
ಮೈಸೂರು: ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಅವರಿಂದ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ನಟ ದರ್ಶನ್ ಇದೇ ಮಾ.12ರಿಂದ ಮಾ.15ರವರೆಗೆ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ವೇಳೆ 32 ಜನ ಪೊಲೀಸ್ ಸಿಬ್ಬಂದಿ ಕಣ್ಗಾವಲಿಗೆ ನಿಯೋಜನೆ ಮಾಡಲಾಗಿದೆ.
ಮೈಸೂರಿನಲ್ಲಿ ಡೆವಿಲ್ ಚಿತ್ರೀಕರಣ ನಡೆಯುತ್ತಿದ್ದ ವೇಳೆ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ತಂಗಿದ್ದ ನಟ ದರ್ಶನ್ ತೂಗುದೀಪ ಅವರನ್ನು ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸರು ಹೋಟೆಲ್ನಿಂದಲೇ ಬಂಧಿಸಿ ಕರೆದೊಯ್ದಿದ್ದರು. ಈವರೆಗೆ ಸುಮಾರು ಒಂದೂವರೆ ವರ್ಷಗಳ ಕಾಲ ನಟ ದರ್ಶನ್ ಕೊಲೆ ಕೇಸಿನ ವಿಚಾರಣೆ, ನ್ಯಾಯಾಂಗ ಬಂಧನ, ಜೈಲು ಶಿಕ್ಷೆ, ಕೋರ್ಟ್ಗೆ ಅಲೆದಾಡುವುದು ಸೇರಿದಂತೆ ಸಮಯ ಕಳೆದಿದ್ದಾರೆ. ಆದರೆ, ನಟ ದರ್ಶನ್ ಜೈಲು ಸೇರಿದ್ದರಿಂದ ಅವರೊಂದಿಗೆ ಸಿನಿಮಾ ಮಾಡುವುದಕ್ಕೆ ಹಣ ಹೂಡಿಕೆ ಮಾಡಿದ್ದ ಡೆವಿಲ್ ಸಿನಿಮಾ ನಿರ್ಮಾಪಕರು ಕಂಗಾಲಾಗಿದ್ದರು. ಇನ್ನು ಅಭಿಮಾನಿಗಳು ಕೂಡ ತೀವ್ರ ನಿರಾಸೆ ಅನುಭವಿಸಿದ್ದರು. ಇದೀಗ ನಟ ದರ್ಶನ್ಗೆ ನಾಲ್ಕು ದಿನಗಳ ಕಾಲ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಮೈಸೂರಿನಲ್ಲಿ ಭಾಗವಹಿಸಲು ಅನುಮತಿ ಸಿಕ್ಕಿದೆ.
ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ಪ್ಯಾಕಪ್ ಆಗಿದ್ದು, ಇದೀಗ ಪುನಃ ಮೈಸೂರಿನಲ್ಲೇ ಶೂಟಿಂಗ್ ಪುನಾರಂಭ ಆಗಲಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಮತ್ತೆ ಶೂಟಿಂಗ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈಗ ಜೈಲಿಂದ ಜಾಮೀನಿನ ಮೇಲೆ ಹೊರಬಂದ ಬಳಿಕ ಮತ್ತೆ ಮೈಸೂರಿನಲ್ಲಿ ಮಾ.12 ರಿಂದ ಮಾ.15 ರವರೆಗೆ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಕೆಲಸ ಮಾಡಲಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣ ಮಾಡುವುದಕ್ಕೆ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಅವರಿಂದ ಅನುಮತಿ ಸಿಕ್ಕಿದೆ.
ಮಾ.12 ರಿಂದ ಮಾ.14 ರ ವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲು ಅನುಮತಿ ಕೊಡಲಾಗಿದೆ. ಇನ್ನು ರಾತ್ರಿ, ತಡರಾತ್ರಿಯಲ್ಲಿ ಶೂಟಿಂಗ್ ಮಾಡುವಂತಿಲ್ಲ. ಜೊತೆಗೆ, ಮಾ.15ರಂದು ಮಾತ್ರ ಲಲಿತಮಹಲ್ ಪ್ಯಾಲೇಸ್ನಲ್ಲಿ ಬೆಳಿಗ್ಗೆ 7ಗಂಟೆಯಿಂದ ರಾತ್ರಿ9 ಗಂಟೆವರೆಗೂ ಶೂಟಿಂಗ್ ಮಾಡುವುದಕ್ಕೆ ಪರ್ಮಿಷನ್ ನೀಡಲಾಗಿದೆ. ಇನ್ನು ಡೆವಿಲ್ ಸಿನಿಮಾ ಚಿತ್ರೀಕರಣದ ವೇಳೆ ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯಂತೆ ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಈ ಪೊಲೀಸರು ಚಿತ್ರೀಕರಣದ ವೇಳೆ ದರ್ಶನ್ ಹಾಗೂ ಚಿತ್ರತಂಡಕ್ಕೆ ಭದ್ರತೆ ಒದಗಿಸಲಿದೆ. ಇನ್ನು ಡೆವಿಲ್ ಚಿತ್ರತಂಡವು ಪೊಲೀಸರ ಭದ್ರತೆ ಪಡೆಯಲು 1.64 ಲಕ್ಷ ಹಣ ಪಾವತಿ ಮಾಡಲಾಗಿದೆ.