13 ವರ್ಷಗಳ ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಮಿದುಳಿನ ಗಾಯಕ್ಕೆ ಒಳಗಾಗಿ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ನ್ಯಾಯಾಲಯದ ಆದೇಶದ ಮೇರೆಗೆ ನೀಡಲಾದ ಮೊದಲ ‘ಪರೋಕ್ಷ ದಯಾಮರಣ’ (Passive Euthanasia) ಪ್ರಕರಣವಾಗಿದೆ.
ಹೌದು. ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (ಕೋಮಾ) 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಐತಿಹಾಸಿಕ ಅನುಮತಿ ನೀಡಿದೆ. ತೀವ್ರ ಮಿದುಳಿನ ಗಾಯದಿಂದ ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ, ಅವರಿಗೆ ನೀಡಲಾಗುತ್ತಿರುವ ಕೃತಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯುವ ಮೂಲಕ ‘ಪರೋಕ್ಷ ದಯಾಮರಣ’ಕ್ಕೆ (Passive Euthanasia) ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಹಸಿರು ನಿಶಾನೆ ತೋರಿಸಿದೆ. ಇದು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಕೋರ್ಟ್ ಆದೇಶದ ಮೂಲಕ ನೀಡಲಾದ ಮೊದಲ ಪರೋಕ್ಷ ದಯಾಮರಣ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾವನಾತ್ಮಕ ತೀರ್ಪು : ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪು 2018ರ ಸುಪ್ರೀಂ ಕೋರ್ಟ್ ದಯಾಮರಣದ ಮಾರ್ಗಸೂಚಿಗಳನ್ನು ಇನ್ನಷ್ಟು ಸ್ಪಷ್ಟಪಡಿಸಿದೆ. ಈ ಹಿಂದೆ ಕೇವಲ ವೆಂಟಿಲೇಟರ್ನಂತಹ ಜೀವ ರಕ್ಷಕ ವ್ಯವಸ್ಥೆಗಳನ್ನು ತೆಗೆದುಹಾಕಲು ಮಾತ್ರ ಅವಕಾಶವಿತ್ತು. ಆದರೆ, ಈ ತೀರ್ಪಿನಲ್ಲಿ ‘ಫೀಡಿಂಗ್ ಟ್ಯೂಬ್’ (ಆಹಾರ ನೀಡುವ ನಳಿಕೆ) ಮೂಲಕ ಜೀವ ಬೆಂಬಲ ಪಡೆಯುತ್ತಿರುವ ರೋಗಿಗಳಿಗೂ ದಯಾಮರಣ ಅನ್ವಯಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ವಿಶಿಷ್ಟ ಪ್ರಕರಣ: ವೈದ್ಯಕೀಯ ವರದಿಗಳ ಪ್ರಕಾರ ಹರೀಶ್ ರಾಣಾ ಅವರ ಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ, ಅವರಿಗೆ ಕೇವಲ ಪೈಪ್ ಮೂಲಕ ಆಹಾರ ನೀಡಲಾಗುತ್ತಿತ್ತು ಎಂಬ ಕಾರಣಕ್ಕೆ ಆಸ್ಪತ್ರೆ ಮಟ್ಟದಲ್ಲಿ ದಯಾಮರಣ ಪ್ರಕ್ರಿಯೆಗೆ ಅಡೆತಡೆ ಉಂಟಾಗಿತ್ತು.
ಪೋಷಕರ ಹೋರಾಟ: ತಮ್ಮ ಮಗನ ನರಕಯಾತನೆಯನ್ನು ನೋಡಲಾರದೆ ಹರೀಶ್ ರಾಣಾ ಅವರ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ಅನುಮತಿ ನೀಡುವ ಮೂಲಕ ಹರೀಶ್ ರಾಣಾ ಅವರಿಗೆ ‘ಗೌರವಯುತ ಸಾವು’ ಕಾಣಲು ಹಾದಿ ಮಾಡಿಕೊಟ್ಟಿದೆ.
ಇದು ಏಕೆ ಐತಿಹಾಸಿಕ ?
ಈ ತೀರ್ಪು ಭವಿಷ್ಯದಲ್ಲಿ ಚೇತರಿಕೆಯ ಸಾಧ್ಯತೆಯೇ ಇಲ್ಲದ ಮತ್ತು ಕೃತಕವಾಗಿ ಆಹಾರ ನೀಡುವ ಮೂಲಕ ಜೀವಂತವಾಗಿರಿಸಲಾದ ಸಾವಿರಾರು ರೋಗಿಗಳ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಬದುಕುವ ಹಕ್ಕಿನಂತೆಯೇ ಪ್ರತಿಯೊಬ್ಬರಿಗೂ ಘನತೆಯಿಂದ ಸಾಯುವ ಹಕ್ಕಿದೆ ಎಂಬುದನ್ನು ಈ ತೀರ್ಪು ಎತ್ತಿ ಹಿಡಿದಿದೆ.
