ಬೆಂಗಳೂರು, ಜು.18: ಕರ್ನಾಟಕ ಕಬಡ್ಡಿಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದ ಫ್ರಾಂಚೈಸಿ ಕಬಡ್ಡಿ ಲೀಗ್ – ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL) – ತನ್ನ ಚೊಚ್ಚಲ ಆಟಗಾರರ ಹರಾಜನ್ನು ಜುಲೈ 19ರಂದು ಬೆಂಗಳೂರಿನ ಕೋರಮಂಗಲ ಕ್ಲಬ್ನಲ್ಲಿ ಅದ್ಧೂರಿಯಾಗಿ ಆಯೋಜಿಸಿದೆ.
ರಾಜ್ಯದ ಕಬಡ್ಡಿಯ ಹೊಸ ಯುಗಕ್ಕೆ ನಾಂದಿ ಹಾಡಲಿರುವ ಈ ಹರಾಜು ಪ್ರಕ್ರಿಯೆ, ಗ್ರಾಮೀಣ ಪ್ರತಿಭೆಗಳಿಗೆ ಸುವರ್ಣಾವಕಾಶವನ್ನು ತಂದುಕೊಡಲಿದ್ದು, ರಾಜ್ಯದ ಕಬಡ್ಡಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮತ್ತು ಸಂಭ್ರಮವನ್ನು ಮೂಡಿಸಿದೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಚೊಚ್ಚಲ ಲೀಗ್ ಗೆ ಈ ಐತಿಹಾಸಿಕ ಹರಾಜಿನಲ್ಲಿ ಒಟ್ಟು 8 ಪ್ರಬಲ ಫ್ರಾಂಚೈಸಿ ತಂಡಗಳು ತಮ್ಮ ಕನಸಿನ ತಂಡ ಕಟ್ಟಲು ಅಣಿಯಾಗಿವೆ.
ಫ್ರಾಂಚೈಸಿ ಮತ್ತು ಮಾಲೀಕರು
* ಬೆಂಗಳೂರು ಬೈಸನ್ಸ್ – ಆನಂದ್ ಗೌಡ (ಮಾಲೀಕರು)
* ಮಂಗಳೂರು ಇಂಡಿಯನ್ಸ್ – ಮೊಹಿದ್ದೀನ್ ಬಾವಾ (ಮಾಲೀಕರು)
* ಮೈಸೂರು ಮಹಾಸೇನಾಸ್– ಪ್ರೊ. ದಯಾನಂದ್ ಸಾಗರ್ ಹಾಗೂ ಡಾ. ದಯಾನಂದ ಚಿಕ್ಕಣ್ಣ (ಮಾಲೀಕರು )
* ವಿಜಯಪುರ ಲಯನ್ಸ್ – ಲೋಹಿತ್ ಶೆಟ್ಟಿ (ಮಾಲೀಕರು)
* ಬೆಳಗಾವಿ ಬುಲ್ಸ್ – ಹಾಲಪ್ಪ ಹುಕ್ಕೇರಿ (ಮಾಲೀಕರು)
* ಚಾಲುಕ್ಯ ಸೇನೆ (ಬಾಗಲಕೋಟೆ) – ಎಸ್. ಆರ್. ಪಾಟೀಲ್ (ಮಾಲೀಕರು)
* ಉತ್ತರ ಕನ್ನಡ ಸ್ಟಾಲಿಯನ್ಸ್ – ಮಾಲೀಕರು (ವಿನಾಯಕ್ ಘೋಷ್)
* ಹೊಯ್ಸಳ ಎಂಪೈರ್ (ಹಾಸನ) – ಜನಾರ್ಧನ ರೆಡ್ಡಿ ಹಾಗೂ ಕಾವೇರಪ್ಪ (ಮಾಲೀಕರು )
ಹರಾಜಿನಲ್ಲಿ ಪ್ರತಿ ಫ್ರಾಂಚೈಸಿಯು ಮಾಲೀಕರು, ಕೋಚ್, ಮ್ಯಾನೇಜರ್ ಹಾಗೂ ಮೆಂಟರ್ ಗಳು ಸೇರಿದಂತೆ ಗರಿಷ್ಠ 6 ಸದಸ್ಯರೊಂದಿಗೆ ಪಾಲ್ಗೊಳ್ಳಲು ಅವಕಾಶವಿದೆ. ಫ್ರಾಂಚೈಸಿಯು ತಮ್ಮ ತಂತ್ರಗಾರಿಕೆ ರೂಪಿಸಿ ಅತ್ಯುತ್ತಮ ಪ್ರತಿಭೆಗಳ ಆಯ್ಕೆಯೊಂದಿಗೆ ಬಲಿಷ್ಠ ತಂಡವನ್ನು ತಂಡವನ್ನು ಕಟ್ಟಲಿವೆ. ಪ್ರತಿ ಫ್ರಾಂಚೈಸಿಯು ಆಟಗಾರರನ್ನು ಖರೀದಿಸಲು ಗರಿಷ್ಠ 10 ಲಕ್ಷ ರೂಪಾಯಿ ವ್ಯಯಿಸಬಹುದಾಗಿದೆ. ಪ್ರತಿಯೊಂದು ತಂಡವೂ ಕನಿಷ್ಟ 14 ಆಟಗಾರರನ್ನು ಖರೀದಿಸಬೇಕಾಗಿದೆ.
ಸಮಾನ ಬಜೆಟ್ ಇರುವುದರಿಂದ ಯಾವ ತಂಡ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡುತ್ತದೆ ಎಂಬುದು ಕೋಚ್ಗಳ ಯೋಜನೆ, ಮಾಲೀಕರ ನಿರ್ಧಾರ ಮತ್ತು ಹರಾಜಿನ ತಂತ್ರದ ಮೇಲೆ ಅವಲಂಬಿತವಾಗಿರಲಿದೆ. ಇದು ಹರಾಜು ಪ್ರಕ್ರಿಯೆಯನ್ನು ರೋಚಕಗೊಳಿಸಲಿದೆ.
ಪ್ರತಿಭೆಗಳ ವೇದಿಕೆ ಕೆಕೆಪಿಎಲ್
ಗ್ರಾಮೀಣ ಪ್ರದೇಶಗಳಲ್ಲಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದ ನೂರಾರು ಯುವ ಕಬಡ್ಡಿ ಆಟಗಾರರಿಗೆ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ಮೂಲಕ ರಾಜ್ಯಮಟ್ಟದ ವೇದಿಕೆ ಕಲ್ಪಿಸಲಾಗುತ್ತಿದೆ. ಇದುವರೆಗೆ ಅವಕಾಶಕ್ಕಾಗಿ ಕಾಯುತ್ತಿದ್ದ ಗ್ರಾಮೀಣ ಪ್ರತಿಭೆಗಳು ಈಗ ವೃತ್ತಿಪರ ಫ್ರಾಂಚೈಸಿ ತಂಡಗಳ ಪರ ಆಡಲು, ತಮ್ಮ ಸಾಮರ್ಥ್ಯವನ್ನು ರಾಜ್ಯದ ಮುಂದೆ ಸಾಬೀತುಪಡಿಸಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಈ ಲೀಗ್ ನೆರವಾಗಲಿದೆ.
ಕರ್ನಾಟಕದ ಗ್ರಾಮೀಣ ಪ್ರತಿಭೆಗಳಿಗೆ ಹೊಸ ಬದುಕು, ಹೊಸ ವೇದಿಕೆ ಮತ್ತು ಹೊಸ ಭರವಸೆಯನ್ನು ಹುಟ್ಟುಹಾಕಿರುವ ಎಲ್ಲಾ ಫ್ರಾಂಚೈಸಿ ಮಾಲೀಕರ ಕ್ರೀಡಾಪ್ರೇಮ ನಿಜಕ್ಕೂ ಶ್ಲಾಘನೀಯ ಎನಿಸಿದೆ.
