ಹಾಸನ: ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 65ಕ್ಕೂ ಹೆಚ್ಚಿನ ಕೃತಿ ರಚಿಸಿರುವ ಎಚ್.ಜೆ. ಲಕ್ಕಪ್ಪಗೌಡರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ, ಹಾಸನ ಜಿಲ್ಲಾ ಘಟಕ ಮತ್ತು ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘಗಳ ಸಹಯೋಗದಲ್ಲಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಎಚ್. ಜೆ. ಲಕ್ಕಪ್ಪಗೌಡರ ಬದುಕು ಮತ್ತು ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನ ಹಂಪಾಪುರದ ಪ್ರೊ.ಎಚ್.ಜೆ.ಲಕ್ಕಪ್ಪಗೌಡರು ಉನ್ನತ ಶಿಕ್ಷಣ ಪಡೆದು ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಪ್ರಾರಂಭಿಸಿದರು. ಬಳಿಕ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಏರುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕಡೆಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಶ್ರೀ ರಾಮಾಯಣ ದರ್ಶನಂ ಒಂದು ವಿಮರ್ಶಾತ್ಮಕ ಅಧ್ಯಯನ ಮಹಾಪ್ರಬಂಧಕ್ಕೆ ಪಿ.ಎಚ್. ಡಿ ಪದವಿ ಪಡೆದಿರುವ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದರು. ಕಥೆ, ಕವನ ಸಂಕಲನ, ಸಂಶೋಧನಾ ಗ್ರಂಥ, ಜೀವನ ಚರಿತ್ರೆ, ನಾಟಕಗಳು, ಜಾನಪದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಹಲವು ಪ್ರಶಸ್ತಿ ಹಾಗು ಗೌರವಗಳಿಗೆ ಭಾಜನರಾಗಿದ್ದಾರೆ. ಇವರ ಬದುಕು ಮತ್ತು ಬರಹ ಇಂದಿನ ಯುವ ಪೀಳಿಗೆಗೆ ಅನುಕರಣೆಯವಾಗಿದೆ ಎಂದು ತಿಳಿಸಿದರು.
ಸಕಲೇಶಪುರದ ಕವಯಿತ್ರಿ ಎಸ್.ಲಲಿತಾ ಅವರ ಅಂಕುರ ಕೃತಿ ಬಿಡುಗಡೆ ಮಾಡಲಾಯಿತು. ಸಾಹಿತಿ ಎಂ.ಜಿ. ಪರಮೇಶ್ ಕೃತಿ ಪರಿಚಯ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಿಷ್ಣು ಪ್ರಕಾಶ್, ಜಿಲ್ಲಾ ಬರಹಗಾರರ ಸಂಘದ ಅಧ್ಯಕ್ಷ ಸುಂದರೇಶ್ ಡಿ.ಉಡುವಾರೆ, ಸಾಹಿತಿಗಳಾದ ಎನ್. ಎಲ್.ಚನ್ನೇಗೌಡ, ಶೈಲಜಾ ಮಾತನಾಡಿದರು.
ಇದೆ ವೇಳೆ ಹಿರಿಯ ರಂಗ ಕಲಾವಿದರನ್ನು ಗೌರವಿಸಲಾಯಿತು. ಕದಂಬ ಸೇನೆ ಅರಕಲಗೂಡು ತಾ. ಅಧ್ಯಕ್ಷ ಬೇಕ್ರಿ ರಾಜೇಗೌಡ, ಉದ್ಯಮಿ ಯೋಗೇಶ್ ಕಾರ್ಗಿಲ್, ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಜಿ.ಜಿ. ಕೇಶವ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಎಲ್.ಜಗದೀಶ್, ಎ.ಜಿ. ರಾಮನಾಥ್, ರಂಗ ನಿರ್ದೇಶಕರಾದ ರಮೇಶ್ ಭಾಗವತರ್, ಸಿ. ಇ. ಕುಬೇರಯ್ಯ ಡಿ.ಬಿ. ಬಸವರಾಜು, ತಿಮ್ಮೇಗೌಡ, ಕೇಶವಮೂರ್ತಿ, ಮಿಲ್ಟ್ರಿ ಮಂಜುನಾಥ್, ಪುಟ್ಟಸ್ವಾಮಿಗೌಡ ಹೊಳೆನರಸೀಪುರ, ಸಿ.ಆರ್.ಸ್ವಾಮಿ ಉಪಸ್ಥಿತರಿದ್ದರು. ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘದ ಸದಸ್ಯರಿಂದ ರಂಗಗೀತೆಗಳ ಗಾಯನ ನಡೆಯಿತು.
