ಬೆಂಗಳೂರು: ಇಂದಿನ ದಿನಗಳಲ್ಲಿ ಪ್ರಶಸ್ತಿಗಳ ಮೌಲ್ಯ ಕುಸಿದಿದ್ದು, ಅವು “ಮಾರಾಟದ ಸರಕು”ಗಳಾಗಿ ಮಾರ್ಪಟ್ಟಿವೆ ಎಂದು ಹಿರಿಯ ಸಾಹಿತಿ ಎಂ.ವಿ. ಶಿವಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಹಾಗೂ ಅನಿಕೇತನ ಕನ್ನಡ ಬಳಗ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕನ್ನಡ ಸಾಹಿತ್ಯ–ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ 80ನೇ ಜನ್ಮದಿನದ ಅಂಗವಾಗಿ ಪ್ರದಾನವಾದ “ಕಾಯಕ ಜೀವಿ ಪ್ರಶಸ್ತಿ” ಸ್ವೀಕರಿಸಿ ಪ್ರತಿಕ್ರಿಯಿಸಿದರು.

“ಇಂದಿನ ಕಾಲದಲ್ಲಿ ಪ್ರಶಸ್ತಿ ಪಡೆಯುವವರು, ಹೊಡೆದುಕೊಳ್ಳುವವರು ಹೆಚ್ಚಾಗಿದ್ದಾರೆ. ಸರ್ಕಾರ ಅಥವಾ ಪ್ರತಿಷ್ಠಿತ ಸಂಸ್ಥೆಗಳು ನೀಡುವ ಪ್ರಶಸ್ತಿಗಳು ಜಾತಿ, ಹಣ, ಶಿಫಾರಸು, ರಾಜಕೀಯ ಪ್ರಭಾವವಿಲ್ಲದೆ ಸತ್ಯಸಂಧ ಸೇವೆ ಸಲ್ಲಿಸುವವರಿಗೆ ಸಿಗುವುದು ಅಪರೂಪವಾಗಿದೆ,” ಎಂದು ಅವರು ಹೇಳಿದರು.
ಅವರು ಮುಂದುವರೆದು, “ಹಲವು ಪ್ರಶಸ್ತಿಗಳು ಮುಂಗಡ ಹಣ ಪಡೆದು ಅನಧಿಕೃತವಾಗಿ ಮಾರಾಟವಾಗುತ್ತಿರುವುದು ನೋವಿನ ಸಂಗತಿ. ಕೆಲವರನ್ನು ಮಾತ್ರ ಗುರುತಿಸಿ ಗೌರವಿಸಲಾಗುತ್ತಿದ್ದು, ಉಳಿದ ಬಹುಪಾಲು ಪ್ರಶಸ್ತಿಗಳು ರಾಜಕೀಯ ಅಥವಾ ಜಾತಿ ಆಧಾರಿತವಾಗಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದ್ರಲ್ಲೂ, ಸಾಂಸ್ಕೃತಿಕ ಟ್ರಸ್ಟ್ಗಳು ದತ್ತಿ ಸ್ಥಾಪಿಸಿ ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ. ವೇಮಗಲ್ ನಾರಾಯಣಸ್ವಾಮಿ ಸಮಾರೋಪ ನುಡಿಗಳಾಡಿದರು. ಇಂದಿರಾ ಕೃಷ್ಣಪ್ಪ ಅವರ ನೇತೃತ್ವದಲ್ಲಿ 10 ಮಂದಿ ಸಾಧಕರಿಗೆ “ಸ್ವಾಮಿ ವಿವೇಕಾನಂದ ಸದ್ಭಾವನಾ ದತ್ತಿ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಗಾಯನ ಹಾಗೂ ಕಾವ್ಯ ಕ್ಷೇತ್ರದಲ್ಲಿ ಎಂಪಿಎಂ ವೀರೇಶ್ ಯರಬಾಳು, ಮಾಧ್ಯಮ ಕ್ಷೇತ್ರದಲ್ಲಿ ಗೋವಿಂದರಾಜು ಪಟೇಲ್, ತತ್ವಪದ ಗಾಯನದಲ್ಲಿ ದೇವಮ್ಮ, ಶಿಕ್ಷಣದಲ್ಲಿ ಜಿ.ಎಸ್. ರಾಮದೇವ, ಕೃಷಿಯಲ್ಲಿ ದೊ.ಚಿ. ಗೌಡ, ಸಮಾಜ ಸೇವೆಯಲ್ಲಿ ಕೆ.ಆರ್. ಕವಿತಾ, ಕನ್ನಡಪರ ಹೋರಾಟದಲ್ಲಿ ಎಂ. ಗೌಡಯ್ಯ, ಸಾಹಿತ್ಯದಲ್ಲಿ ಹೆಚ್. ಸತೀಶ್ ಕುಮಾರ್, ಜಾನಪದ ಕ್ಷೇತ್ರದಲ್ಲಿ ಬಂಡ್ಳಳ್ಳಿ ವಿಜಯ್ ಕುಮಾರ್ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಡಾ. ಸಿಸಿರಾ ಸ್ನೇಹ ಬಳಗ ನೀಡುವ “ಸಾಹಿತ್ಯ ಶ್ರೀ” ಹಾಗೂ “ಸಂಘಟನಾಶ್ರೀ” ಪ್ರಶಸ್ತಿಗಳನ್ನು ಶಿಕ್ಷಣ ಕ್ಷೇತ್ರದ ಚಕ್ಕೆರೆ ಯೋಗೇಶ್ ಹಾಗೂ ಎಂ.ಕೆ. ಲತಾಮಣಿ ಅವರಿಗೆ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಡಾ. ಸಿಸಿರಾ, ಪತ್ರಕರ್ತ ಡಾ. ಉದಯರವಿ, ಕವಿ ಕೃಷ್ಣ ಹಾನ್ ಬಾಳ್ ಹಾಗೂ ಆಶು ಕವಿ ಎಲ್. ಬಸವಲಿಂಗು ಉಪಸ್ಥಿತರಿದ್ದರು. ಸಂಗೀತ ನಿರ್ದೇಶಕ ಚಿನ್ಮಯ್ ಮತ್ತು ತಂಡದ ಸಂಗೀತ ಕಾರ್ಯಕ್ರಮ ಹಾಗೂ ಮಂಡ್ಯದ ನಾಟಿ ಸಾಕಮ್ಮ ತಂಡದ ಸೋಬಾನೆ ಪದಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದವು.