ಕದಂಬ ಸೈನ್ಯ, ಕನ್ನಡ ಸಂಘಟನೆಯು ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಹೊಂದಿ ಕನ್ನಡ ನಾಡು ನುಡಿ ಉಳಿವಿನ ಜಾಗೃತಿ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದೆ. ಸಾಹಿತ್ಯ ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಕನ್ನಡ ನಾಡು ನುಡಿ ಸೇವೆಯಲ್ಲಿ ತನ್ನದೇ ಪಾತ್ರ ನಿರ್ವಹಿಸುತ್ತಾ ಬಂದಿದೆ. ಇದೇಗ 2026ರ ಆಗಸ್ಟ್ 8ರಂದು ಶನಿವಾರ ಬೆಳಿಗ್ಗೆ 10ಕ್ಕೆ ಬಾದಾಮಿಯಲ್ಲಿ ಚಾಲುಕ್ಯ ವರಸಿರಿ ಕೃತಿ ಬಿಡುಗಡೆ ಮತ್ತು ಸಾಹಿತ್ಯ ಮತ್ತು ಸಮಾಜ ಸೇವಾ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಚಾಲುಕ್ಯ ವಂಶಜರ ದಕ್ಷಿಣ ಪಥೇಶ್ವರ ಮಹಾರಾಷ್ಪ್ರ ಕ್ಷತ್ರಿಯ ದೊರೆ ಇಮ್ಮಡಿ ಪುಲಿಕೇಶಿಯ ನೆನಪಿಗೆ ಚಾಲುಕ್ಯ ವರಸಿರಿ ಕೃತಿಯನ್ನು ಮಂಡ್ಯದ ಲೇಖಕರು ಡಾ.ಪ್ರದೀಪ್ ಕುಮಾರ್ ಹೆಬ್ರಿ ಬರೆದಿದ್ದು ಕದಂಬ ಸೈನ್ಯ ಕನ್ನಡ ಸಂಘಟನೆಯು ಕೃತಿಯನ್ನು ಪ್ರಕಟಿಸಿದೆ ಎಂದು ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್ ತಿಳಿಸಿದ್ದಾರೆ.
ಚಾಲುಕ್ಯ ದೊರೆಗಳು ಇನ್ನೂರು ವಸಂತಗಳ ಕಾಲ ವೈಭವದಿಂದ ಸಾಮ್ರಾಜ್ಯವನ್ನಾಳಿ ದಕ್ಷಿಣದ ಕಾವೇರಿಯಿಂದ ಉತ್ತರದ ನರ್ಮದೆ ನದಿಯವರೆಗೆ 99 ಸಾವಿರ ಹಳ್ಳಿಗಳಿಗೆ ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಕರ್ನಾಟಕ ಇತಿಹಾಸದಲ್ಲಿ ಬಾದಾಮಿ ಚಾಲುಕ್ಯರ ಅವಧಿಯನ್ನು ಸುವರ್ಣಯುಗವೆಂದೇ ಗುರುತಿಸಲಾಗಿದೆ. ಚಾಲುಕ್ಯರು ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹುಲಿಗೆಮ್ಮನಕೊಳ್ಳ, ಮಹಾಕೂಟ, ನಾಗನಾಥಕೊಳ್ಳ ಸ್ಮಾರಕಗಳಲ್ಲಿ ಅರಳಿಸಿದ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳು ಕಣ್ಮನ ಸೆಳೆಯುತ್ತಿವೆ. ಶಿಲ್ಪಕಲೆ, ಸಂಗೀತ, ನಾಟ್ಯಕಲೆ ವಿಶ್ವಕ್ಕೆ ಹಿರಿಮೆಯಾಗಿವೆ. ಕನ್ನಡ ಭಾಷೆಗೆ ಮಹತ್ವ ನೀಡಿರುವುದು ಇಲ್ಲಿನ ಶಾಸನಗಳು ಸಾಕ್ಷಿಯಾಗಿವೆ. ಗತವೈಭವದ ಇತಿಹಾಸದ ಅಧ್ಯಯನಕ್ಕೆ ಇತಿಹಾಸ ವಿದ್ವಾಂಸರನ್ನು ಆಹ್ವಾನಿಸುತ್ತವೆ. ಚಾಲುಕ್ಯ ವರಸಿರಿ ಗ್ರಂಥವು ಸಹೃದಯ ಓದುಗರ ಕೈ ಸೇರಲಿ ಎಂದು ಬಾದಾಮಿಯ ಪತ್ರಕರ್ತರು ನಿವೃತ್ತ ಮುಖ್ಯ ಶಿಕ್ಷಕರು ಎಸ್.ಎಂ.ಹಿರೇಮಠ ಶುಭ ಹಾರೈಸಿದ್ದಾರೆ.
ಇಮ್ಮಡಿ ಪುಲಿಕೇಶಿ – ಧೈರ್ಯ, ಆತ್ಮವಿಶ್ವಾಸ ಮತ್ತು ದೇಶಾಭಿಮಾನದ ಪ್ರತೀಕ
ಭಾರತದ ಇತಿಹಾಸದಲ್ಲಿ ತಮ್ಮ ಶೌರ್ಯ, ಪರಾಕ್ರಮ ಮತ್ತು ಅಪ್ರತಿಮ ನಾಯಕತ್ವದ ಮೂಲಕ ಅಜರಾಮರರಾದ ಅನೇಕ ಮಹನೀಯರಿದ್ದಾರೆ. ಅಂತಹ ಮಹಾನ್ ಚಕ್ರವರ್ತಿಗಳಲ್ಲಿ ಪ್ರಮುಖ ಸ್ಥಾನ ಪಡೆದವರು ಚಾಲುಕ್ಯ ಸಾಮ್ರಾಜ್ಯದ ಪ್ರಸಿದ್ಧ ಅರಸ ಇಮ್ಮಡಿ ಪುಲಿಕೇಶಿ. ಅವನ ಜೀವನವು ಕೇವಲ ಒಬ್ಬ ರಾಜನ ಇತಿಹಾಸವಲ್ಲ; ಅದು ಧೈರ್ಯ, ಆತ್ಮವಿಶ್ವಾಸ, ದೇಶಪ್ರೇಮ ಮತ್ತು ಉತ್ತಮ ಆಡಳಿತದ ಆದರ್ಶಕ್ಕೆ ಮಾದರಿ. ಇಂದಿನ ಯುವಜನತೆ ಮತ್ತು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅವನ ಜೀವನ ಸ್ಪೂರ್ತಿಯ ಚಿಲುಮೆ
ಇಮ್ಮಡಿ ಪುಲಿಕೇಶಿ
ಕ್ರಿ.ಶ. 610 ರಿಂದ 642 ರವರೆಗೆ ಚಾಲುಕ್ಯ ಸಾಮ್ರಾಜ್ಯವನ್ನು ಆಳಿದ ಮಹಾನ್ ದೊರೆ. ಅವನ ಆಳ್ವಿಕೆಯ ಅವಧಿಯಲ್ಲಿ ದಕ್ಷಿಣ ಭಾರತವು ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಅತ್ಯುನ್ನತ ಸ್ಥಾನ ಪಡೆದುಕೊಂಡಿತು. ಅವನ ರಾಜಧಾನಿಯಾಗಿದ್ದ ಬಾದಾಮಿ ಯು ವೈಭವದ ಕೇಂದ್ರವಾಗಿತ್ತು. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರ ಜೊತೆಗೆ ಅದನ್ನು ಸಮರ್ಥವಾಗಿ ನಿರ್ವಹಿಸುವಲ್ಲಿಯೂ ಅವನು ಯಶಸ್ವಿಯಾಗಿದ್ದನು.
ಪುಲಿಕೇಶಿ ಜೀವನ ಚರಿತ್ರೆ ಓದಿದಾಗ ಅವನ ಅಚಲವಾದ ಆತ್ಮವಿಶ್ವಾಸ. ಆರಂಭದಲ್ಲಿ ಅವನು ಎದುರಿಸಿದ ಅನೇಕ ರಾಜಕೀಯ ಸವಾಲುಗಳು ಮತ್ತು ಶತ್ರುಗಳ ವಿರೋಧ ಎದುರಾದರೂ ಅವನು ಎಂದಿಗೂ ಹೆಸರಲಿಲ್ಲ. ಕಷ್ಟಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡವನು ತನ್ನ ಸಾಮ್ರಾಜ್ಯವನ್ನು ಬಲಿಷ್ಠಗೊಳಿಸಿದವನು ನಾಯಕತ್ವವೆಂದರೆ ಅಧಿಕಾರ ಹೊಂದುವುದಲ್ಲ, ಬದಲಿಗೆ ಸಂಕಷ್ಟದ ಸಮಯದಲ್ಲಿ ಜನರಿಗೆ ಧೈರ್ಯ ತುಂಬಿ ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದಾಗಿದೆ ಎಂಬುದನ್ನು ತೋರಿಸಿಕೊಟ್ಟವನು
ಇಮ್ಮಡಿ ಪುಲಿಕೇಶಿಯ ದೇಶಾಭಿಮಾನ ಮತ್ತು ಸ್ವಾಭಿಮಾನ ಅವನ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಅಂಶ. ಉತ್ತರ ಭಾರತದ ಪ್ರಬಲ ಸಾಮ್ರಾಟನಾಗಿದ್ದ ಹರ್ಷವರ್ಧನ ದಕ್ಷಿಣದತ್ತ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಮುಂದಾದಾಗ, ಪುಲಿಕೇಶಿಯ ಧೈರ್ಯದಿಂದ ಎದುರಿಸಿ ನರ್ಮದಾ ನದಿಯ ತೀರದಲ್ಲಿ ಅವನನ್ನು ಹಿಮ್ಮೆಟ್ಟಿಸಿದ್ದು ಇತಿಹಾಸ. ಈ ವಿಜಯವು ಕೇವಲ ಒಂದು ಯುದ್ಧದ ಗೆಲುವಾಗಿರಲಿಲ್ಲ; ಅದು ದಕ್ಷಿಣ ಭಾರತದ ಸ್ವಾಭಿಮಾನ ಮತ್ತು ಶಕ್ತಿಯ ಪ್ರತೀಕ.
ಒಬ್ಬ ಉತ್ತಮ ಆಡಳಿತಗಾರನಾಗಿ ಪುಲಿಕೇಶಿ ಪ್ರಜೆಗಳ ಕಲ್ಯಾಣಕ್ಕೆ ಹೆಚ್ಚಿನ ಮಹತ್ವ ನೀಡಿದವನು.ಅವನ ಆಡಳಿತದಲ್ಲಿ ವ್ಯಾಪಾರ, ಕೃಷಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದವು. ವಿವಿಧ ಧರ್ಮಗಳು ಮತ್ತು ಸಂಸ್ಕೃತಿಗಳಿಗೆ ಸಮಾನ ಗೌರವ ನೀಡುವ ಮೂಲಕ ಅವರು ಸಹಿಷ್ಣುತೆಯ ಮೌಲ್ಯವನ್ನು ಎತ್ತಿಹಿಡಿದನು. ಅವನ ಆಳ್ವಿಕೆಯ ಕಾಲದಲ್ಲಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬಂದು ಇಲ್ಲಿನ ಸಮೃದ್ಧಿಯನ್ನು ಪ್ರಶಂಸಿಸಿದ್ದಾರೆ ಎಂಬುದು ಇತಿಹಾಸದ ಹೆಮ್ಮೆಯ ಸಂಗತಿ.
ಇಮ್ಮಡಿ ಪುಲಿಕೇಶಿಯ ಜೀವನವು ಇಂದಿನ ಸಮಾಜಕ್ಕೂ ಮಹತ್ವದ ಸಂದೇಶವನ್ನು ನೀಡುತ್ತದೆ. ಜೀವನದಲ್ಲಿ ಸವಾಲುಗಳು, ಸಮಸ್ಯೆಗಳು ಮತ್ತು ವಿಘ್ನಗಳು ಬರುವುದು ಸಹಜ. ಆದರೆ ಅವುಗಳನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನಾವು ಬೆಳೆಸಿಕೊಳ್ಳಬೇಕು. ಸೋಲಿನ ಭಯದಿಂದ ಹಿಂದೆ ಸರಿಯದೆ, ದೃಢ ಸಂಕಲ್ಪದಿಂದ ಮುಂದೆ ಸಾಗಿದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಇದೇ ಸಂದೇಶವನ್ನು ಪುಲಿಕೇಶಿಯವರ ಜೀವನ ನಮಗೆ ಕಲಿಸುತ್ತದೆ.
ಇಂದಿನ ಯುವಪೀಳಿಗೆಯು ಇಮ್ಮಡಿ ಪುಲಿಕೇಶಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ದೇಶದ ಅಭಿವೃದ್ಧಿ, ಸಮಾಜದ ಕಲ್ಯಾಣ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು. ಆತ್ಮವಿಶ್ವಾಸ, ಶಿಸ್ತು, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆ ಎಂಬ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಉತ್ತಮ ನಾಗರಿಕರಾಗಲು ಸಾಧ್ಯ ಎಂಬುದು ಕೃತಿಯನ್ನು ಓದಿದಾಗ ತಿಳಿಯುತ್ತದೆ.
ಇಮ್ಮಡಿ ಪುಲಿಕೇಶಿಯ ಜೀವನ ನಮಗೆ ಧೈರ್ಯ, ಆತ್ಮವಿಶ್ವಾಸ ಮತ್ತು ದೇಶಾಭಿಮಾನವನ್ನು ಕಲಿಸುತ್ತದೆ. ಕಷ್ಟಗಳು ಬಂದರೂ ಹೆದರದೇ ನಿಂತು, ನಮ್ಮ ಸಂಸ್ಕೃತಿ ಮತ್ತು ಗೌರವವನ್ನು ಕಾಪಾಡುವ ದೃಢ ಸಂಕಲ್ಪವೇ ನಿಜವಾದ ನಾಯಕತ್ವದ ಮುಖ್ಯಲಕ್ಷಣ ಎಂಬ ಮಾತಿಗೆ ಅವನ ಜೀವನವೇ ಜೀವಂತ ನಿದರ್ಶನ. ಅವನ ಆದರ್ಶಗಳು ಶತಮಾನಗಳು ಕಳೆದರೂ ಮರೆಯಾಗುವುದಿಲ್ಲ. ಇಮ್ಮಡಿ ಪುಲಿಕೇಶಿ ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆಯ ಬೆಳಕು ಎಂದು ಬೇಕ್ರಿ ರಮೇಶ್ ತಿಳಿಸಿ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದ್ದಾರೆ.
