ತುಮಕೂರು: “ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಡಿಜಿಟಲ್ ಕರೆನ್ಸಿಗಳು ಮತ್ತು ಉದಯೋನ್ಮುಖ ಹಣಕಾಸು ತಂತ್ರಜ್ಞಾನಗಳ ಪಾತ್ರ ದಿನೇ ದಿನೇ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ವಾಣಿಜ್ಯ ಜಗತ್ತಿನಲ್ಲಿ ವಿದ್ಯಾರ್ಥಿಗಳು ಇಂತಹ ನವೀನ ಹಣಕಾಸು ವ್ಯವಸ್ಥೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯ,” ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಎನ್.ಬಿ.ಪ್ರದೀಪ್ ಕುಮಾರ್ ಅವರು ಹೇಳಿದರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಟೆಕ್ನಾಲಜಿಯಲ್ಲಿ ಎಂಬಿಎ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ವೈಸಿರಿ ಕ್ಯಾಂಪಸ್ನಲ್ಲಿ ಸೋಮವಾರ ಆಯೋಜಿಸಿದ್ದ “ಬಿಟ್ಕಾಯಿನ್ನ ಮೂಲಭೂತ ಅಂಶಗಳು” ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಇಂದು ನಾವು ಹಣವನ್ನು ಕೇವಲ ಕಾಗದದ ರೂಪದಲ್ಲಿ ನೋಡುತ್ತಿಲ್ಲ, ಅದು ಡಿಜಿಟಲ್ ಸಂಕೇತಗಳಾಗಿ ಬದಲಾಗುತ್ತಿದೆ. ಫಿನ್ಟೆಕ್ ವಲಯವು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ತೆರೆದಿಟ್ಟಿದೆ. ನವೀನ ಆರ್ಥಿಕ ನೀತಿಗಳನ್ನು ಅರ್ಥಮಾಡಿಕೊಳ್ಳದಿದ್ದರೆ ನಾವು ಜಾಗತಿಕ ಮಾರುಕಟ್ಟೆಯಲ್ಲಿ ಹಿಂದುಳಿಯುತ್ತೇವೆ. ನಮ್ಮ ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ತಾಂತ್ರಿಕವಾಗಿ ಸಬಲರಾದ ಆರ್ಥಿಕ ತಜ್ಞರಾಗಬೇಕು,” ಎಂದು ಪ್ರತಿಪಾದಿಸಿದರು.
ಯುನಿಕಾರ್ನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷರಾದ ಹೇಮಾ ರಾಣಿ ಬಿ.ವಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಬಿಟ್ಕಾಯಿನ್ ಕುರಿತು ಸಮಗ್ರ ಮಾಹಿತಿ ನೀಡಿದ ಅವರು, ಭವಿಷ್ಯದ ಹಣಕಾಸು ನಿರ್ವಹಣೆಯಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ಬ್ಲಾಕ್ಚೈನ್ ತಂತ್ರಜ್ಞಾನಗಳು ಕ್ರಾಂತಿಕಾರಿ ಬದಲಾವಣೆ ತರಲಿವೆ. ಬಿಟ್ಕಾಯಿನ್ ಯಾವುದೇ ಬ್ಯಾಂಕ್ ಅಥವಾ ಸರ್ಕಾರದ ಅಧೀನದಲ್ಲಿಲ್ಲ. ಇದು ಜನರಿಂದ ಜನರಿಗಾಗಿ ನಡೆಯುವ ಪಾರದರ್ಶಕ ವ್ಯವಸ್ಥೆ ಎಂದು ತಿಳಿಸಿದರು.
ಬಿಟ್ ಕಾಯಿನ್ ಬೆನ್ನೆಲುಬಾಗಿರುವ ಬ್ಲಾಕ್ಚೈನ್ ತಂತ್ರಜ್ಞಾನವು ದತ್ತಾಂಶಗಳ ಸುರಕ್ಷತೆಯನ್ನು ಹೇಗೆ ಖಾತ್ರಿಪಡಿಸುತ್ತದೆ ಎಂಬುದನ್ನು ವಿವರಿಸಿದ ಅವರು, “ಒಮ್ಮೆ ದಾಖಲಾದ ವ್ಯವಹಾರವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ, ಇದು ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ದಾರಿಯಾಗುತ್ತದೆ” ಎಂದರು.
ಭವಿಷ್ಯದಲ್ಲಿ ಲಾಜಿಸ್ಟಿಕ್ಸ್, ಸಪ್ಲೈ ಚೈನ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಎಂಬಿಎ ಪದವೀಧರರು ಈ ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಆದ್ದರಿಂದ ಈಗಿನಿಂದಲೇ ಇದರ ಮೂಲಭೂತ ಅಂಶಗಳನ್ನು ಕಲಿಯುವುದು ಅನಿವಾರ್ಯ ಎಂದು ಹೇಳಿದರು.
ಡಾ. ಪ್ರಸನ್ನ ಕುಮಾರ್.ಟಿ.ಎಂ,ಎಂಬಿಎ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ
