ಭಕ್ತನಿಂದ ದೂರವಾಗುವುದಿಲ್ಲ. ಇದಕ್ಕಾಗಿ ಭಗವಂತನನ್ನು ‘ಭಕ್ತಪರಾಧೀನ’ ಎನ್ನುವುದು.
