ತುಮಕೂರು: ವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕ, ಸಮಾಜ ಸುಧಾರಕ ಜಗದ್ಗುರು ರಾಮಾನುಜಾಚಾರ್ಯರ 1009ನೇ ಜಯಂತೋತ್ಸವವನ್ನು ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ವೈಭವದಿಂದ ನೆರವೇರಿತು.
ಇದರ ಅಂಗವಾಗಿ ನಡೆದ ಉತ್ಸವದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರಾಮಾನುಚಾಚಾರ್ಯರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ಆನೆ ಮೇಲೆ ಅಲಂಕೃತ ಅಂಬಾರಿಯಲ್ಲಿ ಜಗದ್ಗುರು ರಾಮಾನುಜಾಚಾರ್ಯರ ಮೂರ್ತಿಯನ್ನು ಪೂಜಾ ಕೈಂಕರ್ಯಗಳೊಂದಿಗೆ ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಉತ್ಸವ ಮಾಡಲಾಯಿತು. ಇದಕ್ಕೂ ಮೊದಲು ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಜಯನಗರ ಪಶ್ಚಿಮ ಬಡಾವಣೆಯ ಪದ್ಮಾವತಿ ವೆಂಕಟೇಶ್ವರ ದೇವಸ್ಥಾನದಿಂದ ಆರಂಭವಾದ ಜಯಂತೋತ್ಸವದಲ್ಲಿ ವೇದಘೋಷಣೆ, ಪೂರ್ಣಕುಂಭ ಕಳಸ, ಮಂಗಳ ವಾದ್ಯ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನ ಗಮನ ಸೆಳೆಯಿತು.
ದೇವಸ್ಥಾನದಿಂದ ಹೊರಟು ಶೆಟ್ಟಿಹಳ್ಳಿ ಮುಖ್ಯರಸ್ತೆ ಮಾರ್ಗವಾಗಿ ಮಾರುತಿನಗರ ಹೆಬ್ಬಾಗಿಲು ಮೂಲಕ ಮಾರುತಿ ನಗರ 40 ಅಡಿರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾ ವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯ ಭವನದವರೆಗೆ ಉತ್ಸವ ನಡೆಯಿತು.
ಜಿಲ್ಲಾ ವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ಅಧ್ಯಕ್ಷ ಟಿ.ಎಸ್.ಮೋಹನಕುಮಾರ್, ನವರತ್ನಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಸಿ.ಎನ್.ರಮೇಶ್, ಮುಖಂಡ ಎಸ್.ಪುಟ್ಟೀರಪ್ಪ, ಟಿ.ಹೆಚ್. ಜಯರಾಮ್, ಬ್ರಾಹ್ಮಣ ಮಹಾಸಭಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ವಿವಿಧ ಮುಖಂಡರು, ಶ್ರೀ ವೈಷ್ಣವ ಸಮಾಜ ಬಾಂಧವರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
